ADVERTISEMENT

ಕೋವಿಡ್‌ ಸಾವು: ₹ 1 ಲಕ್ಷ ಪರಿಹಾರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಸಚಿವ ಡಾ.ಕೆ.ಸುಧಾಕರ್ ನೆರವು

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 3:57 IST
Last Updated 14 ಜೂನ್ 2021, 3:57 IST
ಬಡವರಿಗೆ ಸಚಿವ ಡಾ.ಕೆ.ಸುಧಾಕರ್ ಆಹಾರದ ಕಿಟ್‌ಗಳನ್ನು ವಿತರಿಸಿದರು
ಬಡವರಿಗೆ ಸಚಿವ ಡಾ.ಕೆ.ಸುಧಾಕರ್ ಆಹಾರದ ಕಿಟ್‌ಗಳನ್ನು ವಿತರಿಸಿದರು   

ಚಿಕ್ಕಬಳ್ಳಾಪುರ: ಕೋವಿಡ್‌ನ ಮೊದಲ ಮತ್ತು ಎರಡನೇ ಅಲೆಯಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ₹ 1 ಲಕ್ಷ ಪರಿಹಾರ ನೀಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಮಾತ್ರ ಸಾಯಿ ಕೃಷ್ಣ ಚಾರಿಟೇಬಲ್ ಟ್ರಸ್ಟ್‌ ಮೂಲಕ ಈ ನೆರವುನೀಡಲಾಗುತ್ತಿದೆ.

ಕಳೆದ ವರ್ಷದ ಲಾಕ್‌ಡೌನ್ ವೇಳೆಯೂ ಜನರಿಗೆ ನೆರವು ನೀಡಲಾಗಿತ್ತು. ಇಂದಿಗೂ ಹಳ್ಳಿಗಳಲ್ಲಿ ಬಡತನವಿದೆ. ಈ ಸಂದರ್ಭದಲ್ಲಿ ಅವರ ಜತೆ ನಿಂತುಕೊಳ್ಳುವುದು ನಮ್ಮ ಕರ್ತವ್ಯ. ನಾನು ಮತ್ತು ನಮ್ಮ ಎಲ್ಲ ಮುಖಂಡರು ಅವರಿಗೆ ಸಹಕಾರ ನೀಡುತ್ತೇವೆ. ಉಚಿತವಾಗಿ ಪ್ರತಿ ಮನೆಗೂ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ಕಳೆದ ವರ್ಷವೂ ನೀಡಿದ್ದೇವೆ. ಈ ವರ್ಷ ಸಹ ಲಾಕ್‌ಡೌನ್ ಆಗಿರುವುದರಿಂದ ಆಹಾರದ ಕಿಟ್ ಕೊಡುತ್ತಿದ್ದೇವೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

ದುರದೃಷ್ಟದಿಂದ ಕೋವಿಡ್‌ನಿಂದ ಸಾವುಗಳಾಗಿವೆ. ಕೆಲವು ಸಚಿವ ಮಿತ್ರರು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ನೆರವು ನೀಡುತ್ತಿದ್ದಾರೆ. ಆ ಪ್ರಕಾರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೃತಪಟ್ಟವರ ಕುಟುಂಬಗಳ ಜತೆ ನಾವು ಇದ್ದೇವೆ. ಅವರ ಮನೆಗಳಿಗೆ ತೆರಳಿ ಸಾಂತ್ವನ ಸಹ ಹೇಳಲಾಗುತ್ತಿದೆ. ಜತೆಗೆ ₹ 1 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ADVERTISEMENT

ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ವರ್ಷ 75 ಸಾವಿರ ಆಹಾರದ ಕಿಟ್‌ಗಳನ್ನು ಜನರಿಗೆ ನೀಡಿದ್ದೆವು. ಈ ಬಾರಿ ಕ್ಷೇತ್ರದಲ್ಲಿ 76 ಸಾವಿರ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.

ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯ ಮಿನಕನಗುರ್ಕಿ, ಜರಬಂಡಹಳ್ಳಿ, ಗೌಡಗೆರೆ, ಹೊನ್ನಪ್ಪನಹಳ್ಳಿ ಮತ್ತಿತರರ ಗ್ರಾಮಗಳಲ್ಲಿನ ಬಡವರು ಮತ್ತು ನಿರ್ಗತಿಕರಿಗೆ ಸಾಯಿ ಕೃಷ್ಣ ಚಾರಿಟೇಬಲ್ ಟ್ರಸ್ಟ್‌ನಿಂದ ಸಚಿವರು ಆಹಾರದ ಕಿಟ್‌ಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.