ADVERTISEMENT

ಸಚಿವ ಮಾಧುಸ್ವಾಮಿ ವಜಾಕ್ಕೆ ಆಗ್ರಹ

ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಮುಖಂಡರು

​ಪ್ರಜಾವಾಣಿ ವಾರ್ತೆ
Published 21 ಮೇ 2020, 10:07 IST
Last Updated 21 ಮೇ 2020, 10:07 IST
ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ಕೆರೆ ಒತ್ತುವರಿಯ ಬಗ್ಗೆ ಮನವಿ ಸಲ್ಲಿಸಲು ಹೋದ ರೈತ ಮಹಿಳೆಯ ಮೇಲೆ ದರ್ಪ ತೋರಿಸಿ ಅಸಂವಿಧಾನಿಕ ಪದಬಳಕೆ ಮಾಡಿರುವ ಕಾನೂನು ಸಚಿವ ಮಾಧುಸ್ವಾಮಿ ಅವರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್‌ ಮುಖಂಡರು ಆಗ್ರಹಿಸಿದರು.

ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ ಮುಖಂಡರು ಮಾಧುಸ್ವಾಮಿ ಅವರ ತಲೆದಂಡಕ್ಕೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ’ಕೋಲಾರ ಜಿಲ್ಲೆಯ ಅಗ್ರಹಾರ ಕೆರೆಗೆ ಬುಧವಾರ ಎಚ್.ಎನ್.ವ್ಯಾಲಿ ಯೋಜನೆ ಅನುಷ್ಠಾನ ವೀಕ್ಷಣೆಗೆ ಬಂದಿದ್ದ ಮಾಧುಸ್ವಾಮಿ ಅವರು, ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಅವರಿಗೆ ಅವಮಾನ ಮಾಡಿರುವುದು ಶೋಭೆ ತರುವ ವಿಚಾರವಲ್ಲ‘ ಎಂದು ಹೇಳಿದರು.

ADVERTISEMENT

’ಇದರಿಂದ ಬಿಜೆಪಿ ಸಂಸ್ಕೃತಿಯ ಅಸಲಿ ಮುಖವಾಡ ಮತ್ತೊಮ್ಮೆ ಹೊರಬಿದ್ದಿದೆ. ವಿಧಾನಸಭೆಯಲ್ಲಿ ತಾನೊಬ್ಬನೇ ಸಾಚಾ ಎಂದು ಏರು ಧ್ವನಿಯಲ್ಲಿ ಅಬ್ಬರಿಸುವ ಮಾಧುಸ್ವಾಮಿ ಅವರು ಇಡೀ ರೈತ ಸಮುದಾಯ ಹಾಗೂ ಮಹಿಳೆಯರಿಗೆ ಅವಮಾನ ಮಾಡಿದ್ದಕ್ಕೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು‘ ಎಂದು ಆಗ್ರಹಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಕಾರ್ಯದರ್ಶಿ ನಾರಾಯಣಸ್ವಾಮಿ, ಎನ್‌ಎಸ್‌ಯುಐ ರಾಜ್ಯ ಘಟಕದ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಕಾಂಗ್ರೆಸ್ ಜಿ್ಲ್ಲಾ ಘಟಕದ ಕಾರ್ಯದರ್ಶಿ ಕೃಷ್ಣ, ಮುಖಂಡರಾದ ಕುಬೇರ್ ಅಚ್ಚು, ನಾರಾಯಣಸ್ವಾಮಿ, ವೇಣುಗೋಪಾಲ್, ವೆಂಕಟೇಶ್, ಅನಿಲ್,ಮಹಮ್ಮದ್ ಹಮೀಮ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.