ADVERTISEMENT

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿಗೆ ಮತ; ಆಣೆ ಪ್ರಮಾಣದ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 12:21 IST
Last Updated 8 ಡಿಸೆಂಬರ್ 2021, 12:21 IST
ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಅವರ ಮನೆ ಬಳಿ ಸೇರಿದ್ದ ಮತದಾರರು, ಬಿಜೆಪಿ ಮುಖಂಡರು
ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಅವರ ಮನೆ ಬಳಿ ಸೇರಿದ್ದ ಮತದಾರರು, ಬಿಜೆಪಿ ಮುಖಂಡರು   

ಚಿಕ್ಕಬಳ್ಳಾಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ್‌ಗೆ ಮತ ನೀಡುವುದಾಗಿ ದೇವರ ಭಾವಚಿತ್ರಗಳ ಮೇಲೆ ಕೈಯಿಟ್ಟು ಮತದಾರರಿಂದ ಆಣೆ ಪ್ರಮಾಣ ಮಾಡಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಗ್ರಾಮದಲ್ಲಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಅವರ ತೋಟದ ಮನೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ರೀತಿ ಆಣೆ ಪ್ರಮಾಣ ಮಾಡಿಸಲಾಗಿದೆ.

ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಈ ಸಭೆಗೆ ಆಹ್ವಾನಿಸಲಾಗಿತ್ತು. ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ಸದಸ್ಯತ್ವ ಪ್ರಮಾಣವನ್ನು ತೆಗೆದುಕೊಂಡು ಈ ಸಭೆಗೆ ಹೋಗಿದ್ದರು. ಸಭೆಯ ನಂತರ ಉಡುಗೊರೆಯ ಲಕೋಟೆಗಳನ್ನು ನೀಡಲಾಗಿದೆ ಎನ್ನಲಾಗುತ್ತಿದೆ.

ADVERTISEMENT
ಆಣೆ ಮಾಡಲು ಫೋಟೊ ಮುಂದೆ ನಿಂತಿರುವ ಮಹಿಳಾ ಮತದಾರರು

ಮಂಗಳವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್, ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ, ಚೇಳೂರು, ಬಿಳ್ಳೂರು ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದರು.

ಜಿಲ್ಲೆಯಲ್ಲಿ ಒಬ್ಬ ಮತದಾರರಿಗೆ ₹ 75 ಸಾವಿರದಿಂದ ₹ 1 ಲಕ್ಷದವರೆಗೆ ಹಣ ನೀಡಲಾಗುತ್ತಿದೆ. ಮೊದಲಿಗೆ ರೆಸಾರ್ಟ್‌ಗಳಲ್ಲಿ ಮತದಾರರ ಸಭೆ ನಡೆಯುತ್ತದೆ. ನಂತರ ಮತದಾರರ ಜತೆ ಆಯಾ ಪಕ್ಷದ ಅಭ್ಯರ್ಥಿ ಅಥವಾ ಆಯಾ ಪಕ್ಷದ ಮುಖಂಡರು ದೇಗುಲಗಳಿಗೆ ತೆರಳಿ ಹಣ ನೀಡುತ್ತಿದ್ದಾರೆ ಎನ್ನುವ ಚರ್ಚೆಗಳು ಬಿರುಸಾಗಿವೆ. ಪ್ರಸಾದದ ರೂಪದಲ್ಲಿ ತಿರುಪತಿಯ ಲಡ್ಡು ಸಹ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.