ಗುಡಿಬಂಡೆ: ಜಿಲ್ಲೆಯಲ್ಲಿ ಸುಮಾರು ಶೇ 16ರಿಂದ 18ರಷ್ಟು ಅರಣ್ಯದ ಕೊರತೆ ಇದೆ ಎಂದು ಸರ್ಕಾರಿ ಅಂಕಿ ಅಂಶಗಳೇ ಹೇಳುತ್ತವೆ. ಆದರೆ ವಾಸ್ತವ ಇನ್ನೂ ಭಿನ್ನವಾಗಿದ್ದು, ಬಹುಪಾಲು ಅರಣ್ಯ ನೀಲಗಿರಿಯಿಂದ ಆವೃತವಾಗಿದೆ ಎಂದು ‘ಉಸಿರಿಗಾಗಿ ಹಸಿರು’ ತಂಡದ ಕಾರ್ಯಕಾರಿ ಟ್ರಸ್ಟಿ ಎನ್.ಗಂಗಾಧರರೆಡ್ಡಿ ಹೇಳಿದರು.
ತಾಲ್ಲೂಕಿನ ಕಮ್ಮಡಿಕೆ ಗ್ರಾಮದಲ್ಲಿ ಉಸಿರಿಗಾಗಿ ಹಸಿರು ತಂಡ, ಕಮ್ಮಡಿಕೆ ಯುವಜನರ ಸಂಘ ಹಾಗೂ ಬೆಂಗಳೂರಿನ ರೋಟರಿ ಎಬಿಲಿಟೀಸ್ ಸಂಸ್ಥೆ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀಲಗಿರಿಯಿಂದಾಗಿ ಜೀವವೈವಿಧ್ಯ ಸರ್ವನಾಶವಾಗಿದೆ. ಬೆಟ್ಟಗುಡ್ಡಗಳಲ್ಲಿ ಬೆಳೆದಿರುವ ಕುರುಚಲ ಗಿಡಗಳನ್ನು ಅರಣ್ಯವೆಂದು ಘೋಷಿಸಿರುವುದು ದುರಂತ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಶಾಲೆ ಆವರಣದಿಂದ ಬಯಲಾಂಜನೇಯ ಸ್ವಾಮಿ ದೇಗುಲದವರೆಗೆ ಸುಮಾರು 1.5 ಕಿ.ಮೀ ಉದ್ದದ ರಸ್ತೆ ಬದಿಯಲ್ಲಿ ಹೆಬ್ಬೇವು, ಸಿಲ್ವರ್, ಹೊಂಗೆ, ನೇರಳೆ ಬೆಟ್ಟದ ನೆಲ್ಲಿ, ಹುಣಸೆ ಸೇರಿದಂತೆ ವಿವಿಧ ಬಗೆಯ 500 ಸಸಿಗಳನ್ನು ನೆಟ್ಟರು.
ಗ್ರಾಮದ ಯುವಜನ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯರು ಗಿಡಗಳನ್ನು ನೆಟ್ಟು, ಪೋಷಿಸಿ ಸಂರಕ್ಷಿಸುವ ಪ್ರತಿಜ್ಙಾ ವಿಧಿ ಸ್ವೀಕರಿಸಿದರು. ರಿಜುವಿನೇಟ್ ಇಂಡಿಯಾ ಮೂವ್ಮೆಂಟ್ (ರಿಮ್) ಸಂಸ್ಥೆ ಸಹಯೋಗದಲ್ಲಿ ಉಸಿರಿಗಾಗಿ ಹಸಿರು ಸಂಸ್ಥೆಯು 15 ಬಡ ಕುಟುಂಬಕ್ಕೆ ದಿನಸಿ ಕಿಟ್ ವಿತರಿಸಿತು.
ತಾ.ಪಂ. ಉಪಾಧ್ಯಕ್ಷ ಬೈರಾರೆಡ್ಡಿ, ಉಸಿರಿಗಾಗಿ ಹಸಿರು ತಂಡದ ಮಧುಕುಮಾರ್, ಅಜಯ್, ವಸಂತ್, ಕೀರ್ತಿಕುಮಾರ್, ಜಗದೀಶ್, ಸ್ವಾಮಿ, ಸುಧಾಕರ, ರಾಹುಲ್, ಚಂದನಾ, ಪ್ರೇರಣಾ, ಸಂಜನಾ ಗ್ರಾಮಸ್ಥರಾದ ವಿನೋದ್, ಶ್ರೀನಾಥ, ಮುರಳಿ, ಅಮರೇಶ್, ಹರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.