ಚಿಂತಾಮಣಿ: ತಾಲ್ಲೂಕಿನ ಮುರುಗಮಲೆಯಲ್ಲಿ ಸೋಮವಾರ ನಡೆದ ಅಮ್ಮಾಜಾನ್ ಬಾವಾಜಾನ್ ದರ್ಗಾದ ಉರುಸ್ನಲ್ಲಿ ವಿವಿಧ ರಾಜ್ಯಗಳಿಂದ ಬಂದಿದ್ದ ಲಿಂಗತ್ವ ಅಲ್ಪಸಂಖ್ಯಾತರು ದರ್ಗಾಕ್ಕೆ ವಿಶೇಷ ಚಾದರ್ ಹೊದಿಸಿ, ಗಂಧದ ಅರ್ಪಣೆ ಮಾಡಿದರು.
ಲಿಂಗತ್ವ ಅಲ್ಪಸಂಖ್ಯಾತರ ಮುಖ್ಯಸ್ಥೆ ಮುಂಬೈ ಗುಲಾಂ ಮೊಯಿನುದ್ದೀನ್ ಅಮ್ಮಾಜಿ ಗಂಧದ ಉತ್ಸವದ ನೇತೃತ್ವ ವಹಿಸಿದ್ದರು.
ಗಂಧೋತ್ಸವದ 2ನೇ ದಿನವಾದ ಶನಿವಾರವೂ ದರ್ಗಾದಲ್ಲಿ ವಿಶೇಷ ಪೂಜೆ, ಅನ್ನದಾನ, ವಸ್ತ್ರದಾನ ಕಾರ್ಯಕ್ರಮಗಳು ನಡೆದವು. ಡೋಲು ಬಾರಿಸುವುದು, ಹಾಡುವುದು, ನೃತ್ಯದ ಕಾರ್ಯಕ್ರಮಗಳು ಜನರಿಗೆ ಮನೋರಂಜನೆ ಒದಗಿಸಿದವು.
ಲಿಂಗತ್ವ ಅಲ್ಪಸಂಖ್ಯಾತರ ತಂಡದ ಗುಲಾಂ ಮೊಯಿನುದ್ದೀನ್ ಮಾತನಾಡಿ, ಸುಮಾರು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರೆಲ್ಲರೂ ಒಟ್ಟುಗೂಡಿ ಅಮ್ಮಾಜಾನ್ ಬಾಬಾಜಾನ್ ಅವರ ದರ್ಗಾಗೆ ಚಾದರ್ ಅರ್ಪಿಸಿ ಗಂಧ ಅರ್ಪಣೆ ಮಾಡುತ್ತಿದ್ದೇವೆ. ಅವರ ಆಶೀರ್ವಾದ ನಮ್ಮ ಮೇಲಿದೆ’ ಎಂದು ಹೇಳಿದರು.
‘ಪ್ರತಿವರ್ಷ ನಾವು ಹೆಚ್ಚಿನ ಸೇವೆ ಸಲ್ಲಿಸಲು ಆಗಮಿಸುತ್ತೇವೆ. ಒಳ್ಳೆಯ ಮಳೆ-ಬೆಳೆಯಾಗಿ ಜನರು ಸುಖ-ಸಂತೋಷದಿಂದ ಜೀವನ ನಡೆಸಲಿ’ ಎಂದು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.