ADVERTISEMENT

ಹಿಂದೂ–ಮುಸ್ಲಿಮರ ಭಾವೈಕ್ಯದ ಕೇಂದ್ರ- ಮುರುಗಮಲ್ಲಾ ದರ್ಗಾದ ಗಂಧೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 4:08 IST
Last Updated 22 ಅಕ್ಟೋಬರ್ 2021, 4:08 IST
ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲದ ದರ್ಗಾದಲ್ಲಿ ಗಂಧೋತ್ಸವ ಸಮರ್ಪಣೆ ನಡೆಯಿತು
ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲದ ದರ್ಗಾದಲ್ಲಿ ಗಂಧೋತ್ಸವ ಸಮರ್ಪಣೆ ನಡೆಯಿತು   

ಚಿಂತಾಮಣಿ: ಹಿಂದೂ-ಮುಸ್ಲಿಂಮರ ಭಾವೈಕ್ಯದ ಕೇಂದ್ರ ಹಾಗೂ ಪವಿತ್ರ ಯಾತ್ರಾಸ್ಥಳವಾಗಿರುವ ತಾಲ್ಲೂಕಿನ ಮುರುಗಮಲ್ಲಾ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾದ ಗಂಧೋತ್ಸವ ಬುಧವಾರ ಮಧ್ಯರಾತ್ರಿ ಸರ್ಕಾರಿ ಗಂಧೋತ್ಸವದದೊಂದಿಗೆ ಮುಕ್ತಾಯಗೊಂಡಿತು.

ಸರ್ಕಾರದ ಪರವಾಗಿ ವಕ್ಫ್ ಮಂಡಳಿಯಿಂದ ಗಂಧೋತ್ಸವ ಕಾರ್ಯಕ್ರಮ ನಡೆಯಿತು. ಮುಸ್ಲಿಂ ಯುವಕರು ನಡೆಸಿದ ಮೆರವಣಿಗೆಯಲ್ಲಿ ತಮಟೆ ವಾದನ ಗಮನ ಸೆಳೆಯಿತು. ಕುರಾನ್ ಪಠಣ, ತಮಟೆ ವಾದನದ ಮೂಲಕ ಮೆರವಣಿಗೆ
ಸಾಗಿತು.

ಈ ದರ್ಗಾ ದೇಶ, ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ಪ್ರತಿವರ್ಷ ಇಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಗಂಧೋತ್ಸವ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಭಾಗವಹಿಸುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ವಿಜೃಂಭಣೆಯ ಆಚರಣೆಗೆ ಕಡಿವಾಣ ಬಿದ್ದಿದೆ. ಸಂಪ್ರದಾಯ ಹಾಗೂ ಶಾಸ್ತ್ರೋಕ್ತವಾಗಿ ಸರಳವಾಗಿ ಆಚರಿಸಲಾಯಿತು.

ADVERTISEMENT

ದರ್ಗಾವನ್ನು ವಿವಿಧ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದರ್ಗಾದಲ್ಲಿ ಹೊಸ ಚಾದರ್‌ಗಳು ಕಣ್ಣು ಕೋರೈಸುತ್ತಿದ್ದವು. ವಿದ್ಯುತ್ ದೀಪಗಳು ಜಗಮಗಿಸುತ್ತಿದ್ದವು.

ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಶಂಸುಲ್ ಮೊಯಿಸ್, ದರ್ಗಾ ಆಡಳಿತಾಧಿಕಾರಿ ಸಿ.ಎಸ್. ಬಾಷಾ, ದರ್ಗಾ ವ್ಯವಸ್ಥಾಪಕ ತಯ್ಯೂಬ್ ನವಾಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಜಿ ಅನ್ಸರ್ ಖಾನ್ ಮಾತನಾಡಿ, ಶಾಂತಿಯುತ ಗಂಧೋತ್ಸವಕ್ಕೆ ಸಹಕರಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯತಿ, ಭಕ್ತರಿಗೆ ಹಾಗೂ ಗ್ರಾಮದ ಎಲ್ಲ ಕೋಮಿನ ಜನತೆಗೆ ಧನ್ಯವಾದ ಅರ್ಪಿಸಿದರು.

ಆಂಧ್ರಪ್ರದೇಶದ ಮದನಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ನವಾಜ್ ಬಾಷಾ, ಚಿಂತಾಮಣಿ ಕ್ಷೇತ್ರದ ಶಾಸಕ ಎಂ. ಕೃಷ್ಣಾರೆಡ್ಡಿ ದರ್ಗಾಗೆ ಭೇಟಿ ನೀಡಿ ಚಾದರ್ ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ರಾಜ್ಯ ವಕ್ಫ್ ಮಂಡಳಿಯ ಸಹಾಯಕ ಕಾರ್ಯದರ್ಶಿ ಜೀಶನ ಅಲಿಖಾನ್, ಎಸಿಓ ಮಾಜ ಅಹ್ಮದ್, ವಕೀಲ ಸಿ.ಎಸ್. ಅನ್ವರ್ ಖಾನ್, ಮುಖಂಡರಾದ ಮೊಹದ್ದೀನ್, ಆರೀಫ್ ಖಾನ್, ಅಮನುಲ್ಲಾ, ತನ್ವೀರ್ ಪಾಷಾ, ಬಿ. ಅಮೀರ್ ಜಾನ್, ಅಕ್ಬರ್, ಇಮ್ರಾನ್ ಪಾಷಾ, ಅಪ್ಸರ್ ಪಾಷಾ, ತಾಜ್ ಪಾಷಾ, ಚಾಂದ್ ಪಾಷಾ, ಕೃಷ್ಣಾ ಬೀಡಿಯ ಮಾಲೀಕ ಇಮ್ರಾನ್ ಪಾಷಾ ಹಾಗೂ ಸ್ಥಳೀಯ ಹಿಂದೂ ಮುಖಂಡರು ಭಾಗವಹಿಸಿದ್ದರು.

ಸೋಮವಾರ ಸಂಜೆ ದರ್ಗಾ ಮುಜಾವರ್ ರಹಮತ್‌ ಉಲ್ಲಾ ಮನೆಯಿಂದ ಹಜರತ್ ಗೌಸೇ ಮಾಕ್ ಹೆಸರಿನಲ್ಲಿ ಗಂಧವನ್ನು ಮೆರವಣಿಗೆ ಮೂಲಕ ತಂದು ದರ್ಗಾ ಸಮೀಪದ ಗೌಸೇ ಪಾಕ್ ನಶಾನ್‌ಗೆ (ಧ್ವಜಾರೋಹಣ) ಸಮರ್ಪಿಸುವ ಮೂಲಕ ಗಂಧೋತ್ಸವ ಪ್ರಾರಂಭವಾಗಿತ್ತು. ಮಂಗಳವಾರ ಗ್ರಾಮಸ್ಥರಿಂದ ಗಂಧೋತ್ಸವ ನಡೆದಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.