ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿಗಿರಿಧಾಮ (ನಂದಿ ಬೆಟ್ಟ) ಪ್ರವೇಶಕ್ಕೆ ಡಿ.1ರಿಂದ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಶನಿವಾರ ಮತ್ತು ಭಾನುವಾರ ಗಿರಿಧಾಮದಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ ಪ್ರವಾಸಿಗರ ಪ್ರವೇಶಕ್ಕೆ ಮಾತ್ರ ಅವಕಾಶವಿದೆ. ಸಾಮಾನ್ಯ ಪ್ರವಾಸಿಗರಿಗೆ ಪ್ರವೇಶವಿಲ್ಲ.
ಆ.24ರ ರಾತ್ರಿ ಸುರಿದ ಭಾರಿ ಮಳೆಗೆ ಗಿರಿಧಾಮದಲ್ಲಿ ಭೂ ಕುಸಿತ ಉಂಟಾಗಿತ್ತು. ಅಂದಿನಿಂದ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಗಿರಿಧಾಮದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕರ್ನಾಟಕ ಪ್ರವಾಸೋದ್ಯಮ ನಿಗಮದ ಬಹುಪಾಲು ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಬೇರೆಡೆ ನಿಯೋಜಿಸಲಾಗಿತ್ತು.
ಭೂಕುಸಿತ ಸಂಭವಿಸಿದ ಕಡೆ ರಸ್ತೆ ನಿರ್ಮಾಣಕ್ಕೆ ಸರ್ಕಾರ ₹ 80 ಲಕ್ಷ ಬಿಡುಗಡೆ ಮಾಡಿತ್ತು. ನವೆಂಬರ್ ಮೊದಲ ವಾರದಲ್ಲಿ ನಂದಿ ಪ್ರವೇಶಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇತ್ತು. ಆದರೆ ರಸ್ತೆಯ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲಕರಣೆಗಳ ಚೆನ್ನೈ ನಿಂತ ಬರಬೇಕಾಗಿತ್ತು. ತಮಿಳುನಾಡಿನಲ್ಲಿ ಮಳೆ ಹಿನ್ನೆಲೆಯಲ್ಲಿ ಸಲಕರಣೆಗಳು ಬರುವುದು ತಡವಾಯಿತು.
ಕಳೆದ ಮೂರು ತಿಂಗಳಿನಿಂದ ಪ್ರವಾಸಿಗರಿಲ್ಲದ ಕಾರಣ ನಂದಿಗಿರಿಧಾಮ ಹಾಗೂ ಸುತ್ತಲಿನ ಹೋಟೆಲ್ಗಳು ಬಂದ್ ಆಗಿದ್ದವು. ಚಟುವಟಿಕೆಗಳು ಸ್ಥಗಿತವಾಗಿದ್ದು ಗಿರಿಧಾಮ ಪ್ರದೇಶದಲ್ಲಿ ಪೊಲೀಸ್ ಪಹರೆ ಹಾಕಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.