ADVERTISEMENT

ಬೆಳಿಗ್ಗೆಯೇ ನಂದಿಬೆಟ್ಟದ ಬಾಗಿಲಿನಲ್ಲಿ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 21:17 IST
Last Updated 1 ಡಿಸೆಂಬರ್ 2021, 21:17 IST
ಬುಧವಾರ ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರು
ಬುಧವಾರ ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರು   

ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿಗಿರಿಧಾಮಕ್ಕೆ ಮೂರು ತಿಂಗಳ ನಂತರ ಪ್ರವಾಸಿಗರು ಭೇಟಿ ನೀಡಿದರು. ಬುಧವಾರ ಬೆಳಿಗ್ಗೆ 6ರಿಂದಲೇ ಮುಖ್ಯದ್ವಾರಕ್ಕೆ ಪ್ರವಾಸಿಗರು ಬಂದರು. ಮೊದಲದಿನವಾದ ಕಾರಣ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನ 12ರವರೆಗೆ 500ಕ್ಕೂ ಹೆಚ್ಚು ಮಂದಿಯಷ್ಟೇ ಗಿರಿಧಾಮಕ್ಕೆ ಬಂದಿದ್ದರು.ವಾಹನ ನಿಲುಗಡೆ ಸ್ಥಳದಲ್ಲಿ ಈ ಹಿಂದಿನಂತೆ ದಟ್ಟಣೆ ಕಂಡು ಬರಲಿಲ್ಲ.

ಕಾರಹಳ್ಳಿ ಕ್ರಾಸ್ ಹಾಗೂ ನಂದಿಬೆಟ್ಟದ ಆಸುಪಾಸಿನಲ್ಲಿ ಹೋಟೆಲ್‌ಗಳು, ಅಂಗಡಿಗಳು ತೆರೆದಿದ್ದವು. ವಾಣಿಜ್ಯ ಚಟುವಟಿಕೆಗಳು ಸಾಮಾನ್ಯ ಸ್ಥಿತಿಯಲ್ಲಿ ಇತ್ತು.ಕಳೆದ ಮೂರು ತಿಂಗಳಿನಿಂದ ಪ್ರವಾಸಿಗರು ಇಲ್ಲದ ಕಾರಣ ಇವು ಬಾಗಿಲು ಮುಚ್ಚಿದ್ದವು.

ಬೆಂಗಳೂರಿನ ವಿನಿತ್, ಶಿಡ್ಲಘಟ್ಟ ತಾಲ್ಲೂಕಿನ ವಿಜಯಪುರದ ಮೋಹನ್ ಹಾಗೂ ಸ್ನೇಹಿತರು ಬೆಳ್ಳಂ ಬೆಳಿಗ್ಗೆ ಬೆಟ್ಟಕ್ಕೆ ಸೈಕ್ಲಿಂಗ್ ಬಂದಿದ್ದರು.

ADVERTISEMENT

ಗಿರಿಧಾಮದಲ್ಲಿ ದಟ್ಟ ಮಂಜಿನಿಂದ ವಾತಾವರಣವಿತ್ತು. ಕಾರುಗಳ ಚಾಲಕರ ಲೈಟ್ ಹಾಕಿಕೊಂಡು ಸಾಗುತ್ತಿದ್ದರು.ಬೆಟ್ಟಕ್ಕೆ ಬಂದ ಪ್ರವಾಸಿಗರು ಭೂಕುಸಿತವಾದ ಸ್ಥಳವನ್ನು ನೋಡಿ ಅಬ್ಬಾ! ಎಷ್ಟೊಂದು ಭೂ ಕುಸಿತವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಕುಸಿತವಾದ ಸ್ಥಳದಲ್ಲಿ ಕ್ಷಣ ಹೊತ್ತು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ಮೊದಲ ದಿನವೇ ಯುವ ಪ್ರೇಮಿಗಳು ಬೆಟ್ಟದಲ್ಲಿ ಕಂಡು ಬಂದರು. ಪರಸ್ಪರ ಕೈಹಿಡಿದು, ಸೆಲ್ಫಿ ತೆಗೆದುಕೊಳ್ಳುತ್ತ ಸಂಭ್ರಮಿಸಿದರು. ಬಹಳಷ್ಟು ಮಂದಿ ಕುಟುಂಬ ಸಮೇತರಾಗಿ ಚಿಕ್ಕಮಕ್ಕಳ ಜತೆ ಗಿರಿಧಾಮಕ್ಕೆ ಬಂದಿದ್ದರು.

‘ಹಂತ ಹಂತವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ. ಬಹಳಷ್ಟು ಜನರಿಗೆ ನಂದಿ ಪ್ರವೇಶಕ್ಕೆ ಅವಕಾಶವಿದೆ ಎನ್ನುವುದು ತಿಳಿದಿಲ್ಲ. ಮಾಧ್ಯಮಗಳಲ್ಲಿ ಪ್ರಚಾರವಾದ ನಂತರ ಮತ್ತಷ್ಟು ಜನರು ಭೇಟಿ ನೀಡುವರು. ಫೋಟೊ ಶೂಟ್‌ಗೂ ಅವಕಾಶ ನೀಡಲಾಗಿದೆ’ ಎಂದು ನಂದಿಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.