ಚಿಕ್ಕಬಳ್ಳಾಪುರ: ‘ಸಾರ್ವಜನಿಕರು ದಿನ ಪತ್ರಿಕೆಗಳನ್ನು ಓದುವ ಮೂಲಕ ಸುತ್ತಮುತ್ತಲಿನ ಸುದ್ದಿಗಳು ಮತ್ತು ಮಾಹಿತಿಯನ್ನು ತಿಳಿದುಕೊಳ್ಳಬೇಕು. ಪತ್ರಿಕೆ ಓದುವ ಅಭಿರುಚಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದು ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ರಾಸ್ನಲ್ಲಿರುವ ಯೋಗಿನಾರೇಯಣ ಬಂಕ್ ಮಾಲೀಕ ವಿ.ಚೇತನ್ ಹೇಳಿದರು.
ಭಾನುವಾರ ಬಂಕ್ನಲ್ಲಿ ಮೊದಲ 100 ಗ್ರಾಹಕರಿಗೆ ಉಚಿತವಾಗಿ ‘ಪ್ರಜಾವಾಣಿ’ ಪತ್ರಿಕೆಯನ್ನು ವಿತರಿಸಿ ಅವರು ಮಾತನಾಡಿದರು.
‘ಕನ್ನಡ ನಾಡು, ನುಡಿ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಹ ‘ಪ್ರಜಾವಾಣಿ’ ಎಂದರೆ ನಮಗೆ ಮೊದಲಿನಿಂದಲೂ ಹೆಮ್ಮೆ. ಪತ್ರಿಕೆಯನ್ನು ಕೊಂಡು ಓದುವುದರಿಂದ ನಮ್ಮ ಜ್ಞಾನ ವಿಸ್ತಾರವಾಗುತ್ತದೆ. ಕನ್ನಡ ಭಾಷೆ ಬೆಳೆಸಿದಂತಾಗುತ್ತದೆ. ಪೆಟ್ರೊಲ್ ಬಂಕ್ಗಳಲ್ಲಿ ಗ್ರಾಹಕರಿಗೆ ‘ಪ್ರಜಾವಾಣಿ’ ಪತ್ರಿಕೆಯನ್ನು ಉಚಿತವಾಗಿ ವಿತರಿಸುತ್ತಿರುವುದು ಗಮನಾರ್ಹವಾದುದು’ ಎಂದು ಅಭಿಪ್ರಾಯಪಟ್ಟರು.
‘ಇದೊಂದು ರೀತಿಯಲ್ಲಿ ಪತ್ರಿಕಾ ಚಳವಳಿಯೇ ಆಗಿದೆ. ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆ ಏನಿಲ್ಲ. ಬೆಳಿಗ್ಗೆ ಪತ್ರಿಕೆ ಓದಿಯೇ ಓದುತ್ತಾರೆ. ಅದರಲ್ಲೂ ಸುಮಾರು 70 ವರ್ಷಗಳಿಂದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕಾಲಕ್ಕೆ ತಕ್ಕಂತೆ ಓದುಗರಿಗೆ ವಿಶ್ವಾಸಾರ್ಹವಾದ ಸುದ್ದಿಗಳನ್ನು ನೀಡುವ ಪ್ರಜಾವಾಣಿ ಪತ್ರಿಕೆಯನ್ನು ಜನ ಬಹಳಷ್ಟು ಇಷ್ಟುಪಡುತ್ತಾರೆ. ಇದೊಂದು ಅಭಿನಂದನಾರ್ಹವಾದ ಕಾರ್ಯ’ ಎಂದು ತಿಳಿಸಿದರು.
‘ಬಂಕ್ನಲ್ಲಿ ಬೆಳಿಗ್ಗೆ ಮೊದಲ 100 ಗ್ರಾಹಕರಿಗೆ ನಾವು ಉಚಿತವಾಗಿ ಈ ಪತ್ರಿಕೆ ವಿತರಣೆ ಮಾಡುತ್ತಿದ್ದೇವೆ. ಇದರಿಂದ ನಮಗೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಇಂತಹ ಕಾರ್ಯಗಳು ಹೆಚ್ಚು ನಡೆಯಲಿ. ಬೇರೆ ಬೇರೆ ಕಡೆಗೂ ಈ ರೀತಿ ಪತ್ರಿಕೆಯನ್ನು ಗ್ರಾಹಕರಿಗೆ ವಿತರಿಸುವ ಪ್ರಕ್ರಿಯೆ ನಡೆಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು. ಬಂಕ್ ಸಿಬ್ಬಂದಿ ಯಶ್ವಂತ್, ನಂಜೇಗೌಡ, ಅರುಣ್, ಮಂಜುನಾಥ್, ಆನಂದ್, ಹೇಮಂತ್, ಗೋಪಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.