ADVERTISEMENT

ಈಜುಕೊಳಕ್ಕೆ ಇಳಿದ ಎನ್‌ಜಿಒ ಸಿಬ್ಬಂದಿ ಸಾವು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:29 IST
Last Updated 25 ಫೆಬ್ರುವರಿ 2026, 6:29 IST
ರೇಖ
ರೇಖ   

ಶಿಡ್ಲಘಟ್ಟ: ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಚಿಂತಡಪಿ ಗ್ರಾಮದ ಬಳಿ ಇರುವ ನೇಚರ್ ರೆಸಾರ್ಟ್‌ನಲ್ಲಿ ಸೋಮವಾರ ಈಜಲು ಹೋದ ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಉದ್ಯೋಗಿ ಮೃತಪಟ್ಟಿದ್ದಾರೆ. 

ಕುಂದಲಗುರ್ಕಿ ನಿವಾಸಿ ರೇಖ(32) ಮೃತರು.

ಎಫ್‌.ಇ.ಎಸ್ ಸಂಸ್ಥೆಯು ತನ್ನ ಸಿಬ್ಬಂದಿಗೆ ಎರಡು ದಿನಗಳ ವಸತಿ ಸಹಿತ ತರಬೇತಿ ಕಾರ್ಯಾಗಾರವನ್ನು ನೇಚರ್ ರೆಸಾರ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೇಖ ತರಬೇತಿ ಮುಗಿಸಿಕೊಂಡು ತನ್ನ ಸಹುದ್ಯೋಗಿಗಳ ಜತೆ ಈಜುಕೊಳಕ್ಕೆ ಇಳಿದಾಗ ಘಟನೆ
ನಡೆದಿದೆ.

ADVERTISEMENT

ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದ ರೆಸಾರ್ಟ್‌ನವರು ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಮೃತಳ ಕುಟುಂಬದವರು ದೂರಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಮೊದಲ ದಿನದ ತರಬೇತಿ ಮುಗಿಸಿಕೊಂಡು ಸಂಜೆ 6.30ರ ವೇಳೆ ರೇಖ ತನ್ನ ಕೆಲ ಸಹೋದ್ಯೋಗಿಗಳ ಜತೆ ಈಜುಕೊಳಕ್ಕೆ ಇಳಿದಿದ್ದಾರೆ. ಕೆಲ ಕಾಲ ಈಜಾಡಿದ ರೇಖ ನಂತರ
ಅಸ್ವಸ್ಥರಾರು, ಅವರನ್ನು ಕೂಡಲೆ ಜತೆಯಲ್ಲಿದ್ದವರು ಮೇಲೆತ್ತಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಿ ರೇಖ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ನಿಯಮದಂತೆ ಸಂಜೆ 6 ಗಂಟೆ ನಂತರ ಈಜುಕೊಳದಲ್ಲಿ ಈಜಾಡುವುದು ನಿಷಿದ್ಧ. ಆದರೆ ರೆಸಾರ್ಟ್‌ ನವರು ಈಜಾಡಲು ಅವಕಾಶ ಕೊಟ್ಟಿದ್ದಲ್ಲದೆ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಇದರಿಂದಲೆ ರೇಖ ಮೃತಪಟ್ಟಿದ್ದಾರೆ ಎಂದು ಆಕೆಯ ಕುಟುಂಬಸ್ಥರು
ಆರೋಪಿಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕು ಚಿಂತಡಪಿ ಬಳಿಯ ನೇಚರ್ ರೆಸಾರ್ಟ್

ಆಸ್ಪತ್ರೆ ಮುಂದೆ ಕುಟುಂಬಸ್ಥರು ಗ್ರಾಮಸ್ಥರ ಆಕ್ರೋಶ

ವಿಷಯ ತಿಳಿದು ಆಸ್ಪತ್ರೆ ಮುಂದೆ ಜಮಾಯಿಸಿದ ಮೃತಳ ಕುಟುಂಬದವರು ಹಾಗೂ ಕುಂದಲಗುರ್ಕಿ ಗ್ರಾಮಸ್ಥರು ನೇಚರ್ ರೆಸಾರ್ಟ್‌ ಮಾಲೀಕರ ವಿರುದ್ಧ ಕಿಡಿ ಕಾರಿದರು. ರೆಸಾರ್ಟ್‌ ನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಮತ್ತು ರಕ್ಷಣಾ ವ್ಯವಸ್ಥೆ ಇಲ್ಲದೆ ನಿಯಮ ಉಲ್ಲಂಘಿಸಿ ರೆಸಾರ್ಟ್ ನಡೆಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ನಿಯಮಗಳನ್ನು ಉಲ್ಲಂಘಿಸಿ ರೆಸಾರ್ಟ್ ನಡೆಸುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ರೇಖಳ ಕುಟುಂಬದವರು ಮತ್ತು ಕುಂದಲಗುರ್ಕಿ ಗ್ರಾಮಸ್ಥರು ರೆಸಾರ್ಟ್ ಮಾಲೀಕರು ಸ್ಥಳಕ್ಕೆ ಆಗಮಿಸಬೇಕು ನಡೆದ ಘಟನೆ ಬಗ್ಗೆ ವಿವರಿಸಬೇಕು ಎಂದು ಹೇಳಿ ಶವಪರೀಕ್ಷೆ ನಡೆಸದಂತೆ ತಡೆ ಹಾಕಿದರು.

ಪೊಲೀಸರು ರೇಖ ಕುಟುಂಬಸ್ಥರು ಮತ್ತು ಕುಂದಲಗುರ್ಕಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ಕ್ರಮದ ಭರವಸೆಯ ಬಳಿಕ ಶವ ಪರೀಕ್ಷೆಗೆ ಅನುವು ಮಾಡಿಕೊಟ್ಟರು. ಮೃತ ರೇಖ ಅವರ ಪತಿ ರಾಜು ನೇಚರ್ ರೆಸಾರ್ಟ್‌ನಲ್ಲಿ ಈಜುಕೊಳದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಕಾವಲುಗಾರರನ್ನು ಕೂಡ ನೇಮಿಸಿಲ್ಲ. ರೇಖ ಸಾವಿಗೆ ರೆಸಾರ್ಟ್‌ ಮಾಲೀಕರೇ ಕಾರಣ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.