ADVERTISEMENT

ಚಿಕ್ಕಬಳ್ಳಾಪುರ: ಪ್ರಾಯಕ್ಕೆ ಬಂದರೂ ಬಾಲಭವನವಿಲ್ಲ!

ನಿರ್ಮಾಣಕ್ಕೆ ಕೂಡಿ ಬಂದಿಲ್ಲ ಕಾಲ: ನೀಡಿದ ಜಾಗ ಸೂಕ್ತವಲ್ಲ ಎಂದ ಅಧಿಕಾರಿಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 9 ನವೆಂಬರ್ 2022, 9:35 IST
Last Updated 9 ನವೆಂಬರ್ 2022, 9:35 IST
ಬಾಲಭವನ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರದ ರಂಗಸ್ಥಳದ ಬಳಿ ನೀಡಿದ್ದ ಜಮೀನು
ಬಾಲಭವನ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರದ ರಂಗಸ್ಥಳದ ಬಳಿ ನೀಡಿದ್ದ ಜಮೀನು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ ರೂಪು ತಳೆದು 16 ವರ್ಷಗಳೇ ಉರುಳಿದೆ. ಇಲ್ಲಿಯವರೆಗೂ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಬಾಲ ಭವನದ ಕನಸು ಈಡೇರಿಲ್ಲ. ಪರಿಣಾಮ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯನ್ನು ಒದಗಿಸುವಂತಹ ಮಹತ್ವದ ಯೋಜನೆ ನನೆಗುದಿಗೆ ಬಿದ್ದಿದೆ.

ಅತ್ಯಂತ ಕಡಿಮೆ ಶುಲ್ಕದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ವೃದ್ಧಿಗೆ ಅಗತ್ಯವಾದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕ್ರೀಡೆಯಂತ ಪಠ್ಯೇತರ ಚಟುಟಿಕೆಗಳ ತರಬೇತಿ ನೀಡವುದು. ಮಕ್ಕಳು ವೈಯಕ್ತಿಕ ಮತ್ತು ಮಾನಸಿಕವಾಗಿ ವಿಕಾಸ ಹೊಂದುವಂತೆ ನೋಡಿಕೊಳ್ಳುವುದು ಬಾಲ ಭವನ ಯೋಜನೆಯ ಮುಖ್ಯ ಧ್ಯೇಯ.

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಂತಹ ಮಹತ್ವದ ಯೋಜನೆ ಒಂದೂವರೆ ದಶಕ ಕಳೆದರೂ ಜಿಲ್ಲೆಯಲ್ಲಿ ಅನುಷ್ಠಾನವಾಗಿಲ್ಲ. ಇದಕ್ಕೆ ಪ್ರಜ್ಞಾವಂತ ನಾಗರಿಕರು ಸಹ ಬೇಸರ ವ್ಯಕ್ತಪ‍ಡಿಸುವರು.

ADVERTISEMENT

ನಗರದ ಹೊರವಲಯದ ಗೌರಿಬಿದನೂರು ರಸ್ತೆಯಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ (ರಂಗಸ್ಥಳ) ಬಳಿಯ ಸರ್ವೆ ನಂ 96ರಲ್ಲಿ 7 ಎಕರೆ ಜಮೀನನ್ನು ಜಿಲ್ಲಾ ಬಾಲ ಭವನ ನಿರ್ಮಿಸಲು 2015ರ ಜುಲೈನಲ್ಲಿ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಭೂಮಿ ಮಂಜೂರಾಗಿ ಏಳು ವರ್ಷಗಳು ಸಮೀಪಿಸಿದರೂ ಭವನ ತಲೆ ಎತ್ತಿಲ್ಲ.

ಅಂದು ಬಾಲ ಭವನ ಸೊಸೈಟಿಯು ಕಟ್ಟಡ, ಮಕ್ಕಳ ಹುಟ್ಟುಹಬ್ಬದ ಹಾಲ್, ಶೌಚಾಲಯ, ಆಟೋಪಕರಣ, ಟೆಲಿಸ್ಕೋಪ್, ಅಕ್ವೇರಿಯಂ, ಆಟದ ಮೈದಾನ ನಿರ್ಮಿಸಲು ₹ 60 ಲಕ್ಷ ಅನುದಾನ ಸಹ ಮಂಜೂರು ಮಾಡಿತ್ತು. ಆದರೆ 2017 ರಲ್ಲಿ ಉದ್ದೇಶಿತ ಜಾಗದ ಸಮೀಕ್ಷೆ ನಡೆಸಿದ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧಿಕಾರಿಗಳು ಬಾಲಭವನಕ್ಕೆ ಮಂಜೂರಾದ ಜಾಗ ಸೂಕ್ತವಾಗಿಲ್ಲ ಎಂದು ವರದಿ ನೀಡಿದ್ದರು.

ಹೀಗಾಗಿ, ಬಾಲ ಭವನ ಸೊಸೈಟಿಯು ಬಾಲ ಭವನ ನಿರ್ಮಾಣಕ್ಕಾಗಿ ನೀಡಿದ್ದ ₹60 ಲಕ್ಷ ಅನುದಾನವನ್ನು 2018ರ ಆಗಸ್ಟ್‌ನಲ್ಲಿ ಹಿಂಪಡೆಯಿತು. ಪರ್ಯಾಯ ಜಾಗ ಹುಡುಕಿ, ಯೋಜನೆ ಸಿದ್ಧಪಡಿಸಿದ ಬಳಿಕ ಪುನಃ ಅನುದಾನ ನೀಡುವುದಾಗಿ ತಿಳಿಸಿತ್ತು. ಅಂದಿನಿಂದ ಈವರೆಗೆ ಬಾಲಭವನಕ್ಕೆ ಪರ್ಯಾಯ ಜಾಗ ಹುಡುಕುವ ಕೆಲಸ
ನಡೆದಿಲ್ಲ.

ರಂಗಸ್ಥಳದ ಬಳಿ ಗುರುತಿಸಿರುವ ಸ್ಥಳಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲ. ಈ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಹಣ ವ್ಯಯವಾಗುತ್ತದೆ. ಆದ್ದರಿಂದ ಇಲ್ಲಿ ಬಾಲಭವನ ನಿರ್ಮಾಣ ನನೆಗುದಿಗೆ ಬಿದ್ದಿದೆ ಎನ್ನುತ್ತವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು.

ರಂಗಸ್ಥಳದ ಬಳಿ ಮಂಜೂರಾದ ಜಾಗ ಸಮತಟ್ಟಾಗಿಲ್ಲ. ಸರಿಯಾದ ದಾರಿ ವ್ಯವಸ್ಥೆ ಇಲ್ಲ. ದಾರಿ ನಿರ್ಮಾಣಕ್ಕೆ ₹ 1 ಕೋಟಿ ಬೇಕು. ಅಲ್ಲಿ ಬಾಲ ಭವನ ನಿರ್ಮಿಸುವುದು ಸೂಕ್ತವಲ್ಲ ಎಂದು ಲಿಖಿತ ಹಿಂಬರಹ ನೀಡಿದ್ದಾರೆ. ಹೀಗಾಗಿ ಸೂಕ್ತ ಜಾಗ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಪತ್ರ ಬರೆಯುತ್ತೇನೆ ಎಂದು 2020ರ ಫೆಬ್ರುವರಿಯಲ್ಲಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾಗಿದ್ದ ನಾರಾಯಣಸ್ವಾಮಿ ತಿಳಿಸಿದ್ದರು. ಹೀಗೆ ಜಾಗ ಸರಿಯಿಲ್ಲ ಎಂದು ಹೇಳಿಯೇ ಎರಡು ವರ್ಷಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೂ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ಹಳ್ಳಹಿಡಿದಿದೆ.

ಬಾಲಭವನ ನಿರ್ಮಾಣಕ್ಕೆ ಜಾಗ ನೀಡಿರುವ ರಂಗಸ್ಥಳದ ಬಳಿಯೇ ಇತರೆ ಇಲಾಖೆಗಳಿಗೂ ಜಮೀನು ನೀಡಲಾಗಿದೆಯಂತೆ. ಇಲ್ಲಿ ರಸ್ತೆ ನಿರ್ಮಿಸಿದರೆ ಕೇವಲ ಒಬ್ಬರಿಗಷ್ಟೇ ಅಲ್ಲ ಎಲ್ಲರಿಗೂ ಅನುಕೂಲ ಆಗುತ್ತದೆ.ರಂಗಸ್ಥಳ ಈಗಾಗಲೇ ಪ್ರವಾಸಿ ತಾಣ ಎನಿಸಿದೆ. ನಿತ್ಯ ಪ್ರವಾಸಿಗರು ಭೇಟಿ ನೀಡುವರು. ವಾರಾಂತ್ಯದಲ್ಲಿ ಸಂಖ್ಯೆ ಹೆಚ್ಚಿರುತ್ತದೆ. ಬಾಲಭವನಕ್ಕೆ ನೀಡಿರುವ ಜಾಗ ನಗರಕ್ಕೂ ಸಮೀಪವಿದೆ. ಈ ಎಲ್ಲ ದೃಷ್ಟಿಯಿಂದ ಈಗ ನೀಡಿರುವ ಜಮೀನನ್ನು ಅಚ್ಚುಕಟ್ಟುಗೊಳಿಸಿ ಭವನ ನಿರ್ಮಿಸಿದರೆ ಒಳ್ಳೆಯದು. ಅಷ್ಟೊಂದು ಜಮೀನು ನಗರಕ್ಕೆ ಸಮೀಪದಲ್ಲಿ ಒಂದೇ ಕಡೆ ದೊರೆಯುವುದು ಕಷ್ಟಸಾಧ್ಯ ಎನ್ನುತ್ತಾರೆ ಪೋಷಕರು.

‘ನಗರದಲ್ಲಿ ಸುಂದರ ಉದ್ಯಾನ ಕೂಡ ಇಲ್ಲ. ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದ ರೀತಿಯಲ್ಲಿ ಚಿಕ್ಕಬಳ್ಳಾಪುರದಲ್ಲಿಯೂ ಬಾಲಭವನ ಅಭಿವೃದ್ಧಿಗೊಳಿಸಬೇಕು’ ಎಂದು ಆಗ್ರಹಿಸುತ್ತಾರೆ ಪೋಷಕರಾದ ಚಿಕ್ಕಬಳ್ಳಾಪುರದ ಕೆಳಗಿನ ತೋಟದ ಮಂಜುಳಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.