ADVERTISEMENT

ಚಿಂತಾಮಣಿ: ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 4:08 IST
Last Updated 25 ಜುಲೈ 2021, 4:08 IST
ಚಿಂತಾಮಣಿಯ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿದರು. ತಹಶೀಲ್ದಾರ್ ಹನುಮಂತರಾಯಪ್ಪ, ಪೌರಾಯುಕ್ತ ಚೇತನ್ ಎಸ್.ಕೊಳವಿ ಭಾಗವಹಿಸಿದ್ದರು
ಚಿಂತಾಮಣಿಯ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿದರು. ತಹಶೀಲ್ದಾರ್ ಹನುಮಂತರಾಯಪ್ಪ, ಪೌರಾಯುಕ್ತ ಚೇತನ್ ಎಸ್.ಕೊಳವಿ ಭಾಗವಹಿಸಿದ್ದರು   

ಚಿಂತಾಮಣಿ: ನಗರಸಭೆ ವ್ಯಾಪ್ತಿಯ 18 ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಮೂರು ತಿಂಗಳ ಒಳಗಾಗಿ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ತಿಳಿಸಿದರು.

ನಗರದ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ಮಾತನಾಡಿದರು.

ರಾಜ್ಯ ಕೊಳಚೆ ಮಂಡಳಿಯಿಂದ ಮಾನ್ಯತೆ ಪಡೆದಿರುವ 18 ಕೊಳಚೆ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಹಕ್ಕುಪತ್ರಗಳ ನೀಡಿಕೆ ನೆನಗುದಿಗೆ ಬಿದ್ದಿದೆ. ಈಗ ಸರ್ಕಾರ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಆದೇಶ ನೀಡಿದೆ. ತಹಶೀಲ್ದಾರ್, ಪೌರಾಯುಕ್ತರು ಮತ್ತು ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿಪಡಿಸಲಾಗಿದೆ ಎಂದರು.

ADVERTISEMENT

ಕೊಳಚೆ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ, ನಕ್ಷೆಯ ಸಮೇತ ವಿವರಗಳನ್ನು ಒಂದು ವಾರದ ಒಳಗೆ ನಗರಸಭೆಯ ಆಯುಕ್ತರಿಗೆ ನೀಡಬೇಕು. ಪೌರಾಯುಕ್ತರು ವರದಿಯನ್ನು ಪರಿಶೀಲಿಸಿ ಜತೆಗೆ ಅಗತ್ಯವಾದ ಎಲ್ಲ ದಾಖಲೆಗಳೊಂದಿಗೆ ಕೊಳಚೆ ನಿರ್ಮೂಲನಾ ಮಂಡಳಿಗೆ ಸಲ್ಲಿಸಬೇಕು. ಮಂಡಳಿಯ ಅಧಿಕಾರಿಗಳು 3 ತಿಂಗಳೊಳಗೆ ಎಲ್ಲ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ ಹಕ್ಕುಪತ್ರಗಳನ್ನು ನಿವಾಸಿಗಳಿಗೆ ನೀಡಲು ಕ್ರಮಕೈಗೊಳ್ಳುತ್ತಾರೆ ಎಂದರು.

ನಗರ ಪ್ರದೇಶದಲ್ಲಿ 18 ಕೊಳಚೆ ಪ್ರದೇಶಗಳ ಜತೆಗೆ ಹೊಸದಾಗಿ ಪೌರಕಾರ್ಮಿಕರ ಬಡಾವಣೆ, ಶುದ್ದಕುಂಟೆ, ಹಳೇಕೋಟೆ, ಗಂಗಾನಗರ, ಆಶ್ರಯ ಬಡಾವಣೆ, ಕೆಂಪಮ್ಮನಗರ, ಬೆಟ್ಟದ ತಪ್ಪಲು ಸೇರಿದಂತೆ ಹೊಸದಾಗಿ 7 ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡುವಂತೆ ಕೊಳಚೆ ನಿರ್ಮೂಲನೆ ಮಂಡಳಿಗೆ ಹಾಗೂ ವಸತಿ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ತಹಶೀಲ್ದಾರ್ ಹನುಮಂತ ರಾಯಪ್ಪ, ಪೌರಾಯುಕ್ತ ಚೇತನ್ ಎಸ್.ಕೊಳವಿ, ನಗರಸಭೆ ಸದಸ್ಯ ಅಗ್ರಹಾರ ಮುರಳಿ, ದೇವಳಂಶಂಕರ್, ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.