ಶಿಡ್ಲಘಟ್ಟ: ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಪುರಬೈರೇನಹಳ್ಳಿ ಬಳಿ ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸೆಸ್ಸಿಂಗ್ ಘಟಕ ಸ್ಥಾಪನೆ ಯೋಜನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಯಾವುದೇ ರೀತಿ ಪರವಾನಗಿ ನೀಡಬಾರದು ಎಂದು ಗ್ರಾಮಸ್ಥರು ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಮುಖಂಡ ಡಿಎಸ್ಎನ್ ರಾಜು, ‘ಈ ಪ್ರದೇಶದಲ್ಲಿ ಐವತ್ತು-ಅರವತ್ತು ವರ್ಷಗಳಿಂದ ಅನೇಕರು ಸಾಂಪ್ರದಾಯಿಕವಾಗಿ ಕಲ್ಲು ಹೊಡೆದು ಬದುಕು ಸಾಗಿಸುತ್ತಿದ್ದಾರೆ. ಈಗ ವ್ಯಕ್ತಿಯೊಬ್ಬರು ಸರ್ಕಾರದ ವಿವಿಧ ಇಲಾಖೆಗಳ ಅನುಮತಿ ಪಡೆದು ಗ್ರಾನೈಟ್ ಘಟಕ ಸ್ಥಾಪನೆಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯಿಂದ ಸ್ಥಳೀಯರಿಗೆ ತೊಂದರೆ ಆಗಲಿದೆ’ ಎಂದರು.
ಪಿಡಿಒ ರಮೇಶ್,‘ಡಿ.ಗೋವಿಂದರಾಜು ಎಂಬುವರು ಸರ್ವೆ ನಂ43ರಲ್ಲಿ 2ಎಕರೆ ಹಾಗೂ ಸರ್ವೆ ನಂ.45ರಲ್ಲಿ 1ಎಕರೆ 30ಗುಂಟೆ ಭೂಮಿಯಲ್ಲಿ ಘಟಕ ಸ್ಥಾಪನೆಗೆ ಭೂ ಪರಿವರ್ತನೆ ಮಾಡಿಕೊಂಡು ಇ–ಖಾತೆ ಹಾಗೂ ಸಾಮಾನ್ಯ ಪರವಾನಗಿ ನೀಡಲು ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಗ್ರಾಮ ಸಭೆಯಲ್ಲಿ ಮಂಡಿಸಿದಾಗ 8 ಸದಸ್ಯರು ಪರವಾನಗಿ ನೀಡಲು ಒಪ್ಪಿಗೆ ಸೂಚಿಸಿದ್ದು, 6 ಸದಸ್ಯರು ವಿರೋಧಿಸಿದರು. ಬಹುಮತ ಆಧಾರದಲ್ಲಿ ತೀರ್ಮಾನ ಕೈಗೊಂಡು ಅರ್ಜಿ ಪುರಸ್ಕರಿಸಲಾಗಿದೆ’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಡಿ.ಪಿ.ನಾಗರಾಜ್ ಮಾತನಾಡಿ ‘ಸಾಂಪ್ರದಾಯಿಕ ಕಲ್ಲು ಹೊಡೆಯುವ ಮೂಲಕ ಯಾವುದೇ ತೆರಿಗೆ ಶುಲ್ಕ ಪಾವತಿ ಇಲ್ಲದಂತೆ ಗುತ್ತಿಗೆದಾರರು ಉದ್ಯಮ ನಡೆಸುತ್ತಿದ್ದಾರೆ. ಆದರೆ, ಈ ಹೊಸ ಘಟಕದಿಂದ ಪಂಚಾಯಿತಿಗೆ ವಾರ್ಷಿಕ ₹50ಲಕ್ಷ, ಸರ್ಕಾರಕ್ಕೆ ಸುಮಾರು ₹100ಕೋಟಿ ರಾಯಲ್ಟಿ ಲಭಿಸುತ್ತದೆ. ಸುಮಾರು 1500 ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗಲಿದೆ. ಈ ಕಾರಣದಿಂದ ಪರವಾನಗಿ ನೀಡಲು ನಿರ್ಧರಿಸಿದ್ದೇವೆ’ ಎಂದರು.
ಹಿರಿಯ ಸದಸ್ಯ ಡಾ.ಧನಂಜಯರೆಡ್ಡಿ ಮಾತನಾಡಿ,‘ಆರು ಸದಸ್ಯರು ಪರಿಸರ ಹಾಗೂ ಸ್ಥಳೀಯರ ಹಿತ ದೃಷ್ಟಿಯಿಂದ ವಿರೋಧ ವ್ಯಕ್ತಪಡಿಸಿದ್ದರೂ ಬಹುಮತ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬೇಕಾಯಿತು’ ಎಂದು ಸಭೆ ವಿವರ ನೀಡಿದರು.
ಈ ಪ್ರದೇಶದಲ್ಲಿ ಕ್ರಷರ್ ಅಥವಾ ಗ್ರಾನೈಟ್ ಘಟಕ ಆರಂಭವಾದರೆ ಬದುಕಲು ಬೀದಿಗೆ ಬೀಳಲಿದೆ ಎಂದು ಕೊಂಡಪ್ಪಗಾರಹಳ್ಳಿ ವಿಜಯ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.