ADVERTISEMENT

ಚಿಂತಾಮಣಿ: ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 24 ಮೇ 2021, 3:52 IST
Last Updated 24 ಮೇ 2021, 3:52 IST
ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರು ಆಮ್ಲಜನಕದ ಸಿಲಿಂಡರ್‌ಗಳನ್ನು ವೈದ್ಯಾಧಿಕಾರಿ ಡಾ.ಸ್ವಾತಿ ಅವರಿಗೆ ಹಸ್ತಾಂತರಿಸಿದರು
ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರು ಆಮ್ಲಜನಕದ ಸಿಲಿಂಡರ್‌ಗಳನ್ನು ವೈದ್ಯಾಧಿಕಾರಿ ಡಾ.ಸ್ವಾತಿ ಅವರಿಗೆ ಹಸ್ತಾಂತರಿಸಿದರು   

ಚಿಂತಾಮಣಿ: ನಗರದ ಸರ್ಕಾರಿ ಆಸ್ಪತ್ರೆಗೆ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಬೆಂಬಲಿಗರು ಆಮ್ಲಜನಕದ 20 ಸಿಲಿಂಡರ್‌ ಹಾಗೂ ಎರಡು ಫ್ಯಾನ್‌ಗಳನ್ನು ಭಾನುವಾರ ದೇಣಿಗೆಯಾಗಿ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ ಮಾತನಾಡಿ, ‘ಕೋವಿಡ್ ಸಂಕಷ್ಟದ ಸಮಯದಲ್ಲಿ ಸೋಂಕಿತರ ನೆರವಿಗೆ ಧಾವಿಸಬೇಕು. ಸೋಂಕಿತರ ಪ್ರಮಾಣ ಹಾಗೂ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ವೈದ್ಯರೊಂದಿಗೆ ಕೈಜೋಡಿಸಬೇಕು. ಆಸ್ಪತ್ರೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರಿಗೆ ಸೂಚಿಸಿದ್ದಾರೆ’ ಎಂದರು.

‘ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ 50 ಹಾಸಿಗೆಗಳನ್ನು 100ಕ್ಕೆ ಏರಿಸಲು ಅಗತ್ಯವಾದ ಪರಿಕರಗಳ ಪಟ್ಟಿಯನ್ನು ವೈದ್ಯರಿಂದ ಪಡೆದು ಸುಧಾಕರ್‌ಗೆ ನೀಡಿದರು. ಸುಧಾಕರ್ ವಿದ್ಯಾಗಣಪತಿ ದೇವಾಲಯದ ಟ್ರಸ್ಟ್‌ನೊಂದಿಗೆ ಮಾತುಕತೆ ನಡೆಸಿ 50 ಹಾಸಿಗೆಗಳು, 50 ಆಮ್ಲಜನಕ ಸಿಲಿಂಡರ್‌, ಮಂಚಗಳು, ಬೆಡ್ ಶೀಟ್, ದಿಂಬು, ವೈದ್ಯರ ಗೌನ್, ರೋಗಿಗಳ ಗೌನು, ಮಾಸ್ಕ್, ಸ್ಯಾನಿಟೈಜರ್, ಪಿಪಿಇ ಕಿಟ್‌ಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟರು’ ಎಂದು ತಿಳಿಸಿದರು.

ADVERTISEMENT

‘ಆಮ್ಲಜನಕ ಪೂರೈಸಲು ಕೇಂದ್ರೀಕೃತ ಪೈಪ್ ಲೈನ್ ವ್ಯವಸ್ಥೆಯನ್ನು ಮಾಡಿಸಿಕೊಟ್ಟಿದ್ದಾರೆ. ಕೋಚಿಮುಲ್‌ನಿಂದ ₹5 ಲಕ್ಷ ಮೌಲ್ಯದ ಔಷಧಿ ಕೊಡಿಸಿದ್ದಾರೆ’ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಸ್ವಾತಿ ಅವರಿಗೆ ಪರಿಕರಗಳನ್ನು ಹಸ್ತಾಂತರಿಸಿದರು. ಡಾ.ಜಯರಾಂ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಎನ್.ನಾಗಿರೆಡ್ಡಿ, ಎಪಿಎಂಸಿ ಅಧ್ಯಕ್ಷ ಗಂಡ್ರಗಾನಹಳ್ಳಿ ಶ್ರೀರಾಮರೆಡ್ಡಿ, ಉಪಾಧ್ಯಕ್ಷ ಮಂಜುನಾಥರೆಡ್ಡಿ, ನಿರ್ದೇಶಕ ವೆಂಕಟಶಾಮಿ, ಮುಖಂಡರಾದ ಜಗದೀಶ್, ಮಂಜುನಾಥರೆಡ್ಡಿ, ಉಮೇಶ್ ಮತ್ತಿತರರು ಭಾಗವಹಿಸಿದ್ದರು.

ಸಹಕಾರಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಬೆಡ್‌ಗಳು, ಸಿಲಿಂಡರ್, ಔಷಧಿಗಳನ್ನು 3-4 ದಿನಗಳಲ್ಲೇ ವ್ಯವಸ್ಥೆ ಮಾಡುವ ಮೂಲಕ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಕೋವಿಡ್ ನಿಯಂತ್ರಣ ಮಾಡಲು ಸಹಕಾರಿಯಾಗಿದ್ದಾರೆ ಎಂದು ನಗರಸಭೆ ಅಧ್ಯಕ್ಷ ರೇಖಾ ಉಮೇಶ್ ನುಡಿದರು.

ನಗರಸಭೆ ಆವರಣದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಷಯ್ ಕುಮಾರ್, ನಗರಸಭೆ ಸದಸ್ಯ ಶಫೀಕ್ ಮಾತನಾಡಿ, ‘ಶಾಸಕರ ಅನುದಾನದಲ್ಲಿ ₹1 ಕೋಟಿ ಕೋವಿಡ್ ನಿಯಂತ್ರಣಕ್ಕೆ ಉಪಯೋಗಿಸಿ. ಇದು ರಾಜಕೀಯ ಮಾಡುವ ಸಮಯವಲ್ಲ. ಜನರ ಪ್ರಾಣ ಉಳಿಸಲು ಬೇಕಾಗಿರುವ ಕೆಲಸವನ್ನು ಮಾಡಬೇಕು’ ಎಂದು ಶಾಸಕರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.