ಬಾಗೇಪಲ್ಲಿ: ಬಾಗೇಪಲ್ಲಿಯನ್ನು ‘ಭಾಗ್ಯಪುರ’ ಎಂದು ಮರುನಾಮಕರಣ ಮಾಡಿ ಕನ್ನಡೀಕರಣ ಮಾಡುವಂತೆ ಒತ್ತಾಯಿಸಿ ಕನ್ನಡ ಸೇನೆ, ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ತಾಲ್ಲೂಕು ಘಟಕದ ಮುಖಂಡರು ಬುಧವಾರ ತಾಲ್ಲೂಕು ಕಚೇರಿ ಮುಂದೆ ತಹಶೀಲ್ದಾರ್ ಎಂ. ನಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡ ಸೇನೆಯ ಮುಖಂಡ ಬಿ.ಎ. ಬಾಬಾಜಾನ್ ಮಾತನಾಡಿ, ಬಾಗೇಪಲ್ಲಿ ತಾಲ್ಲೂಕು ಆಂಧ್ರಪ್ರದೇಶದ ಗಡಿ ಅಂಚಿನಲ್ಲಿದೆ. ಬಾಗೇಪಲ್ಲಿ ಎಂಬ ಹೆಸರು ತೆಲುಗು ಭಾಷೆಯಲ್ಲಿ ಇದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದಿವೆ. 65ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಆದರೆ, ಬಾಗೇಪಲ್ಲಿ ಎಂಬ ತೆಲುಗು ಪದವನ್ನು ಕನ್ನಡೀಕರಣ ಮಾಡಿಲ್ಲ ಎಂದು ದೂರಿದರು.
ರಾಜ್ಯದ ಜಿಲ್ಲೆಗಳಾದ ಬೆಳಗಾಂ ಅನ್ನು ಬೆಳಗಾವಿ, ಬಿಜಾಪುರವನ್ನು ವಿಜಯಪುರ, ಗುಲ್ಬರ್ಗವನ್ನು ಕಲಬುರ್ಗಿಯೆಂದು ಸರ್ಕಾರ ಮರುನಾಮಕರಣ ಮಾಡಿದೆ. ಇದೇ ಮಾದರಿಯಲ್ಲಿ ಬಾಗೇಪಲ್ಲಿಯನ್ನೂ ಭಾಗ್ಯಪುರ ಎಂದು ಮರುನಾಮಕರಣ ಮಾಡಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಲೇ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಆರ್. ರವೀಂದ್ರ, ಪ್ರಧಾನ ಕಾರ್ಯದರ್ಶಿ ಮುನಿರಾಜು, ಷೇಕ್ ಹಿದಾಯಿತ್ ಉಲ್ಲಾ, ಕರಾಟೆ ರಿಯಾಜ್ ಅಹಮದ್, ಬಿ.ವಿ. ವೆಂಕಟಶಿವಪ್ಪ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಶಾಂತಿ, ಭಾಗ್ಯಮ್ಮ, ರಾಣಿ, ಪಾರ್ವತಿ, ಮೇರಿ, ವನಜಾ, ಆಂಜಿ, ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ತಾಲ್ಲೂಕು ಅಧ್ಯಕ್ಷ ವಿ. ಮಂಜುನಾಥ್, ಮಹಿಳಾ ಅಧ್ಯಕ್ಷೆ ಅಸ್ವಿಯಾ, ಮಂಜುನಾಥ್, ವಿಜಯ್ ಕುಮಾರ್, ಸುಧಾಕರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.