ADVERTISEMENT

ಗ್ರಾಮ ಪಂಚಾಯಿತಿ ಸ್ಥಾನ ಹರಾಜು: ದೂರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 3:54 IST
Last Updated 19 ಡಿಸೆಂಬರ್ 2020, 3:54 IST
ಚಿಂತಾಮಣಿ ತಾಲ್ಲೂಕಿನ ಸಿದ್ಧಿಮಠ ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆ ರದ್ದುಪಡಿಸಿ ಚುನಾವಣೆ ನಡೆಸಬೇಕು ಎಂದು ತಹಶೀಲ್ದಾರ್‌ಗೆ ದೂರು ಸಲ್ಲಿಸಿದರು
ಚಿಂತಾಮಣಿ ತಾಲ್ಲೂಕಿನ ಸಿದ್ಧಿಮಠ ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆ ರದ್ದುಪಡಿಸಿ ಚುನಾವಣೆ ನಡೆಸಬೇಕು ಎಂದು ತಹಶೀಲ್ದಾರ್‌ಗೆ ದೂರು ಸಲ್ಲಿಸಿದರು   

ಚಿಂತಾಮಣಿ: ದೊಡ್ಡಗಂಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಿಮಠ ಗ್ರಾಮ ಪಂಚಾಯಿತಿಯ ಎರಡು ಸ್ಥಾನಗಳಿಗೆ ಹಣದ ಅಮಿಷವೊಡ್ಡಿ ₹3 ಲಕ್ಷಕ್ಕೆ ಹರಾಜು ಪ್ರಕ್ರಿಯೆ ನಡೆಸಿ, ಚುನಾವಣಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಗ್ರಾಮದ ಬಕ್ಷುಖಾನ್ ನೇತೃತ್ವದಲ್ಲಿ ಕೆಲವರು ತಹಶೀಲ್ದಾರ್ ಹನುಮಂತರಾಯಪ್ಪ ಅವರಿಗೆ ಶುಕ್ರವಾರ ದೂರು ನೀಡಿದರು.

‘ಗ್ರಾಮದ ಕೆಲವು ಜೆಡಿಎಸ್ ಮುಖಂಡರು, ದರ್ಗಾ ಅಧ್ಯಕ್ಷ ಪೀರ್ಪಾಷಾ, ಷೇಖ್ ದಾವುದ್ ಪಾಷಾ, ಅಫ್ಸರ್ ಪಾಷಾ ಗುಂಪು ಸೇರಿಕೊಂಡು ಶಬೀರ್ ಖಾನ್ ಮನೆಯಲ್ಲಿ ₹3 ಲಕ್ಷಕ್ಕೆ ವ್ಯವಹಾರ ನಡೆಸಿರುವುದು ಸತ್ಯವಾಗಿರುತ್ತದೆ. ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾದ ಡಿ.11ರ ಸಂಜೆಯವರೆಗೂ ನನ್ನನ್ನು ಹೊರಗೆ ಬಿಡದೆ ಕೂಡಿ ಹಾಕಿದ್ದರು’ ಎಂದು ಬಕ್ಷು ಖಾನ್ ದೂರಿನಲ್ಲಿ ತಿಳಿಸಿದ್ದಾರೆ.

‘ನಾಮಪತ್ರ ಸಲ್ಲಿಸುವ ಅವಧಿ ಮುಗಿಯುವವರೆಗೂ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಗ್ರಾಮದ ಮುಖಂಡರೊಂದಿಗೂ ಚರ್ಚಿಸದೆ ಕೆಲವೇ ಮಂದಿ ಸೇರಿಕೊಂಡು ನಾಮಪತ್ರ ಸಲ್ಲಿಸಲು ಅವಕಾಶ ನೀಡಿಲ್ಲ. ಅವಿರೋಧ ಆಯ್ಕೆಯಾಗಿರುವುದಾಗಿ ಶಾಸಕರೊಂದಿಗೆ ವಿಜಯೋತ್ಸವ ಆಚರಿಸಿರುವುದು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಹರಾಜು ಪ್ರಕ್ರಿಯೆ ಮೂಲಕ ಅವಿರೋಧ ಆಯ್ಕೆ ಮಾಡಿರುವ ಸ್ಥಾನಗಳನ್ನು ರದ್ದುಪಡಿಸಬೇಕು. ಗ್ರಾಮದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

ತಹಶೀಲ್ದಾರ್ ಹನುಮಂತರಾಯಪ್ಪ ಮನವಿಯನ್ನು ಸ್ವೀಕರಿಸಿ ಕಾನೂನಿನಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.