ADVERTISEMENT

ಗೌರಿಬಿದನೂರು: ಹಾಲಗಾನಹಳ್ಳಿ ಅಂಚೆ ಕಚೇರಿಗೆ ಮುತ್ತಿಗೆ

ಗ್ರಾಹಕರ ಹಣ ಪಡೆದು ಪರಾರಿಯಾದ ಪೋಸ್ಟ್‌ಮನ್: ಆರೋಪ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:55 IST
Last Updated 27 ಡಿಸೆಂಬರ್ 2025, 5:55 IST
ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಹಣ ಗುಳುಂ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿದರು
ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಹಣ ಗುಳುಂ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿದರು   

ಗೌರಿಬಿದನೂರು: ಅಂಚೆ ಕಚೇರಿಯ ಪೋಸ್ಟ್‌ಮನ್ ಒಬ್ಬರು ಗ್ರಾಹಕರ ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಿ ಹಾಲಗಾನಹಳ್ಳಿ ಗ್ರಾಮಸ್ಥರು ಅಂಚೆ ಕಚೇರಿಗೆ ಮುತ್ತಿಗೆ ಹಿರಿಯ ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿಹಾಕಿ ಪ್ರತಿಭಟನೆ ನಡೆಸಿದರು. 

‘ಅಂಚೆ ಕಚೇರಿಯಲ್ಲಿನ ನಮ್ಮ ಖಾತೆಗಳಿಗೆ ಹಣ ಹಾಕುವುದಾಗಿ ಹೇಳಿ ಪೋಸ್ಟ್‌ಮನ್ ರಮ್ಯಾ ಅವರು ನಮ್ಮಿಂದ ಹಣ ಪಡೆದಿದ್ದಾರೆ. ಹೀಗೆ, ಪಡೆದ ಹಣವನ್ನು ರಮ್ಯಾ ಅವರು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ನಮ್ಮ ಖಾತೆಗಳಿಗೆ ಹಣ ಹಾಕಿರುವುದಾಗಿ ನಮ್ಮ ಪಾಸ್ ಪುಸ್ತಕದಲ್ಲಿ ಬರವಣಿಗೆಯಲ್ಲಿ ಬರೆದುಕೊಟ್ಟಿದ್ದಾರೆ. ಆನ್‌ಲೈನ್ ಎಂಟ್ರಿ ಮಾಡಿರಲಿಲ್ಲ. ಇದೇ ರೀತಿ ಸುಮಾರು 1,000ದಿಂದ 1,200 ಫಲಾನುಭವಿಗಳಿಂದ ಸುಮಾರು ₹2 ಕೋಟಿ ವಂಚನೆ ಮಾಡಿದ್ದಾರೆ’ ಎಂದು ಫಲಾನುಭವಿಗಳು ದೂರಿದ್ದಾರೆ. 

ಗಂಗಾಧರ್ ಎಂಬುವರು ತನ್ನ ಖಾತೆಯಲ್ಲಿ ತಾನು ಹಾಕಿದ ಹಣವಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ, ಇತರರು ತಮ್ಮ ಖಾತೆಯಲ್ಲಿ ಹಣವಿಲ್ಲ ಎಂದು ಹೇಳುತ್ತಿದ್ದಾರೆ. 

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮದ ಮಹಿಳೆಯರು, ‘ಪ್ರತಿದಿನ ಮನೆ ಬಳಿಗೆ ಬರುತ್ತಿದ್ದ ರಮ್ಯಾ ಅವರು ಹಣ ಕಟ್ಟಿಸಿಕೊಂಡು ಕೈಬರಹದಲ್ಲಿ ಹಣ ಕಟ್ಟಿದ ರಸೀದಿಗೆ ಅಂಚೆ ಇಲಾಖೆಯ ಸೀಲ್ ಹಾಕಿ ಕೊಡುತ್ತಿದ್ದರು. ರಮ್ಯಾ ನಮ್ಮ ಖಾತೆಗೆ ಹಣ ಹಾಕಿದ್ದಾರೆ ಎಂದು ಭಾವಿಸುತ್ತಿದ್ದೆವು. ಕಳೆದ ಭಾನುವಾರ ಬಂದು ಆಡಿಟ್ ಮಾಡಬೇಕು ಎಂದು ಹೇಳಿ ಹೆಚ್ಚು ಹಣ ಕಟ್ಟಿದವರ ಎಲ್ಲ ಪಾಸ್ ಪುಸ್ತಕಗಳನ್ನು ರಮ್ಯಾ ತೆಗೆದುಕೊಂಡು ಹೋಗಿದ್ದಾರೆ. ಈ ವಿಚಾರ ತಿಳಿದು ರಮ್ಯಾ ಅವರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ’ ಎಂದು ಹೇಳಿದರು. 

ಹಣ ಕಳೆದುಕೊಂಡವರಲ್ಲಿ ಬಹುತೇಕರು ಮಹಿಳೆಯರು, ಅನಕ್ಷರಸ್ಥರು ಹಾಗೂ ವಯೋವೃದ್ಧರೇ ಹೆಚ್ಚಿನವರಿದ್ದಾರೆ. ಮಗಳ ಮದುವೆ ಮಾಡಲು ಹಣ ಕೂಡಿಟ್ಟಿದ್ದೆ. ಜಮೀನು ಮಾರಿದ ಹಣವನ್ನು ಪೋಸ್ಟ್ ಮಾಸ್ಟರ್ ರಮ್ಯಾ ಅವರಿಗೆ ನೀಡಿದ್ದೆ. ಹಸು ಮಾರಿದ ಹಣವನ್ನು ಠೇವಣಿ ಮಾಡಲು ಕೊಟ್ಟಿದ್ದೆ. ಮನೆ ಕಟ್ಟಲು, ಜೀವನ ನಡೆಸಲು ಹೀಗೆ ಪರಿಪರಿಯಾಗಿ ವಯೋವೃದ್ಧ ಮಹಿಳೆಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಹಾಲಗಾನಹಳ್ಳಿ ಅಂಚೆಕಚೇರಿಯಲ್ಲಿ ಹಣದ ಅವ್ಯವಹಾರದ ಬಗ್ಗೆ ಗ್ರಾಹಕರೊಬ್ಬರು ದೂರು ನೀಡಿದ ಮೇರೆಗೆ ನಾವು ಪರಿಶೀಲನೆ ನಡೆಸಿದಾಗ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅನಕ್ಷರಸ್ಥರು, ವೃದ್ಧರೇ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ, ಎಲ್ಲ ಗ್ರಾಹಕರ ಹಣವನ್ನು ಹಿಂತಿರುಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅಂಚೆ ಕಚೇರಿ ನಿರೀಕ್ಷಕ ಹನುಮಂತಪ್ಪ ತಿಳಿಸಿದ್ದಾರೆ.

ಅಂಚೆ ಕಚೇರಿಯ ಮೇಲಧಿಕಾರಿಗಳು ಮತ್ತು ಗ್ರಾಮಾಂತರ ಪೊಲೀಸರು ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಹಣ ಗುಳುಂ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಕಚೇರಿಗೆ ಮುತ್ತಿಗೆ ಹಾಕಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.