ADVERTISEMENT

ವೈದ್ಯರ ಪರ, ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:10 IST
Last Updated 3 ಆಗಸ್ಟ್ 2021, 4:10 IST
ಚಿಂತಾಮಣಿ ತಾಲ್ಲೂಕಿನ ಕುರುಬೂರಿನಲ್ಲಿ ವೈದ್ಯಾಧಿಕಾರಿ ವಿರುದ್ಧವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು
ಚಿಂತಾಮಣಿ ತಾಲ್ಲೂಕಿನ ಕುರುಬೂರಿನಲ್ಲಿ ವೈದ್ಯಾಧಿಕಾರಿ ವಿರುದ್ಧವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು   

ಚಿಂತಾಮಣಿ: ತಾಲ್ಲೂಕಿನ ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯಾಧಿಕಾರಿಗಳ ಪರ ಮತ್ತು ವಿರುದ್ಧವಾಗಿ ಎರಡು ಗುಂಪುಗಳು ಸೋಮವಾರ ಪ್ರತಿಭಟನೆ ನಡೆಸಿವೆ.

ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಸುಮಾರು 7-8 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಜನರಿಗೆ ಸ್ಪಂದಿಸುತ್ತಿಲ್ಲ, ಅವರ ಚಿಕಿತ್ಸೆ ಶೈಲಿ ಸರಿಯಿಲ್ಲ.ರೋಗಿಯನ್ನು ಮುಟ್ಟಿ ನೋಡದೆ ಚಿಕಿತ್ಸೆ ನೀಡುತ್ತಾರೆ. ಒರಟಾಗಿ ನಡೆದುಕೊಳ್ಳುತ್ತಾರೆ ಎಂದು ಒಂದು ಗುಂಪು ಆರೋಪಿಸಿತು.

ವೈದ್ಯಾಧಿಕಾರಿಯ ವಿರುದ್ಧ ಯಾವುದೇವೈಯಕ್ತಿಕ ದ್ವೇಷವಿಲ್ಲ. ಅವರು ಚಿಕಿತ್ಸೆ ನೀಡುವ ವಿಧಾನ ಹಾಗೂ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ರೀತಿ ಬದಲಾಗಬೇಕು ಎಂಬುದು ಮಾತ್ರ ಪ್ರತಿಭಟನೆಯ ಉದ್ದೇಶವಾಗಿದೆ. ಅವರನ್ನು ವರ್ಗಾವಣೆ ಮಾಡಬೇಕು ಅಥವಾ ಕ್ರಮಕೈಗೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.

ADVERTISEMENT

ಚಂದ್ರೇಗೌಡ, ಮಲ್ಲಿಕಾರ್ಜುನಗೌಡ, ರಮೇಶ್, ನಂಜೇಗೌಡ, ಅಶೋಕ್ ಮತ್ತಿತರರು ಪ್ರತಿಭಟನೆ ನಡೆಸಿ ತಹಶೀಲ್ದಾರ್
ಮನವಿ ಸಲ್ಲಿಸಿದರು.

ವೈದ್ಯರ ಪರವಾಗಿ ಪ್ರತಿಭಟನೆ ನಡೆಸಿದ ಮತ್ತೊಂದು ಗುಂಪು ತಾಲ್ಲೂಕು ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿ, ಡಾ.ಪೂರ್ಣಿಮಾ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರು, ವೃದ್ಧರು ಮತ್ತು ಮಹಿಳೆಯರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಯಾವುದೇ ಒತ್ತಡ, ಆಸೆ, ಅಮಿಷಗಳಿಗೆ ಒಳಗಾಗದ ಕಾರಣದಿಂದ ಕೆಲವರು ಸಣ್ಣ ಪುಟ್ಟ ಕಾರಣಗಳಿಗೂ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಬಡವರ ಪಾಲಿಗೆ ಬೆಳಕಾಗಿದ್ದು, ಇವರಿಂದ ಯಾರಿಗೂ ತೊಂದರೆಯಾಗಿಲ್ಲ. ಒಬ್ಬ ಮುಖಂಡನ ಮನೆಗೆ ಹೋಗಿ ಚಿಕಿತ್ಸೆ ನೀಡದ ಕಾರಣದಿಂದ ಇಲ್ಲ ಸಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ. ಗ್ರಾಮೀಣಭಾಗಗಳಲ್ಲಿ ಸೇವೆ ಸಲ್ಲಿಸಲು ವೈದ್ಯರೇ ಬರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ ವೈದ್ಯರ ವಿರುದ್ಧವೈಯಕ್ತಿಕ ಕಾರಣಗಳಿಂದ ಪ್ರತಿಭಟನೆ ನಡೆಸುವುದು ಖಂಡನೀಯ ಎಂದು ಟೀಕಿಸಿದರು.

ಕೊರೊನಾ ಸಂಕಷ್ಟ ಸಮಯದಲ್ಲಿ ವೈದ್ಯಾಧಿಕಾರಿಗಳ ವರ್ಗಾವಣೆ ಮಾಡಬಾರದು.ವೈಯಕ್ತಿಕ ಕಾರಣಗಳಿಂದ ಪ್ರತಿಭಟನೆ ಮಾಡುವುದಕ್ಕೆ ಮನ್ನಣೆ ನೀಡಿ ಕ್ರಮಕೈಗೊಂಡರೆ ಗ್ರಾಮಸ್ಥರೆಲ್ಲ ಸೇರಿ ಉಗ್ರವಾದ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಮುಖಂಡರಾದ ನಟರಾಜ್, ಸುರೇಂದ್ರಗೌಡ, ಲಕ್ಷ್ಮೀನರಸಪ್ಪ, ನಂಜುಂಡಗೌಡ, ನಾಗರಾಜಪ್ಪ, ಕೃಷ್ಣಪ್ಪ, ಶಿವಾನಂದ್, ತಿಪ್ಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.