ADVERTISEMENT

2,927 ರೈತರಿಗೆ ಬಾಕಿಯಿದೆ ರಾಗಿ ಹಣ

ಜಿಲ್ಲೆಯಲ್ಲಿ ಖರೀದಿ ಕೇಂದ್ರಕ್ಕೆ ರಾಗಿ ನೀಡಿದ 6,528 ರೈತರು; ಇನ್ನೂ ಬರಬೇಕಿದೆ ₹19 ಕೋಟಿ

ಡಿ.ಎಂ.ಕುರ್ಕೆ ಪ್ರಶಾಂತ
Published 24 ಜುಲೈ 2025, 2:55 IST
Last Updated 24 ಜುಲೈ 2025, 2:55 IST
ಗುಡಿಬಂಡೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ನಡೆದ ಸಂದರ್ಭ (ಸಂಗ್ರಹ ಚಿತ್ರ)
ಗುಡಿಬಂಡೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ನಡೆದ ಸಂದರ್ಭ (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ ಜಿಲ್ಲೆಯ 2,927 ರೈತರಿಗೆ ಇನ್ನೂ ಹಣ ಬಿಡುಗಡೆ ಸಾಧ್ಯವಾಗಿಲ್ಲ. ಇಂದು ಅಥವಾ ನಾಳೆ ಹಣ ಬಿಡುಗಡೆ ಆಗುತ್ತದೆ ಎಂದು ರೈತರು ಕಾಯುತ್ತಲೇ ಇದ್ದಾರೆ. 

ಸರ್ಕಾರದವು 2024–25 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಆದೇಶಿಸಿತ್ತು. ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರದು ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದು ನೋಂದಾಯಿಸಿತ್ತು. ನೋಂದಾಯಿತ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯು ಮಾ.1 ರಿಂದ ಎಲ್ಲಾ ತಾಲ್ಲೂಕು ಖರೀದಿ ಕೇಂದ್ರಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನುಸಾರ ನಡೆದಿದೆ. ಪ್ರತಿ ಕ್ವಿಂಟಲ್‌ಗೆ ₹4,290 ನೀಡಿ ಖರೀದಿಸಲಾಗಿದೆ. ಕರ್ನಾಟಕ ಮಾರಾಟ ಮಹಾಮಂಡಳವು ಖರೀದಿ ಸಂಸ್ಥೆಯಾಗಿದೆ.

ಈ ಮೊದಲು ಖರೀದಿ ಪ್ರಕ್ರಿಯೆ ಮಾರ್ಚ್‌ ಕೊನೆಗೆ ಅಂತ್ಯವಾಗಬೇಕಾಗಿತ್ತು. ನಂತರ ಸರ್ಕಾರವು ಈ ಪ್ರಕ್ರಿಯೆಯನ್ನು ಜೂನ್ 30ರವರೆಗೆ ವಿಸ್ತರಿಸಿತು. 

ADVERTISEMENT

ಜಿಲ್ಲೆಯಲ್ಲಿ 7,500 ರೈತರು ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದರು. ಈ ಹಿಂದಿನ ವರ್ಷಗಳಲ್ಲಿ ನೋಂದಣಿಯಾದ ಬಹುತೇಕ ರೈತರು ರಾಗಿಯನ್ನು ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿ ಹೀಗೆ ನೋಂದಣಿಯಾದ ರೈತರೆಲ್ಲರೂ ಮಾರಾಟಕ್ಕೆ ಮುಂದಾಗಿಲ್ಲ. 

ನೋಂದಣಿಯಾದ 7,500 ರೈತರ ಪೈಕಿ 6,528 ರೈತರು ಮಾತ್ರ ರಾಗಿ ಮಾರಾಟ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7,500 ರೈತರಿಂದ ಒಟ್ಟು 1.12 ಲಕ್ಷ ಕ್ವಿಂಟಲ್ ರಾಗಿಯು ಜೂನ್ ಅಂತ್ಯಕ್ಕೆ ಖರೀದಿ ಕೇಂದ್ರಗಳನ್ನು ತಲುಪಬೇಕಾಗಿತ್ತು. ಆದರೆ ಅಷ್ಟೂ ರೈತರು ಮಾರಾಟ ಮಾಡಿಲ್ಲ. ಒಟ್ಟು 97,869 ಕ್ವಿಂಟಲ್ ರಾಗಿ ಖರೀದಿಯಾಗಿದೆ.

ಈ ಪ್ರಮಾಣದ ರಾಗಿಗೆ ಒಟ್ಟು ₹41,98 ಕೋಟಿಯನ್ನು ಪಾವತಿಸಬೇಕಾಗಿದೆ. ಆದರೆ ಈಗ ₹22,83 ಕೋಟಿ ರೈತರ ಖಾತೆಗಳಿಗೆ ಜಮೆ ಆಗಿದೆ. ಇನ್ನೂ ₹19.14 ಕೋಟಿ ಪಾವತಿಸಬೇಕು. ಒಟ್ಟಾರೆ ಜಿಲ್ಲೆಯಲ್ಲಿ ರಾಗಿ ನೀಡಿದ ಶೇ 54ರಷ್ಟು ಮಂದಿಗೆ ಹಣ ‌ಪಾವತಿಯಾಗಿದೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಜಿಲ್ಲೆಯ ರೈತರು ರಾಗಿಯನ್ನು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿರುವುದು ಕಡಿಮೆ ಎನಿಸಿದೆ. ಈ ಹಿಂದೆ ಒಂದೂಕಾಲು ಲಕ್ಷ ಕ್ವಿಂಟಲ್‌ಗೂ ಅಧಿಕ ರಾಗಿಯನ್ನು ಖರೀದಿ ಕೇಂದ್ರಕ್ಕೆ ರೈತರು ನೀಡಿದ್ದಾರೆ. ಆದರೆ ಈ ಬಾರಿ ಒಂದು ಲಕ್ಷ ಕ್ವಿಂಟಲ್ ಒಳಗೆ ಖರೀದಿಯಾಗಿದೆ.

‘ಮುಂಗಾರು ಅವಧಿಯಲ್ಲಿ ಕೃಷಿ ಚಟುವಟಿಕೆಗೆ ಹಣ ಅಗತ್ಯ. ಸರ್ಕಾರ ತಕ್ಷಣವೇ ರಾಗಿ ಮಾರಾಟ ಮಾಡಿದ ಹಣವನ್ನು ಬಿಡುಗಡೆ ಮಾಡಬೇಕು’ ಎಂದು ಜಿಲ್ಲೆಯ ರೈತರು ಆಗ್ರಹಿಸುವರು. 

ವಾರದಲ್ಲಿ ಖಾತೆಗೆ ಹಣ

ರಾಜ್ಯದ ಎಲ್ಲ ಕಡೆಯೂ ಇದೆ ರೀತಿಯಲ್ಲಿ ಆಗಿದೆ. ಸರ್ಕಾರ ಈಗಾಗಲೇ ಮಾಹಿತಿ ಸಹ ಪಡೆದಿದೆ. ಇನ್ನೊಂದು ವಾರದಲ್ಲಿ ರಾಗಿ ಖರೀದಿ ಹಣ ರೈತರ ಖಾತೆಗಳಿಗೆ ಜಮೆ ಆಗುವ ಸಾಧ್ಯತೆ ಎಂದು ಅಧಿಕಾರಿಗಳು ಮಾಹಿತಿ ನೀಡುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.