ಚಿಂತಾಮಣಿ: ರಾಜ್ಯ ಸರ್ಕಾರಿ ನೌಕರರಿಗೆ ರದ್ದುಗೊಳಿಸಲಾಗಿರುವ 2021ನೇ ಸಾಲಿನ ರಜೆ ನಗದೀಕರಣ ಆದೇಶ ಹಿಂಪಡೆಯಬೇಕು ಹಾಗೂ ಸ್ಥಗಿತಗೊಳಿಸಿರುವ ತುಟ್ಟಿಭತ್ಯೆ ಬಿಡುಗಡೆ ಮಾಡಬೇಕು ಎಂದು ಸರ್ಕಾರಿ ನೌಕರರ ಒಕ್ಕೂಟ ಒತ್ತಾಯಿಸಿದೆ.
ಸರ್ಕಾರಿ ನೌಕರರು ತಮ್ಮ ಖಾತೆಯಲ್ಲಿರುವ ರಜೆಯನ್ನು ನಗದೀಕರಿಸಿಕೊಂಡು ಮಕ್ಕಳ ಶಾಲಾ ಶುಲ್ಕ, ಆರೋಗ್ಯ ವೆಚ್ಚ ಅಥವಾ ಯಾವುದಾದರೂ ಆರ್ಥಿಕ ಸಂಕಷ್ಟದ ಸಮಯದಲ್ಲಿ ಉಪಯೋಗಿಸಿಕೊಳ್ಳುತ್ತಿದ್ದರು. ಕೋವಿಡ್-19 ನೆಪದಿಂದ ಕಳೆದ ವರ್ಷ ತುಟ್ಟಿಭತ್ಯೆಯನ್ನು ನೀಡದೆ ಸ್ಥಗಿತಗೊಳಿಸಿತ್ತು. ಈ ವರ್ಷವೂ ಸೌಲಭ್ಯ ಕಸಿದುಕೊಂಡಿರುವುದು ನೌಕರರಿಗೆ ತೊಂದರೆಯಾಗಿದೆ ಎಂದು ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ಬಾರೆಡ್ಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇರುವ ಜವಾಬ್ದಾರಿಯ ಜತೆಗೆ ಹೆಚ್ಚುವರಿ ಕೆಲಸವನ್ನು ಹಾಲಿ ನೌಕರರು ನಿರ್ವಹಿಸುತ್ತಿದ್ದಾರೆ. ಸರ್ಕಾರ ನೌಕರರಿಗೆ ಮಾತ್ರ ಆರ್ಥಿಕ ಮಿತವ್ಯಯದ ನೆಪ ಹೇಳುತ್ತಿದೆ. ನಿಗಮ, ಮಂಡಳಿಗಳಿಗೆ ಅಧ್ಯಕ್ಷ, ನಿರ್ದೇಶಕರನ್ನು ನೇಮಕ ಮಾಡಲಾಗುತ್ತಿದೆ. ಅವರ ಮನೆ ಬಾಡಿಗೆ, ಸಾರಿಗೆ ವೆಚ್ಚ, ವೇತನ, ದೂರವಾಣಿ, ವಿದ್ಯುತ್, ನೀರಿನ ಶುಲ್ಕ, ಪ್ರವಾಸ ಭತ್ಯೆ ಮತ್ತಿತರ ಸೌಲಭ್ಯಗಳಿಗಾಗಿ ನೂರಾರು ಕೋಟಿ ರೂಪಾಯಿಯನ್ನು ವ್ಯಯ ಮಾಡುತ್ತಿದೆ ಎಂದಿದ್ದಾರೆ.
ಸರ್ಕಾರ ತಡೆಹಿಡಿದಿರುವ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಬೇಕು. ರಜೆ ನಗದೀಕರಣ ಸೌಲಭ್ಯವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.