ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳು ಇಂದಿನ ದಿನಗಳಲ್ಲಿ ಮೊಬೈಲ್ ದಾಸರಾಗಿ ವಿದ್ಯಾರ್ಥಿದೆಸೆಯಲ್ಲಿ ಮಾಡಬಹುದಾದ ಸಾಧನೆಗಳಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಜಾಗೃತರಾಗದಿದ್ದಲ್ಲಿ ತಮ್ಮ ಜೀವಿತಾವಧಿಯಲ್ಲಿ ತುಂಬಾ ಪಶ್ಚಾತ್ತಾಪ ಪಡಬೇಕಾಗುತ್ತದೆ’ ಎಂದು ಮಂಡಿಕಲ್ಲು ಗ್ರಾಮ ಪಂಚಾಯಿತಿ ಸದಸ್ಯ ಎಂ.ರಾಮಕೃಷ್ಣ ಹೇಳಿದರು.
ಮಂಡಿಕಲ್ಲು ಕರ್ನಾಟಕ ಪಬ್ಲಿಕ್ ಶಾಲೆಯಯಲ್ಲಿ ಆಯೋಜಿಸಿದ್ದ ಫ್ರೌಢಶಾಲಾ ವಿಭಾಗದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ಅಭ್ಯಾಸ ಮಾಡುವ ಅಗತ್ಯವಿದೆ. ಬರೀ ಅಂಕಕ್ಕೆ ಸೀಮಿತರಾಗದೆ ಶಿಕ್ಷಣದ ಜತೆಗೆ ಶಿಸ್ತು, ಜ್ಞಾನದ ಶಕ್ತಿ, ಮಾನವೀಯ ಮೌಲ್ಯಗಳು, ಹೃದಯವಂತಿಕೆ, ಬದುಕಿನ ಮೌಲ್ಯಗಳನ್ನು ಸ್ವಯಂ ರೂಢಿಸಿಕೊಳ್ಳಬೇಕು. ಗುರುಹಿರಿಯರು, ತಂದೆ–ತಾಯಿಗಳನ್ನು ಗೌರವ ಗುಣ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
‘ಕಠಿಣ ಪರಿಶ್ರಮ, ಸತತ ಪ್ರಯತ್ನ ತೋರುವ ವಿದ್ಯಾರ್ಥಿಗಳು ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಪ್ರಸ್ತುತ ಜಾಗತೀಕರಣ ಯುಗದಲ್ಲಿ ವಿದ್ಯಾರ್ಥಿಗಳ ಎದುರು ಅನೇಕ ಸವಾಲುಗಳಿವೆ. ಅವೆಲ್ಲವನ್ನೂ ಮೆಟ್ಟಿ ಯಶಸ್ಸು ಸಾಧಿಸಬೇಕು. ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವಾದದ್ದು. ಆದ್ದರಿಂದ ಸಮಯವನ್ನು ವ್ಯರ್ಥ ಮಾಡದೆ ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕು ಎಂದರು.
ಉಪಪ್ರಾಂಶುಪಾಲ ಎ.ಎಚ್.ಕೃಷ್ಣಮೂರ್ತಿ ಮಾತನಾಡಿ, ‘ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಶಿಸ್ತುಬದ್ಧ ಜೀವನ ಅಳವಡಿಸಿಕೊಳ್ಳುವುದು ಮುಖ್ಯ. ಶಿಸ್ತು ಮತ್ತು ಪ್ರಾಮಾಣಿಕತೆಯು ತಮ್ಮ ಮುಂದಿನ ಗುರಿಯನ್ನು ಸಾಧಿಸಲು ಸಹಾಯವಾಗುತ್ತದೆ. ಉತ್ತಮ ಅಂಕಗಳೊಂದಿಗೆ ಜೀವನಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಮುಖ್ಯ’ ಎಂದು ಹೇಳಿದರು.
ಪ್ರಾಂಶುಪಾಲೆ ಗೀತಾ, ಗ್ರಾಮ ಪಂಚಾಯಿತಿ ಸದಸ್ಯ ಫಯಾಝ್, ಮುಖಂಡ ವಿ.ವೆಂಕಟೇಶ್, ಶಿಕ್ಷಕರಾದ ಸತ್ಯನಾರಾಯಣ, ಗುಪ್ತಾ, ಶಿಕ್ಷಕಿಯರಾದ ಸರ್ವಮಂಗಳಾ, ಜ್ಯೋತಿ, ವಾಣಿಶ್ರೀ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.