ADVERTISEMENT

₹50 ಲಕ್ಷ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 3:04 IST
Last Updated 27 ಫೆಬ್ರುವರಿ 2021, 3:04 IST
ಗುಡಿಬಂಡೆ ತಾಲ್ಲೂಕು ಕಚೇರಿ ಮುಂಭಾಗ ಐಕ್ಯ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು
ಗುಡಿಬಂಡೆ ತಾಲ್ಲೂಕು ಕಚೇರಿ ಮುಂಭಾಗ ಐಕ್ಯ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು   

ಗುಡಿಬಂಡೆ: ‘ಹಿರೇನಾಗವಲ್ಲಿ ಬಳಿ ನಡೆ ಜಿಲೆಟಿನ್ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ತಲಾ ₹50 ಲಕ್ಷ ಪರಿಹಾರ ನೀಡಬೇಕು. ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು’ ಎಂದು ದಸಂಸ ಮುಖಂಡ ಜಿ.ವಿ.ಗಂಗಪ್ಪ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಐಕ್ಯ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಭ್ರಮರವಾಸಿನಿ ಜಲ್ಲಿ ಕ್ರಷರ್ ಬಳಿಯ ಸ್ಫೋಟಕ್ಕೆ ಕೆಲವು ಅಧಿಕಾರಿಗಳ ದಿವ್ಯನಿರ್ಲಕ್ಷ್ಯವೇ ಕಾರಣ. ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದಷ್ಟು ಜಿಲೆಟಿನ್ ಸ್ಫೋಟಕ ಸಿಗುತ್ತಿದೆ ಎಂದರೆ ಇನ್ನಷ್ಟು ಸ್ಫೋಟಕಗಳು ಸಂಗ್ರಹವಾಗಿತ್ತು ಎಂಬುದು ಅರ್ಥವಾಗುತ್ತದೆ. ತಮ್ಮ ಅಕ್ರಮ ಸಂಪಾದನೆಗಾಗಿ ಅಮಾಯಕ ಕಾರ್ಮಿಕರನ್ನು ಸಾವಿಗೆ ದೂಡಿದ ಬಂಡವಾಳಶಾಹಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರೈತ ಸಂಘದ ಮುಖಂಡ ವರದರಾಜು ಮಾತನಾಡಿ, ‘ಸ್ಫೋಟದಲ್ಲಿ ವಿನಾಕಾರಣ ಗುಡಿಬಂಡೆಯ ಹೆಸರನ್ನು ಸೇರಿಸುತ್ತಿದ್ದಾರೆ. ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ. ಆದರೆ ಗುಡಿಬಂಡೆ ಹಿರೇನಾಗವಲ್ಲಿ ಎಂದು ಬಿಂಬಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ರಸ್ತೆಗಳು ಹಾಳಾಗುತ್ತಿದೆ. ಜೊತೆಗೆ ಗಣಿಗಾರಿಕೆಯ ಸುತ್ತಮುತ್ತಲಿನ ಕೃಷಿ ಭೂಮಿಯೂ ಸಹ ಹಾಳಾಗುತ್ತಿದೆ’ ಎಂದರು.

ಐಕ್ಯ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ತಾ.ಪಂ. ಸದಸ್ಯ ಮಂಜುನಾಥ್, ಡಿವೈಎಫ್‌ಐನ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ಇಸ್ಕೂಲಪ್ಪ, ಆದಿನಾರಾಯಣಪ್ಪ, ನರಸಿಂಹಪ್ಪ, ರೈತ ಸಂಘದ ಆನಂದರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.