ಚಿಕ್ಕಬಳ್ಳಾಪುರ: ಪರಭಾಷೆಯ ಚಿತ್ರಗಳು ಕನ್ನಡ ನೆಲದಲ್ಲಿ ಬೇಡ ಎಂದು ನಾವು ಮೈಸೂರಿನಲ್ಲಿ ಮಾ.19ರಂದು ಚಳವಳಿ ಮಾಡುತ್ತಿದ್ದೆವು. ಆದರೆ ಅಂದೇ ಇಲ್ಲಿಆರ್ಆರ್ಆರ್ ಸಿನಿಮಾದ ಕಾರ್ಯಕ್ರಮ ನಡೆದಿದೆ. ಇದುಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ಅಪಮಾನ ಎಂದು ಕನ್ನಡ ವಾಟಾಳ್ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಕನ್ನಡ ಚಿತ್ರಗಳಿಗೆ ಅವಕಾಶವಿಲ್ಲ. ಆದರೆ ನಮ್ಮಲ್ಲಿ ಮಾತ್ರ ಬೇರೆ ಭಾಷೆ ಚಿತ್ರಗಳಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದರು.
ಇದುಕನ್ನಡಿಗರ ನೆಲ. ಕನ್ನಡಕ್ಕೆ ಮಾನ್ಯತೆ, ಗೌರವ ದೊರೆಯಬೇಕು. ಇಲ್ಲಿ ತೆಲುಗು ಚಿತ್ರ ಆರ್ಆರ್ಆರ್ ಕಾರ್ಯಕ್ರಮ ಮಾಡಿದ್ದಾರೆ. ಆದರೆ ಕನ್ನಡಕ್ಕೆ ಗೌರವ ಕೊಟ್ಟಿಲ್ಲ ಎಂದು ದೂರಿದರು.
ಆಂಧ್ರಪ್ರದೇಶ, ಹೈದರಾಬಾದ್, ತೆಲಂಗಾಣದಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿ.ನಂದಿ ಬೆಟ್ಟದ ಬಳಿಗೆ ಬಂದು ಚಿತ್ರದ ಪ್ರಚಾರ ಮಾಡಿ ಕನ್ನಡಿಗರ ನೆಲವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಕನ್ನಡ ಭಾಷೆಯ ಮೇಲೆ ದೌರ್ಜನ್ಯ ಸರಿಯಲ್ಲ. ಇಲ್ಲಿಯೇ ಏಕೆ ಕಾರ್ಯಕ್ರಮ ನಡೆಸಿದರು ಎನ್ನುವ ಬಗ್ಗೆ ಸಮಗ್ರವಾಗಿ ಉನ್ನತ ಮಟ್ಟದ ತನಿಖೆ ಆಗಬೇಕು. ಅವರ ವ್ಯಾಪಾರಕ್ಕಾಗಿ ಕನ್ನಡಿಗರ ಭೂಮಿಯನ್ನು ಉಪಯೋಗಿವುದು ಅಕ್ಷಮ್ಯ. ಈ ವಿಚಾರವಾಗಿ ಸಚಿವ ಡಾ.ಕೆ.ಸುಧಾಕರ್ ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.