ADVERTISEMENT

ಬಲಿಜರಿಗೆ 2ಎ ಮೀಸಲು ನೀಡಿ: ಸಮುದಾಯದ ಮುಖಂಡರ ಆಗ್ರಹ

ಯೋಗಿ ನಾರೇಯಣ ಜಯಂತಿಯಲ್ಲಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 3:35 IST
Last Updated 29 ಮಾರ್ಚ್ 2021, 3:35 IST
ಶ್ರೀಕೈವಾರ ಯೋಗಿ ನಾರೇಯಣ ಜಯಂತ್ಯುತ್ಸವದಲ್ಲಿ ಮುಖಂಡ ಬೊಮ್ಮನಹಳ್ಳಿ ನಂಜುಂಡಪ್ಪ ಮಾತನಾಡಿದರು
ಶ್ರೀಕೈವಾರ ಯೋಗಿ ನಾರೇಯಣ ಜಯಂತ್ಯುತ್ಸವದಲ್ಲಿ ಮುಖಂಡ ಬೊಮ್ಮನಹಳ್ಳಿ ನಂಜುಂಡಪ್ಪ ಮಾತನಾಡಿದರು   

ಗುಡಿಬಂಡೆ: ‘ಬಲಿಜ ಸಮಾಜವು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಪ್ರವರ್ಗ ‘2ಎ’ಗೆ ಸೇರಿಸುವಂತೆ ಜನಾಂಗದವರು ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ’ ಎಂದು ಸಮುದಾಯದ ಮುಖಂಡ ಬೊಮ್ಮನಹಳ್ಳಿ ನಂಜುಂಡಪ್ಪ ಹೇಳಿದರು.

ಪಟ್ಟಣದ ಮುತ್ಯಾಲಮ್ಮ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲ್ಲೂಕು ಬಲಿಜ ಸಂಘದಿಂದ ಆಯೋಜಿಸಿದ್ದ ಕಾಲಜ್ಞಾನಿ ಸದ್ಗುರು ಶ್ರೀಕೈವಾರ ಯೋಗಿನಾರೇಯಣ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಯೋಗಿನಾರೇಯಣ ಯತೀಂದ್ರರೇ ಕೈವಾರ ತಾತಯ್ಯ ಹೆಸರಿನಲ್ಲಿ ಖ್ಯಾತರಾಗಿದ್ದು, ಅವರ ಕಾಲಜ್ಞಾನ ಜಗತ್ತಿನಲ್ಲಿಯೇ ಪ್ರಖ್ಯಾತಿ ಹೊಂದಿದೆ. ರಾಜ್ಯದಲ್ಲಿ 40 ಲಕ್ಷ ಬಲಿಜ ಜನಸಂಖ್ಯೆ ಇದೆ. ಜನಾಂಗವು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ ಎಂದು ವಿಷಾದಿಸಿದರು.

ADVERTISEMENT

ತಾಲ್ಲೂಕು ಬಲಿಜ ಸಂಘದ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಬಲಿಜ ಜನಾಂಗ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸುಂದರ ಸಮಾಜ ಕಟ್ಟಬಹುದು. ಮೊಟ್ಟಮೊದಲ ಬಾರಿಗೆ ರಾಜ್ಯದಾದ್ಯಂತ ಕೈವಾರ ತಾತಯ್ಯ ಜಯಂತಿಯನ್ನು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯನಗರ ಸಾಮ್ರಾಜ್ಯ ಆಳಿದ ಶ್ರೀಕೃಷ್ಣದೇವರಾಯ ಬಲಿಜ ಸಮಾಜಕ್ಕೆ ಸೇರಿದವರು. ರಾಜ್ಯದ ಉದ್ದಗಲಕ್ಕೂ ಹೆಸರು ಮಾಡಿ ಸಾಮ್ರಾಜ್ಯವನ್ನು ಕಟ್ಟಿದಂತೆ ನಾವು ಕೂಡ ಸಂಘಟಿತರಾಗಿ ಸಮಾಜವನ್ನು ಶಕ್ತಿಶಾಲಿಯಾಗಿ ಬೆಳೆಸಬೇಕಾಗಿದೆ ಎಂದರು.

ಯುವ ಮುಖಂಡ ಗರುಡಚಾರ್ಲಹಳ್ಳಿ ಅಮರೇಶ್ ಮಾತನಾಡಿ, ಎಲ್ಲರೂ ಒಂದಾಗಿ ಸೇರಿ ಸಮಾಜಕ್ಕೆ ಶಕ್ತಿ ತುಂಬಿದಾಗ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಬಲಿಜ ಸಮಾಜದ ತಾಲ್ಲೂಕು ಅಧ್ಯಕ್ಷ ಬಾಲಪ್ಪ, ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ದ್ವಾರಕನಾಥ್ ನಾಯ್ಡು, ಚಂದ್ರಶೇಖರ್ ನಾಯ್ಡು, ರಾಜಪ್ಪ, ಆನಂದ್, ಅನಿಲ್ ಕುಮಾರ್, ವೆಂಕಟರಾಯಪ್ಪ, ವೆಂಕಟೇಶಪ್ಪ ಜಿ.ಎಚ್., ನಿರ್ಮಲಮ್ಮ, ಬಂಡಾರಿ ಗಂಗಾಧರ, ರಮೇಶ್ ಬಂಟು, ಆನಂದ್, ಲಕ್ಷ್ಮಿಸಾಗರ ಶೇಖರ್, ಮಹೇಶ್, ಚಲಪತಿ, ಜಿ.ಟಿ. ವೆಂಕಟೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.