ಶಿಡ್ಲಘಟ್ಟ: ನಗರದ ಕೋಟೆ ವೃತ್ತದಲ್ಲಿ ಸಮತಾ ಸೈನಿಕ ದಳದ ಶತಮಾನೋತ್ಸವ ಸಮಾರಂಭವು ಇದೇ 24ರ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾತಿವಾದಿ ಶಕ್ತಿಗಳು ಅಂಬೇಡ್ಕರ್ ಅವರ ಮೇಲೆ ದಾಳಿ ನಡೆಸಿದಾಗ ಚಳವಳಿಯ ನೇತಾರರ ಪ್ರಾಣ ರಕ್ಷಣೆಗಾಗಿ ಮಹರ್ ರೆಜಿಮೆಂಟ್ನ ಐವರು ಸೇನಾ ಯೋಧರು ಟೊಂಕಕಟ್ಟಿ ನಿಂತು ಹೋರಾಟ ನಡೆಸಿದ ಸ್ವಯಂಸೇವಕರ ಪಡೆಯೇ ಸಮತಾ ಸೈನಿಕ ದಳವಾಗಿದೆ. ಈ ಸಂಘಟನೆ ಸ್ಥಾಪನೆಯಾಗಿ ಶತಮಾನೋತ್ಸವ ವರ್ಷ ಪೂರೈಸಿದ ಕಾರಣ ಹಾಗೂ ಅಂಬೇಡ್ಕರ್ ಅವರ ಆಶಯಗಳನ್ನು ನನಸು ಮಾಡಲು ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ’ ಎಂದರು.
ಕರ್ನಾಟಕದಲ್ಲಿ 80ರ ದಶಕದಲ್ಲಿ ಸಮತಾ ಸೈನಿಕದಳ ಸಂಘಟನೆ ಸ್ಥಾಪಿಸಿದ ಸಮತಾ ಸೈನಿಕದಳದ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ ಸಮಾರಂಭ ಉದ್ಘಾಟಿಸಲಿದ್ದಾರೆ. ಸಮಾರಂಭಕ್ಕೂ ಮುನ್ನ ನಗರದ ಬಸ್ ನಿಲ್ದಾಣದಿಂದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಯಲಿದ್ದು, ರಾಜ್ಯ ಹಾಗೂ ಜಿಲ್ಲಾಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಾಗವಹಿಸಬೇಕು ಎಂದು ಹೇಳಿದರು.
ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಎನ್.ಬಾಬು, ಜಿ.ಅಶ್ವತ್ಥಪ್ಪ, ಪಿ.ಬಿ.ಮುನಿಆಂಜಿನಪ್ಪ, ಊಲವಾಡಿ ವೆಂಕಟರವಣಪ್ಪ, ಎಂ.ವಿಜಯಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.