ADVERTISEMENT

ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ

ಕೈ ಹಿಡಿದ ಪುಟ್ಟು ಆಂಜನಪ್ಪ, ವಿ.ಮುನಿಯಪ್ಪಗೆ ಉಪಾಧ್ಯಕ್ಷ ಸ್ಥಾನ

Pavitra Bhat
Published 3 ಏಪ್ರಿಲ್ 2024, 5:59 IST
Last Updated 3 ಏಪ್ರಿಲ್ 2024, 5:59 IST
<div class="paragraphs"><p>ಕಾಂಗ್ರೆಸ್‌ </p></div>

ಕಾಂಗ್ರೆಸ್‌

   

ಶಿಡ್ಲಘಟ್ಟ: ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿದ್ದ ಮಾಜಿ ಶಾಸಕ ವಿ.ಮುನಿಯಪ್ಪ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಜವಾಬ್ದಾರಿ ನೀಡಲಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಪುಟ್ಟು ಆಂಜನ‍ಪ್ಪ ಅವರನ್ನು ಮರಳಿ ಕೈ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. 

ಈ ಮೂಲಕ ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ರಾಜಕಾರಣದಲ್ಲಿ ನಾನಾ ಚರ್ಚೆಗಳು ಗರಿಗೆದರಿವೆ. ಅಲ್ಲೋಲ ಕಲ್ಲೋಲ ಎನ್ನುವ ಸ್ಥಿತಿ ಎದುರಾಗಿದೆ. ಈ ಎಲ್ಲ ಬೆಳವಣಿಗೆಗಳು ಮುಖಂಡ ರಾಜೀವ್ ಗೌಡ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿ.ಮುನಿಯಪ್ಪ ಸ್ಪರ್ಧಿಸಲಿಲ್ಲ. ರಾಜಕೀಯವಾಗಿ ನಿವೃತ್ತ ಎನ್ನುವ ಸ್ಥಿತಿಗೆ ಬಂದರು. ಅವರು ತಮ್ಮ ಉಡಿಯಲ್ಲಿದ್ದ ಕಾಂಗ್ರೆಸ್ ಟಿಕೆಟ್‌ ಅನ್ನು ಸಮಾಜಸೇವಕ ರಾಜೀವ್ ಗೌಡ ಅವರಿಗೆ ನೀಡಿದ್ದರು.

ಆ ಸಂದರ್ಭದಲ್ಲಿ ಮುನಿಯಪ್ಪ ನೀಡಿದ್ದ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು. ₹ 30 ಕೋಟಿ ನೀಡಲು ರಾಜೀವ್ ಗೌಡ ಬಂದಿದ್ದರು. ಅದನ್ನು ನಿರಾಕರಿಸಿದೆ ಎಂದು ಮುನಿಯಪ್ಪ ಹೇಳಿದ್ದರು. ಆ ಮಾತು ಹೇಳಿದ ಸ್ವಲ್ಪ ದಿನಕ್ಕೆ ರಾಜೀವ್ ಗೌಡ ಪರ ವಾಲಿದ್ದರು.

ಇನ್ನೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಂಜಿನಪ್ಪ ಪುಟ್ಟು ಪಕ್ಷೇತರರಾಗಿ ಸ್ಪರ್ಧಿಸಿದರು. ಪುಟ್ಟು ಆಂಜನಿನಪ್ಪ,  ವಿ.ಮುನಿಯಪ್ಪ ಮತ್ತು ರಾಜೀವ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.

2023 ರ ವಿಧಾನಸಭೆ ಚುನಾವಣೆಯಲ್ಲಿ 52,160 ಮತಗಳನ್ನು ಪಡೆದರು. 2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು ಪುಟ್ಟು ಆಂಜನಪ್ಪ. ಆಗಲೂ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದರು. 10,986 ಮತಗಳನ್ನು ಪಡೆದಿದ್ದರು

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ 36,157 ಮತಗಳನ್ನು ಪಡೆದರು. ಕಾಂಗ್ರೆಸ್ ವಿರುದ್ಧದ ವಾಗ್ದಾಳಿ ಹಾಗೂ ಬಂಡಾಯದ ಕಾರಣ ಪುಟ್ಟು ಅಂಜಿನಪ್ಪ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು. 

ಆ ನಂತರ ವಿ.ಮುನಿಯಪ್ಪ ಶಿಡ್ಲಘಟ್ಟ ಕಾಂಗ್ರೆಸ್‌ನಿಂದ ದೂರವಾದರು. ಪುಟ್ಟು ಆಂಜನಪ್ಪ ಅವರನ್ನು ಉಚ್ಛಾಟಿಸಲಾಯಿತು. ಈ ಎಲ್ಲ ಬೆಳವಣಿಗೆಳ ಪರಿಣಾಮ  ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ರಾಜೀವ್ ಗೌಡ ಅವರು ತಮ್ಮ ಪತ್ನಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಿದರು.  

ಆದರೆ ಈಗ ‍ಪುಟ್ಟು ಆಂಜನಪ್ಪ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ವಿ.ಮುನಿಯಪ್ಪ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಶಿಡ್ಲಘಟ್ಟ ಕಾಂಗ್ರೆಸ್ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಪುಟ್ಟು ಆಂಜನಪ್ಪ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದನ್ನು ವಿರೋಧಿಸಿ ರಾಜೀವ್ ಗೌಡ ಬೆಂಬಲಿಗರು ‍ಪ್ರತಿಭಟನೆ ಸಹ ನಡೆಸಿದ್ದರು. ಈಗ ಶಿಡ್ಲಘಟ್ಟ ಕಾಂಗ್ರೆಸ್‌ ಕದಡಿದ ನೀರು ಎನ್ನುವಂತೆ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.