ADVERTISEMENT

ಶಿಡ್ಲಘಟ್ಟ: ಕೈಗಾರಿಕೆ ಸ್ಥಾಪನೆಗೆ ಅಧಿಸೂಚನೆ ಹೊರಡಿಸಲು ಒತ್ತಡ ಹೇರುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:11 IST
Last Updated 5 ಜನವರಿ 2026, 7:11 IST
<div class="paragraphs"><p>ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಕೆಐಎಡಿಬಿಯಿಂದ ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಮನವಿ ಮಾಡುವಂತೆ ಆದಿಚುಂಚನಗಿರಿ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಗೆ ಮನವಿ ಸಲ್ಲಿಸಲಾಯಿತು</p></div>

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಕೆಐಎಡಿಬಿಯಿಂದ ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಮನವಿ ಮಾಡುವಂತೆ ಆದಿಚುಂಚನಗಿರಿ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಗೆ ಮನವಿ ಸಲ್ಲಿಸಲಾಯಿತು

   

ಶಿಡ್ಲಘಟ್ಟ: ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಈಗಾಗಲೇ ಕೆಐಎಡಿಬಿಯಿಂದ ಅಧಿಸೂಚನೆ ಹೊರಡಿಸಲಾಗಿದೆಯಾದರೂ ತ್ವರಿತವಾಗಿ ಕೈಗಾರಿಕೆಗಳ ಸ್ಥಾಪನೆಗಾಗಿ ಅಂತಿಮ ಅಧಿಸೂಚನೆ ಹೊರಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ರಾಜ್ಯ ರೈತ ಸಂಘ, ಮತ್ತು ಹಸಿರು ಸೇನೆ ರೈತ ಮುಖಂಡರು ಆದಿಚುಂಚನಗಿರಿ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಜೆ.ವೆಂಕಟಾಪುರದ ಬಳಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ADVERTISEMENT

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಮಾರು 13 ಹಳ್ಳಿಗಳಲ್ಲಿ 2823 ಎಕರೆ ಜಮೀನು, ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಸರ್ಕಾರಿ ಗೋಮಾಳ ಗುಂಡುತೋಪು, ಖರಾಬು, ಇತರೆ ಸೇರಿದಂತೆ 1098 ಎಕರೆ, ಪಿ.ಎಸ್.ಎಲ್ ಕಂಪನಿಗೆ ಸೇರಿದ್ದು ಎನ್ನಲಾದ 525 ಎಕರೆ ಒಟ್ಟು 1623 ಎಕರೆ ಜಮೀನು ಈಗಾಗಲೇ ಸರ್ಕಾರದ ವಶದಲ್ಲಿದೆ. ರೈತರ ಹೆಸರಿನಲ್ಲಿ 1200 ಎಕರೆ ಇದೆ. ಅದರಲ್ಲಿ ಬಹುಪಾಲು ರೈತರು ಕೆ.ಐ.ಎ.ಡಿ.ಬಿ ಕಚೇರಿಗೆ ತೆರಳಿ ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಪ್ರತಿ ವರ್ಷ ಕಾಲೇಜುಗಳಿಂದ ಪದವಿ ಮುಗಿಸಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೊರಗೆ ದೂರದ ನಗರಗಳಿಗೆ ಹೋಗಿ ಉದ್ಯೋಗ ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಫಲವತ್ತಾದ ಕೃಷಿ ನೀರಾವರಿ ಪ್ರದೇಶವನ್ನು ಕೈಬಿಟ್ಟು, ಉಳಿದ ಜಮೀನುಗಳನ್ನು ಕೆ.ಐ.ಎ.ಡಿ.ಬಿ ವಶಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಒಂದು ವರ್ಷದಿಂದ ಸರ್ಕಾರದ ಗಮನ ಸೆಳೆಯಲಾಗುತ್ತಿದೆಯಾದರೂ ಗಮನ ಹರಿಸುತ್ತಿಲ್ಲ. ತಾವು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಸರ್ಕಾರದ ಗಮನ ಸೆಳೆಯುವ ಮೂಲಕ ಶಿಡ್ಲಘಟ್ಟ ತಾಲ್ಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಸ್ವಾಮೀಜಿಗೆ ಮನವಿ ಮಾಡಿದರು.

ಸ್ವಾಮೀಜಿ ಮಾತನಾಡಿ, ಈ ವಿಚಾರದ ಕುರಿತು ಸಮಗ್ರವಾಗಿ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರೋಣ ಎಂದು ಭರವಸೆ ನೀಡಿದರು.

ರಾಜ್ಯ ಕೆಪಿಸಿಸಿಯ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಸುಗಟೂರು ನಾಗೇಶ್‌ ಗೌಡ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ನಲ್ಲೇನಹಳ್ಳಿ ಸುಬ್ರಮಣಿ, ಎಚ್.ಎನ್.ಕದಿರೇಗೌಡ, ಎ.ಎನ್.ಮುನೇಗೌಡ, ಬಸವಪಟ್ಟಣ ಪ್ರಭುಗೌಡ, ಆಂಜಿನಪ್ಪ, ನಾಗರಾಜ್ ರಾಮದಾಸ್, ಯಣ್ಣಂಗೂರಿನ ಈರಪ್ಪ, ಮಧು, ನಡಿಪಿನಾಯಕನಹಳ್ಳಿ ವಾಸುದೇವಮೂರ್ತಿ, ಮೋಹನ್, ಪ್ರದೀಪ್ ಗೌಡ, ಜೆ.ಸಿ.ಮಂಜಣ್ಣ, ನಾರಾಯಣಸ್ವಾಮಿ, ಮಧು, ನಾಗರಾಜ್, ಚೀಮಂಗಲ ಚನ್ನಪ್ಪ, ಅತ್ತಿಗಾನಹಳ್ಳಿ ನವೀನ್ ಕುಮಾರ್, ವೆಂಕಟಾಪುರದ ಹರೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.