
ಗೌರಿಬಿದನೂರು: ಚಿಮುಲ್ ಚುನಾವಣೆಯಲ್ಲಿ ಹಾಲು ಮಾರುವವರಿಗಿಂತ ಆಲ್ಕೊಹಾಲ್ ಮಾರುವ ಮೂವರು ಅಭ್ಯರ್ಥಿಗಳಾಗಿದ್ದಾರೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಬಲಿತ ಅಭ್ಯರ್ಥಿಗಳ ಕುರಿತು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಲೇವಡಿ ಮಾಡಿದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಕಾಂಗ್ರೆಸ್ ಬೆಂಬಲಿತರ ಆಯ್ಕೆಗೆ ನಡೆದ ಸಭೆ ಉದ್ದೇಶಿಸಿ ಮಾತನಾಡಿದರು.
‘ನಮ್ಮ ಅಭ್ಯರ್ಥಿಗಳು ಹೈನುಗಾರಿಕೆ ಮಾಡುವರು. ರೈತರ ಸಮಸ್ಯೆಗಳನ್ನು ಅರಿತಿದ್ದಾರೆ’ ಎಂದು ಹೇಳಿದರು.
‘ಮಂಚೇನಹಳ್ಳಿ ಮತ್ತು ಗೌರಿಬಿದನೂರು ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆಯಲ್ಲಿ ಅವಿರೋಧ ಆಯ್ಕೆಗೆ ತೀರ್ಮಾನಿಸಿದ್ದೆವು. ಆದರೆ ರಾತ್ರೋರಾತ್ರಿ ನಮ್ಮ ಅಭ್ಯರ್ಥಿ ಡಿ.ಎನ್.ವೆಂಕಟರೆಡ್ಡಿ ಕೆಎಚ್ಪಿ ಬಣಕ್ಕೆ ಸೇರ್ಪಡೆಯಾಗಿದ್ದರಿಂದಾಗಿ ಚುನಾವಣೆ ಅನಿವಾರ್ಯವಾಯಿತು’ ಎಂದು ಹೇಳಿದರು.
ನಗರದ ಹೊರವಲಯದಲ್ಲಿ ಕೋಚಿಮುಲ್ನಿಂದ ಸ್ಥಾಪಿಸಿದ್ದ ಹಾಲು ಶೀತಲೀಕರಣ ಘಟಕವನ್ನು ನಮ್ಮ ಕ್ಷೇತ್ರದ ಹಿಂದಿನ ನಿರ್ದೇಶಕರು ತಮ್ಮ ಸ್ವಾರ್ಥಕ್ಕಾಗಿ ಬಿಎಂಸಿಗಳನ್ನು ತೆರೆದು ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡಿದರು. ಇದು ಜೆ.ಕಾಂತರಾಜು, ಸುನಂದಮ್ಮ ಸಾಧನೆ ಎಂದರು.
ಕೋಚಿಮುಲ್ ಹಿಂದಿನ ನಿರ್ದೇಶಕರು ಹಾಲು ಶೀತಲೀಕರಣ ಘಟಕವನ್ನು ಮುಚ್ಚಿ ಒಂದೊಂದು ಬಿಎಂಸಿಗೆ ₹5 ಲಕ್ಷ ಕಿಕ್ಬ್ಯಾಕ್ ಪಡೆದುಕೊಂಡಿದ್ದಾರೆ. ಶೀತಲೀಕರಣ ಘಟಕದ ಕಾರ್ಮಿಕರು ಕೆಲಸ ಕಳೆದುಕೊಳ್ಳವಂತಾಯಿತು ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ರೈತರು ಮತ್ತು ಬಂಡವಾಳಶಾಹಿಗಳ ನಡುವೆ ಚಿಮುಲ್ ಚುನಾವಣೆ ನಡೆಯುತ್ತಿದೆ. ರೈತರು ಸ್ವಾಭಿಮಾನಿಗಳು. ಬಂಡವಾಳಶಾಹಿಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ಈ ಹಿಂದೆ ಕೋಚಿಮುಲ್ ನಿರ್ದೇಶಕರಾದ ಜೆ.ಕಾಂತರಾಜು ವಿರುದ್ದವೇ ಈಗಿನ ಗೌರಿಬಿದನೂರು ಕ್ಷೇತ್ರದ ಅಭ್ಯರ್ಥಿ ಡಿ.ಎನ್.ವೆಂಕಟರೆಡ್ಡಿ ಹಾಲಿನ ದರ ಇಳಿಕೆ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದ್ದರು. ಇಂದು ಇಬ್ಬರೂ ಕೆಎಚ್ಪಿ ಬಣದ ಅಭ್ಯರ್ಥಿಗಳಾಗಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇದಲವೇಣಿ ವೇಣು, ಅಶ್ವತ್ಥನಾರಾಯಣಗೌಡ, ಎಚ್.ಎನ್.ಪ್ರಕಾಶ್ರೆಡ್ಡಿ, ತಾರಾನಾಥ್, ತೊಂಡೇಬಾವಿ ಗಿರೀಶ್ರೆಡ್ಡಿ, ಮಾರ್ಕೆಟ್ ನಾಗರಾಜ್, ಗಂಗಾಧರಪ್ಪ, ಭಾರ್ಗವರೆಡ್ಡಿ, ವಿಶ್ವನಾಥ್, ಶ್ರೀನಿವಾಸಗೌಡ, ಲಕ್ಷ್ಮಿನಾರಾಯಣ್, ಗೋಪಾಲ್, ವೀರಪ್ಪ, ಹಿದಾಯಿತ್, ವಲಿಸಾಬ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅಭ್ಯರ್ಥಿಗಳ ಘೋಷಣೆ
ಚಿಮುಲ್ ಚುನಾವಣೆಗೆ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯಥಿಯಾಗಿ ಮಂಡಿಕಲ್ ದಿನೇಶ್ ತೊಂಡೇಬಾವಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಗರಾಜ್ ಅವರನ್ನು ಕಣಕ್ಕಿಳಿಸಲಾಗಿದೆ. ಮಹಿಳಾ ಅಭ್ಯರ್ಥಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಶಿವಶಂಕರ ರೆಡ್ಡಿ ತಿಳಿಸಿದರು.
‘ಇಲ್ಲಿನ ಗುತ್ತಿಗೆದಾರರ ಪಾಡೇನು’
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾನು ತಂದಿರುವ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ.ಒಂದೇ ಒಂದು ಶಾಶ್ವತ ಅಭಿವೃದ್ಧಿ ಯೋಜನೆಯಾಗಿಲ್ಲ. ಕಾಮಗಾರಿಗಳ ಗುತ್ತಿಗೆದಾರರು ಸಹ ಇವರ ಕಡೆಯವರೇ ಆಗಿದ್ದಾರೆ. ಇಲ್ಲಿನವರ ಪಾಡೇನು ಎಂದು ಶಿವಶಂಕರ ರೆಡ್ಡಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.