ಚೇಳೂರು: ಮುಖ್ಯರಸ್ತೆ ಮತ್ತು ಮನೆಗಳ ಅಕ್ಕ ಪಕ್ಕದಲ್ಲಿ ಚರಂಡಿ ನೀರು ನಿಲ್ಲುವುದರಿಂದ ದುರ್ವಾಸನೆ. ಹೆಚ್ಚಿದ ಸೊಳ್ಳೆಗಳ ಕಾಟ. ಜನರಿಗೆ ಸಾಂಕ್ರಾಮಿಕ ರೋಗದ ಭೀತಿ–ಇದು ತಾಲ್ಲೂಕಿನ ನಾರೆಮದ್ದೇಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ (ಯರ್ರಗುಡಿ) ಗ್ರಾಮದಲ್ಲಿ ಕಂಡು ಬರುವ ಚಿತ್ರಣ.
ಗ್ರಾಮದಲ್ಲಿ ಸಿ.ಸಿ ರಸ್ತೆಗಳನ್ನು ನಿರ್ಮಿಸಿ ಅವುಗಳ ಬಳಿ ಸಣ್ಣ ಚರಂಡಿಗಳನ್ನು ನಿರ್ಮಿಸಲಾಗಿದೆ. ಈಗ ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯಲ್ಲಿ ಬಂದು ನಿಲ್ಲುವ ಸ್ಥಿತಿ ಇದೆ.
ಚರಂಡಿಯ ಕೊಳಚೆ ನೀರು ಊರಾಚೆ ಹೋಗುವ ವ್ಯವಸ್ಥೆ ಇಲ್ಲ. ಇದರಿಂದ ದುರ್ವಾಸನೆ ಜೊತೆ ಸೊಳ್ಳೆ ಕಾಟ ಗ್ರಾಮದಲ್ಲಿ ಹೆಚ್ಚಾಗಿದೆ. ಹೀಗೆ ಕೊಳಚೆ ನೀರು ನಿಲ್ಲುವ ಬಳಿ ಮನೆಗಳೂ ಇದ್ದು ಜನರು ವಾಸಿಸುತ್ತಿದ್ದಾರೆ. ದುರ್ವಾಸನೆ ಹಾಗೂ ಸೊಳ್ಳೆಗಳ ಕಡಿತದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಶಿವಪುರದ ಸರ್ಕಾರಿ ಶಾಲೆಯೂ ಸಮೀಪದಲ್ಲಿ ಇದೆ. ವಿದ್ಯಾರ್ಥಿಗಳು ಚರಂಡಿ ನೀರು ತುಳಿದು ಮೂಗುಮುಚ್ಚಿ ಶಾಲೆಗೆ ಹೋಗುವರು. ಕೇವಲ ಕಂದಾಯ ವಸೂಲಿ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಬಾರದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
‘ಸಮಯಕ್ಕೆ ಸರಿಯಾಗಿ ಚರಂಡಿ ಸ್ವಚ್ಛಗೊಳಿಸದ ಕಾರಣ ಸಮಸ್ಯೆ ಹೆಚ್ಚಿದೆ. ಅಧಿಕಾರಿಗಳು ಕೂಡಲೇ ಪರಿಹರಿಸಲು ಕ್ರಮವಹಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡುವರು.
ವಾಹನ ಸವಾರರ ಪರದಾಟ: ಬಿಳ್ಳೂರು-ಚೇಳೂರು, ಚಾಕವೇಲು ಹಾಗೂ ನಾರೇಮದ್ದೆಪಲ್ಲಿ, ಪಾತಪಾಳ್ಯ, ಬಾಗೇಪಲ್ಲಿ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇದಾಗಿದೆ. ದಿನನಿತ್ಯ ಈ ರಸ್ತೆಯಲ್ಲಿ ನೂರಾರು ಜನರು ಸಂಚಾರಿಸುತ್ತಾರೆ. ವಾಹನ ಸವಾರರು ಚರಂಡಿ ನೀರಿನಲ್ಲಿ ಸಂಚರಿಸುವ ಸ್ಥಿತಿ ಇದೆ.
‘ಕಂದಾಯ ವಸೂಲಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬರುತ್ತಾರೆ. ಕಂದಾಯ ವಸೂಲಿ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಸಮಸ್ಯೆಯ ಗಂಭೀರತೆಯ ಅರಿವು ಇದ್ದರೂ ಮೌನವಾಗಿದ್ದಾರೆ. ಕನಿಷ್ಠ ಚರಂಡಿ ಸ್ವಚ್ಛತೆಗೆ ಮುಂದಾಗಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.