ADVERTISEMENT

ಸುಳ್ಳು ಹೇಳುವುದರಲ್ಲಿ ಮೊಯಿಲಿ ನಂತರದ ದಾಖಲೆ ಸಿದ್ದರಾಮಯ್ಯರದ್ದು: ಆರ್‌. ಆಶೋಕ

ಚಿಕ್ಕಬಳ್ಳಾಪುರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಆರೋಪ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 12:45 IST
Last Updated 3 ನವೆಂಬರ್ 2019, 12:45 IST
ಆರ್.ಅಶೋಕ್
ಆರ್.ಅಶೋಕ್   

ಚಿಕ್ಕಬಳ್ಳಾಪುರ: ‘ವಿರೋಧ ಪಕ್ಷದ ನಾಯಕನ ಸ್ಥಾನ ಹೋಗುತ್ತದೆ ಎಂಬ ಭಯಕ್ಕೆ ಸಿದ್ದರಾಮಯ್ಯ ಅವರು ಟೀಕೆ ಮಾಡುತ್ತಿದ್ದಾರೆ. ಆದರೆ ಅವರು ಬಾಯಿ ಬಿಟ್ಟರೆ ಸುಳ್ಳು. ಸುಳ್ಳೇ ಸಿದ್ದರಾಮಯ್ಯ. ಸುಳ್ಳು ಹೇಳುವುದರಲ್ಲಿ ವೀರಪ್ಪ ಮೊಯಿಲಿ ಅವರು ದಾಖಲೆ ಮಾಡಿದ್ದರು. ಈಗ ಸಿದ್ದರಾಮಯ್ಯ ಅವರಿಗಿಂತಲೂ ಮುಂದೆ ಹೋಗಿದ್ದಾರೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಈ ಹಿಂದೆ ನಮ್ಮಪ್ಪನಾಣೆ ಕುಮಾರಸ್ವಾಮಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂದಿದ್ದರು. ಆದರೆ ಅವರಿಬ್ಬರೂ ಮುಖ್ಯಮಂತ್ರಿ ಆದರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ ಅವರಿಗೆ ಸಿಗಬೇಕಿದ್ದ ವಿರೋಧ ಪಕ್ಷದ ನಾಯಕ ಸ್ಥಾನ ಆಕಸ್ಮಿಕವಾಗಿ ಸಿದ್ದರಾಮಯ್ಯ ಅವರಿಗೆ ಸಿಕ್ಕಿದೆ. ತಾನು ವಿರೋಧ ಪಕ್ಷದ ನಾಯಕ ಎಂದು ತೋರಿಸಲು ಅವರು ಟೀಕೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ದೂರು, ಟೀಕೆಗಳನ್ನು ಮಾಡುವುದು ವಿರೋಧ ಪಕ್ಷದವರ ಕೆಲಸ. ಅದನ್ನು ಅವರು ಮಾಡುತ್ತಿದ್ದಾರಷ್ಟೇ. ಅದರಿಂದ ಸರ್ಕಾರಕ್ಕೆ ಏನೂ ಸಮಸ್ಯೆ ಆಗುವುದಿಲ್ಲ. ಆ ರೀತಿ ಆಗುವಂತಿದ್ದರೆ ದೇಶದಲ್ಲಿ ಯಾವ ಸರ್ಕಾರ ಕೂಡ ಒಂದು ದಿನ ಉಳಿಯಲು ಸಾಧ್ಯವಿಲ್ಲ. ಮೊಯಿಲಿ ಅವರ ಟೇಪ್ ಹಗರಣದಿಂದ ಈವರೆಗೆ ಹಲವು ಆಡಿಯೊ ಪ್ರಕರಣಗಳು ಬಯಲಿಗೆ ಬಂದಿವೆ. ಏನು ಮಾಡಲು ಆಗಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.