ಚಿಂತಾಮಣಿ: ನಗರದ 25ನೇ ವಾರ್ಡ್ ಕೆ.ಜಿ.ಎನ್ ಬಡಾವಣೆಯಲ್ಲಿ ಮಹಿಳೆಯೊಬ್ಬರು ಪಟಾಕಿ ಚೀಟಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡವರು ಪೊಲೀಸ್ ಠಾಣೆ ಕದ ತಟ್ಟುತ್ತಿದ್ದಾರೆ.
ಕೆ.ಜಿ.ಎನ್ ಬಡಾವಣೆಯ ನಿವಾಸಿ ವರಲಕ್ಷ್ಮಿ ಪರಾರಿಯಾಗಿರುವ ಮಹಿಳೆ. ‘ದೀಪಾವಳಿ ಬೆನಿಫಿಟ್ ಸ್ಕೀಂ’ ಹೆಸರಿನಲ್ಲಿ ಚೀಟಿ ನಡೆಸುತ್ತಿದ್ದರು. ಪ್ರತಿ ತಿಂಗಳು ₹500 ರಂತೆ 12 ತಿಂಗಳು ಹಣ ಕಟ್ಟಬೇಕು. ಹಬ್ಬದ ತಿಂಗಳಿನಲ್ಲಿ ಮೊತ್ತ ₹6 ಸಾವಿರ ಜತೆಗೆ ₹1000 ಸೇರಿಸಿ ಒಟ್ಟು ₹7 ಸಾವಿರ ಹಾಗೂ ₹500 ಬೆಲೆಯ ಪಟಾಕಿ ಬಾಕ್ಸ್ ಹಾಗೂ ಒಂದು ಸ್ಟೀಲ್ ಪಾತ್ರೆ ನೀಡುವುದಾಗಿ ಚೀಟಿ ಕಾರ್ಡ್ ಮುದ್ರಿಸಿದ್ದರು. ಬಹುತೇಕ ಕೂಲಿ ಮಾಡುವ ಮಹಿಳೆಯರು ಚೀಟಿ ಕಟ್ಟಿದ್ದರು. ತಮ್ಮ ಸಂಬಂಧಿಕರ ಮತ್ತು ನೆರೆಹೊರೆಯವರಿಂದಲೂ ಚೀಟಿ ಹಾಕಿಸಿದ್ದರು.
ಟೈಲರಿಂಗ್ ಕೆಲಸ ಮಾಡುವ ಭಾರತಿ ಅವರಿವರಿಂದ 24, ಅಂಬೇಡ್ಕರ್ ನಗರದ ಆರತಿ, ನೆರೆಹೊರೆಯವರು ಹಾಗೂ ಸಂಬಂಧಿಕರಿಂದ 12 ಚೀಟಿಗಳನ್ನು ಹಾಕಿಸಿದ್ದಾರೆ. ಬಹುತೇಕ ಮನೆಕೆಲಸ ಮಾಡುವವರು, ಕೂಲಿ ಮಾಡುವವರೇ ಚೀಟಿ ಕಟ್ಟಿದ್ದಾರೆ.
ಸಾಲಿಪೇಟೆಯ ದೇವಿಯಮ್ಮ ಪ್ರತಿ ತಿಂಗಳು ₹500 ಚೀಟಿ ಕಟ್ಟುತ್ತಿದ್ದರು. ಈ ತಿಂಗಳು ಚೀಟಿ ಕಟ್ಟಲು ಮನೆ ಬಳಿಗೆ ಹೋದಾಗ ಮನೆಗೆ ಬೀಗ ಹಾಕಿತ್ತು. ಕರೆ ಮಾಡಿದರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಅಕ್ಕಪಕ್ಕದವರನ್ನು ವಿಚಾರಿಸಿದಾಗ ಮನೆ ಖಾಲಿ ಮಾಡಿಕೊಂಡು ಹೋಗಿರುವ ವಿಷಯ ಬೆಳಕಿಗೆ ಬಂದಿದೆ. ಅಕ್ಕಪಕ್ಕದ ಮಹಿಳೆಯರಿಂದ 5 ಚೀಟಿ ಹಾಕಿಸಿದ್ದೆ. ಅವರೆಲ್ಲರೂ ನನ್ನನ್ನು ಕೇಳುತ್ತಿದ್ದಾರೆ ಎಂದು ದೇವಿಯಮ್ಮ ಅವಲತ್ತುಕೊಂಡರು.
ಎನ್.ಎನ್.ಟಿ ಬಡಾವಣೆಯ ಹಿಂದಿನ ರಸ್ತೆಯ ಬಹುತೇಕ ಎಲ್ಲ ಮನೆಯವರು ಚೀಟಿ ಕಟ್ಟಿದ್ದಾರೆ. ಕಮಲಮ್ಮ, ಸರಸ್ವತಮ್ಮ, ಶಿವಮ್ಮ, ಮಂಜುಳ, ಭಾರತಿ ಮೋಸ ಹೋಗಿದ್ದಾರೆ.
ಹಣ ಕಳೆದುಕೊಂಡ ಆರತಿ, ಭಾರತಿ ಮತ್ತಿತರರು ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.