ADVERTISEMENT

ಚಿಕ್ಕಬಳ್ಳಾಪುರ | ಸರ್‌.ಎಂ.ವಿ ಹೊಸ ಮ್ಯೂಸಿಯಂಗೆ ಯೋಜನೆ

ಮುದ್ದೇನಹಳ್ಳಿಯ ಆಂಜನೇಯ ದೇಗುಲ ಸಮೀಪ ಸ್ಥಳ ನಿಗದಿ

ಡಿ.ಎಂ.ಕುರ್ಕೆ ಪ್ರಶಾಂತ
Published 15 ಸೆಪ್ಟೆಂಬರ್ 2025, 5:41 IST
Last Updated 15 ಸೆಪ್ಟೆಂಬರ್ 2025, 5:41 IST
ಸರ್‌.ಎಂ.ವಿಶ್ವೇಶ್ವರಯ್ಯ ಅವರ ವಸ್ತು ಸಂಗ್ರಹಾಲಯ
ಸರ್‌.ಎಂ.ವಿಶ್ವೇಶ್ವರಯ್ಯ ಅವರ ವಸ್ತು ಸಂಗ್ರಹಾಲಯ   

ಚಿಕ್ಕಬಳ್ಳಾಪುರ: ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಅವರು ಚಿಕ್ಕಬಳ್ಳಾಪುರಕ್ಕೆ ಹೆಸರು ಮತ್ತು ಹೆಮ್ಮೆ ತಂದ ಪುತ್ರರತ್ನ. ತಾಲ್ಲೂಕಿನ ಮುದ್ದೇನಹಳ್ಳಿಯ ಅವರ ನಿವಾಸ, ಸಮಾಧಿ ಮತ್ತು ವಸ್ತುಸಂಗ್ರಹಾಲಯಕ್ಕೆ ರಾಜ್ಯದ ವಿವಿಧ ಭಾಗಗಳ ಗಣ್ಯರು, ವಿದ್ಯಾರ್ಥಿಗಳು ನಿತ್ಯ ಭೇಟಿ ನೀಡುವರು. ಇದು ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವೂ ಆಗಿದೆ.

ಸರ್‌.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವಸ್ತುಸಂಗ್ರಹಾಲಯ, ಸಮಾಧಿಯನ್ನು ನಿರ್ವಹಿಸುತ್ತಿದೆ. ವಸ್ತುಸಂಗ್ರಹಾಲಯಕ್ಕೆ ದಿನದಿಂದ ದಿನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಿರಿದಾಗಿರುವ ವಸ್ತುಸಂಗ್ರಹಾಲಯವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲು ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಮುಂದಾಗಿದೆ. ಈ ಸಂಬಂಧ ಈಗಾಗಲೇ ಕೆಲಸಗಳೂ ಆರಂಭವಾಗಿವೆ.

ವಿಶ್ವೇಶ್ವರಯ್ಯ ಅವರ ಮನೆಯಿಂದ ಸಮಾಧಿಯ ಸ್ಥಳಕ್ಕೆ ತೆರಳುವಾಗ ಇರುವ ಆಂಜನೇಯ ಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಜಾಗದಲ್ಲಿ ಹೊಸ ವಸ್ತು ಸಂಗ್ರಹಾಲಯಕ್ಕೆ ಯೋಜಿಸಲಾಗಿದೆ. 

ADVERTISEMENT

ಈಗ ಇರುವ ವಸ್ತುಸಂಗ್ರಹಾಲಯವು ಕಿರಿದಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಭಾರತರತ್ನ ಸೇರಿದಂತೆ ಸರ್‌.ಎಂ.ವಿ ಅವರಿಗೆ ಸಂದಿರುವ ಪುರಸ್ಕಾರಗಳು, ಗೌರವ ಡಾಕ್ಟರೇಟ್‌ಗಳು, ಅವರು ಬಳಸುತ್ತಿದ್ದ ಪೆನ್ನು, ಪುಸ್ತಕ, ರೇಡಿಯೊ ಸೇರಿದಂತೆ ಹಲವು ವಸ್ತುಗಳನ್ನು ಕಾಣಬಹುದು. ಸರ್‌.ಎಂ.ವಿ ಅವರ ಬದುಕಿನ ಹಂತಗಳನ್ನು ಮತ್ತು ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಯಲು ಈ ವಸ್ತು ಸಂಗ್ರಹಾಲಯವೇ ಪ್ರಮುಖ ಆಧಾರ. ಸರ್‌.ಎಂ.ವಿಶ್ವೇಶ್ವರಯ್ಯ ಅವರ ಸಾಧನೆಗಳು, ಅವರ ಬಗ್ಗೆ ಪ್ರಕಟವಾಗಿರುವ ಪತ್ರಿಕಾ ವರದಿಗಳೂ ಇಲ್ಲಿವೆ.

ಹೀಗೆ ವಿಶ್ವೇಶ್ವರಯ್ಯ ಅವರ ಬದುಕನ್ನು ಕಾಣಿಸುವ ವಸ್ತು ಸಂಗ್ರಹಾಲಯಕ್ಕೆ ನಿತ್ಯ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರಿನಿಂದ ಶನಿವಾರ ಮತ್ತು ಭಾನುವಾರ ಚಿಕ್ಕಬಳ್ಳಾಪುರದ ಕೆಲವು ಪ್ರವಾಸಿ ತಾಣಕ್ಕೆ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ಈ ತಾಣಗಳಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯ ಅವರ ನಿವಾಸವೂ ಸೇರಿದೆ.

ಶನಿವಾರ ಮತ್ತು ಭಾನುವಾರ ದೊಡ್ಡ ಸಂಖ್ಯೆಯಲ್ಲಿ ಸರ್‌.ಎಂ.ವಿ ನಿವಾಸಕ್ಕೆ ಪ್ರವಾಸಿಗರು ಭೇಟಿ ನೀಡುವರು. ಒಂದು ಬಿಎಂಟಿಸಿ ಬಸ್‌ನಲ್ಲಿ ಸುಮಾರು 40ರಿಂದ 50 ಪ್ರಯಾಣಿಕರು ಇರುತ್ತಾರೆ. ಒಮ್ಮೊಮ್ಮೆ ಎರಡು ಮೂರು ಬಸ್‌ಗಳು ಏಕಕಾಲಕ್ಕೆ ಬರುತ್ತಿವೆ. ಆಗ ಒಂದೇ ಸಮಯದಲ್ಲಿ ಎಲ್ಲ ಪ್ರವಾಸಿಗರು ವಸ್ತು ಸಂಗ್ರಹಾಲಯದ ಒಳಗೆ ತೆರಳಿದಾಗ ಜಾಗ ಕಿರಿದಾದ ಕಾರಣ ಸಮಸ್ಯೆ ಎದುರಾಗುತ್ತಿದೆ. 

ಹೊಸ ವಸ್ತು ಸಂಗ್ರಹಾಲಯ ನಿರ್ಮಾಣದಿಂದ ಈ ಪ್ರವಾಸಿ ತಾಣವು ಮತ್ತಷ್ಟು ಅಭಿವೃದ್ಧಿಯಾಗುವುದು ಖಚಿತ. ಅಲ್ಲದೆ ಸರ್‌.ಎಂ.ವಿ ಅವರಿಗೆ ಸಂಬಂಧಿಸಿದ ಮತ್ತಷ್ಟು ವಿಚಾರಗಳೂ ಇಲ್ಲಿ ಅಡಕವಾಗುವ ಸಾಧ್ಯತೆ ಇರುತ್ತದೆ. 

ಸರ್‌.ಎಂ.ವಿಶ್ವೇಶ್ವರಯ್ಯ ಅವರ ಸಮಾಧಿ ಮೇಲಿರುವ ಪುತ್ಥಳಿ
ಸತೀಶ್ ಮೋಕ್ಷಗೊಂಡಂ
‘2026ರ ಡಿಸೆಂಬರ್ ವೇಳೆಗೆ ಕಟ್ಟಡ ಪೂರ್ಣ’
ಟ್ರಸ್ಟ್‌ನಿಂದ ಹೊಸ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಆಲೋಚಿಸಲಾಗಿದ್ದು ಯೋಜನೆ ಸಿದ್ಧವಾಗುತ್ತಿದೆ. ಆರು ತಿಂಗಳಲ್ಲಿ ಹೊಸ ಕಟ್ಟಡದ ಕೆಲಸಗಳು ಆರಂಭವಾಗುತ್ತದೆ. 2026ರ ಡಿಸೆಂಬರ್ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು ಎಂದುಕೊಂಡಿದ್ದೇವೆ ಎಂದು ಸರ್.ಎಂ. ವಿಶ್ವೇಶ್ವರಯ್ಯ ಅವರ ಮೊಮ್ಮಗ ಹಾಗೂ ಸರ್‌.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಸತೀಶ್ ಮೋಕ್ಷಗೊಂಡಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಮುದ್ದೇನಹಳ್ಳಿ ಮತ್ತು ನಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಸರ್‌.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಇಂಗ್ಲಿಷ್ ಪಾಠಕ್ಕೆ ಯೋಜಿಸಲಾಗಿದೆ. ಶನಿವಾರ ಈ ತರಗತಿಗಳನ್ನು ನಡೆಸಬೇಕು ಎಂದುಕೊಂಡಿದ್ದೇವೆ ಎಂದರು. ಶೇ 80ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು ನೀಡುವ ಬಗ್ಗೆಯೂ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಯೋಜನೆಗೆ ಸಂಸ್ಥೆಯೊಂದು ನೆರವು ಸಹ ನೀಡುತ್ತದೆ. ಕೆಲವು ಸಂಸ್ಥೆಗಳು ನಮ್ಮ ಕಾರ್ಯಗಳಿಗೆ ಸಹಕಾರ ನೀಡಲು ಮುಂದೆ ಬರುತ್ತಿವೆ ಎಂದರು.
ಭಾರತರತ್ನ
70ರ ಸಂಭ್ರಮ ಸರ್‌.ಎಂ.ವಿಶ್ವೇಶ್ವರಯ್ಯ ಅವರಿಗೆ ಭಾರತರತ್ನ ದೊರೆತು 2025ಕ್ಕೆ 70 ವರ್ಷಗಳಾಗುತ್ತಿದೆ. ಅವರಿಗೆ 1955ರಲ್ಲಿ ಈ ಗೌರವ ದೊರೆತಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1915ರಲ್ಲಿ ಬ್ರಿಟಿಷ್ ಸರ್ಕಾರದಿಂದ ನೈಟ್ ಹುಡ್ ಗೌರವಕ್ಕೆ ವಿಶ್ವೇಶ್ವರಯ್ಯ ಅವರು ಭಾಜನರಾಗಿದ್ದರು. ಈ ಗೌರವ ದೊರೆತು 110 ವರ್ಷಗಳಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.