ADVERTISEMENT

ಮಾವು ಬೆಳೆಗಾರರ ಸಮಸ್ಯೆಗೆ ಪರಿಹಾರ

ಮುಖ್ಯಮಂತ್ರಿ ಜತೆ ಚರ್ಚೆ: ತೋಟಗಾರಿಕಾ ಸಚಿವ ಶಂಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 5:36 IST
Last Updated 16 ಜೂನ್ 2021, 5:36 IST
ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಮಾವು ಅಭಿವೃದ್ಧಿ ಕೇಂದ್ರಕ್ಕೆ ತೋಟಗಾರಿಕೆ ಸಚಿವ ಆರ್.ಶಂಕರ್ ಮಂಗಳವಾರ ಭೇಟಿ ನೀಡಿ ಪರಿಶಿಲನೆ ನಡೆಸಿದರು
ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಮಾವು ಅಭಿವೃದ್ಧಿ ಕೇಂದ್ರಕ್ಕೆ ತೋಟಗಾರಿಕೆ ಸಚಿವ ಆರ್.ಶಂಕರ್ ಮಂಗಳವಾರ ಭೇಟಿ ನೀಡಿ ಪರಿಶಿಲನೆ ನಡೆಸಿದರು   

ಚಿಂತಾಮಣಿ: ಮಾವಿನ ಬೆಲೆ ಕುಸಿತದಿಂದ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸಚಿವ ಶಂಕರ್ ಭರವಸೆ ನೀಡಿದರು.

ನಗರದ ಹೊರವಲಯದ ಮಾಡಿಕೆರೆ ಕ್ರಾಸ್‌ನಲ್ಲಿರುವ ಮಾವು ಅಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿ, ಕೊಯ್ಲೋತ್ತರ ವಿಭಾಗದ ಪರಿಶೀಲನೆ ನಡೆಸಿ ಮಾತನಾಡಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರ ಸ್ಥಿತಿಗತಿಗಳ ಸಂಪೂರ್ಣ ಮಾಹಿತಿ ಇದೆ. ಹೂ ಬೆಳೆಗಾರರು
ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರ್‌ಗೆ ₹10 ಸಾವಿರ ಪರಿಹಾರ ನೀಡಲಾಗುತ್ತಿದೆ. ಮಾವಿನ ಬೆಲೆ ಕುಸಿತದ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಅದನ್ನು ಮುಖ್ಯಮಂತ್ರಿ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದರು.

ADVERTISEMENT

ಮಾವು ಅಭಿವೃದ್ಧಿ ಕೇಂದ್ರಕ್ಕೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅವರು ರೈತರ ಮತ್ತು ವ್ಯಾಪಾರಿಗಳನ್ನು ಒಗ್ಗೂಡಿಸಿ ರೈತರ ಸರಕನ್ನು ಮಾರಾಟ ಮಾಡಲು ಸಹಾಯವನ್ನು ಮಾಡುತ್ತಾರೆ ಎಂದು ತಿಳಿಸಿದರು.

ಮಾವು ಅಭಿವೃದ್ಧಿ ಕೇಂದ್ರದಿಂದ ರೈತರಿಗೆ ಏನೂ ಉಪಯೋಗವಾಗುತ್ತಿಲ್ಲ. ಅಧಿಕಾರಿಗಳು ಕಚೇರಿಗೆ ಮಾತ್ರ ಸೀಮಿತವಾಗಿದ್ದಾರೆ. ಮಾವು ಬೆಳೆಗಾರರೊಂದಿಗೆ ಸಂಪರ್ಕವೇ ಇಲ್ಲ. ಮಾವಿನ ತೋಟಗಳಿಗೆ ಭೇಟಿ ನೀಡುವುದಾಗಲಿ, ಪ್ರಾತ್ಯಕ್ಷಿಕೆಗಳನ್ನು ನಡೆಸುವುದಾಗಿ, ಸಲಹೆ ಸೂಚನೆಗಳನ್ನು ನೀಡುವ ಯಾವ ಕೆಲಸವನ್ನು ಮಾಡುತ್ತಿಲ್ಲ ಎಂದು ರೈತ ಸಂಘಟನೆಗಳ ಮುಖಂಡರು ದೂರಿದರು.

ಕೊರೊನಾ ಹಿನ್ನೆಲೆಯಲ್ಲಿ ರೈತರು ಮತ್ತು ಅಧಿಕಾರಿಗಳ ಸಭೆ ನಡೆಸಲು ಆಗಿಲ್ಲ. ಇನ್ನು ಮುಂದೆ ಅಧಿಕಾರಿಗಳು ಮತ್ತು ರೈತರ ಸಭೆಗಳನ್ನು ನಡೆಸು ಮೂಲಕ ಉತ್ತಮ ಸಂಪರ್ಕವನ್ನು ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.

ಆಂಧ್ರಪ್ರದೇಶ ವ್ಯಾಪಾರಿಗಳು, ರೈತರು ಮಾತ್ರ ಇಲ್ಲಿಗೆ ಮಾವು ತರುತ್ತಾರೆ. ಜಿಲ್ಲೆಯ ರೈತರು ಮಾತ್ರ ಇಲ್ಲಿಗೆ ಬರುವುದಿಲ್ಲ. ಇದನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಬೇಕು ಎಂದು ಬೆಳೆಗಾರರು ಮನವಿ ಮಾಡಿದರು.

ಜಿಲ್ಲೆಯ ಬೆಳೆಗಾರರಿಗೆ ಕೇಂದ್ರದಲ್ಲಿ ಮೊದಲ ಆದ್ಯತೆ ದೊರೆಯಬೇಕು. ಅವಿಭಜಿತ ಜಿಲ್ಲೆಯ ರೈತರಿಗೆ ಮೊದಲ ಪ್ರಾಶಸ್ತ್ಯ ನೀಡುವಂತೆ ಆದೇಶ ನೀಡಲಾಗುವುದು ಎಂದರು.

ಮಾವು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ವಿ.ನಾಗರಾಜ್, ತಹಶೀಲ್ದಾರ್ ಹನುಮಂತರಾಯಪ್ಪ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.