ADVERTISEMENT

ಅಜ್ಜ, ಅಪ್ಪನ ಮಾತೇ ಪ್ರೇರಣೆ: ಎಸ್‌ಎಸ್‌ಎಲ್‌ಸಿ ಟಾಪರ್ ಯಶಸ್ ಗೌಡ

​ಪ್ರಜಾವಾಣಿ ವಾರ್ತೆ
Published 9 ಮೇ 2023, 4:26 IST
Last Updated 9 ಮೇ 2023, 4:26 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಗಳಿಸಿದ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಯಶಸ್ ಗೌಡನಿಗೆ ತಾಯಿ ಭಾಗ್ಯಮ್ಮ ಸಿಹಿ ತಿನ್ನಿಸಿದರು. ತಂದೆ ನಾರಾಯಣಸ್ವಾಮಿ, ಅಜ್ಜ (ತಾಯಿಯ ತಂದೆ) ರಾಮಾಂಜಿನಪ್ಪ ಚಿತ್ರದಲ್ಲಿ ಇದ್ದಾರೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಗಳಿಸಿದ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಯಶಸ್ ಗೌಡನಿಗೆ ತಾಯಿ ಭಾಗ್ಯಮ್ಮ ಸಿಹಿ ತಿನ್ನಿಸಿದರು. ತಂದೆ ನಾರಾಯಣಸ್ವಾಮಿ, ಅಜ್ಜ (ತಾಯಿಯ ತಂದೆ) ರಾಮಾಂಜಿನಪ್ಪ ಚಿತ್ರದಲ್ಲಿ ಇದ್ದಾರೆ   

ಚಿಕ್ಕಬಳ್ಳಾಪುರ: ‘ಆರಂಭದಿಂದಲೂ ಓದಿಗೆ ಶಾಲೆಯಷ್ಟೇ ಮನೆಯಲ್ಲಿಯೂ ಪ್ರೋತ್ಸಾಹ ಇತ್ತು. ಓದು ನಮಗೆ ಘನತೆ ಮತ್ತು ಗೌರವ ತಂದುಕೊಡುತ್ತದೆ ಎಂದು ನನ್ನ ತಾತ ಮತ್ತು ಅಪ್ಪ ಹೇಳುತ್ತಲೇ ಇದ್ದರು...’

–ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಗಳಿಸಿದ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಎನ್. ಯಶಸ್ ಗೌಡ ಅವರ ಮಾತಿದು.

ಈತ ದೇವನಹಳ್ಳಿ ತಾಲ್ಲೂಕಿನ ಮಜ್ಜಿಗೆ ಹೊಸಹಳ್ಳಿಯ ನಾರಾಯಣಸ್ವಾಮಿ ಮತ್ತು ಆರ್. ಭಾಗ್ಯಮ್ಮ ದಂಪತಿಯ ಪುತ್ರ. ಅವರ ತಂದೆಯ ಕೃಷಿಯ ಜೊತೆಗೆ ಭಾರತೀಯ ಜೀವ ವಿಮಾ ನಿಗಮದ ಏಜೆಂಟರಾಗಿಯೂ ಕೆಲಸ ಮಾಡುತ್ತಿದ್ದಾರೆ. 

ADVERTISEMENT

ಇಷ್ಟೊಂದು ಅಂಕ ಪಡೆಯಲು ತಯಾರಿ ಹೇಗಿತ್ತು ಎಂದು ‘ಪ್ರಜಾವಾಣಿ’ ಪ್ರಶ್ನಿಸಿದಾಗ ಯಶಸ್ ಹೇಳಿದ್ದು ಇಷ್ಟು. ‘ದೀರ್ಘ ಅವಧಿಯ ಓದು ಮತ್ತು ಶಾಲೆಯ ವಾತಾವರಣ ಈ ಸಾಧನೆಗೆ ಕಾರಣ. ಹಿಂದಿನ ವರ್ಷ ನಮ್ಮ ಶಾಲೆಯ ಐವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದರು. ಅವರಂತೆ ನಾನು ಸಹ ಉತ್ತಮ ಅಂಕ ಪಡೆಯಬೇಕು ಎನ್ನುವ ಗುರಿ ಇತ್ತು’ ಎಂದರು.

‘ತರಗತಿಗಳು ನಿತ್ಯ ಬೆಳಿಗ್ಗೆ 7.45ಕ್ಕೆ ಆರಂಭವಾಗಿ ಸಂಜೆ 6ಕ್ಕೆ ಮುಗಿಯುತ್ತಿದ್ದವು. ಪರೀಕ್ಷೆ ಹತ್ತಿರ ಬಂದಂತೆ ರಾತ್ರಿ 9ರವರೆಗೂ ತರಗತಿ ನಡೆಯುತ್ತಿದ್ದವು. ಮನೆಯಲ್ಲಿ ಬೆಳಿಗ್ಗೆ 4ರಿಂದ 5ರವರೆಗೆ ಓದುತ್ತಿದ್ದೆ. ಪರೀಕ್ಷೆ ಸಮಯದಲ್ಲಿ ಓದಿಗೆ ಹೆಚ್ಚು ಗಮನಕೊಟ್ಟೆ. ಅದರ ಫಲ ಈಗ ನನಗೆ ದೊರೆತಿದೆ. ಅಂದಿನ ಪಾಠವನ್ನು ಅಂದೇ ಅರ್ಥ ಮಾಡಿಕೊಳ್ಳುತ್ತಿದ್ದೆ. ಅನುಮಾನ ಬಂದರೆ ತಕ್ಷಣ ಶಿಕ್ಷಕರನ್ನು ಕೇಳುತ್ತಿದ್ದೆ’ ಎಂದರು.  

‘ನನ್ನ ಜ್ಞಾನ ಹೆಚ್ಚಳಕ್ಕೆ ವಾರಾಂತ್ಯ ಮತ್ತು ತಿಂಗಳಾಂತ್ಯದಲ್ಲಿ ನಡೆಸುತ್ತಿದ್ದ ಪರೀಕ್ಷೆ ನೆರವಾದವು. ಒಂದು ಮಾಸಿಕ ಪರೀಕ್ಷೆಯಲ್ಲಿ ನಾನು ಮಾಡಿರುವ ತಪ್ಪುಗಳನ್ನು ಮುಂದಿನ ಮಾಸಿಕ ಪರೀಕ್ಷೆಯಲ್ಲಿ ಮಾಡುತ್ತಿರಲಿಲ್ಲ’ ಎಂದು ಓದಿನ ಹಾದಿಯ ಬಗ್ಗೆ ವಿವರಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಗಳಿಸಿದ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಯಶಸ್ ಗೌಡನನ್ನು ಶಾಲೆಯ ಶಿಕ್ಷಕಿ ಅಭಿನಂದಿಸಿದರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.