ಚಿಂತಾಮಣಿ: ‘ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಹತ್ತು ವರ್ಷ ಸರ್ವನಾಶ ಮಾಡಿದವರು ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ’ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಆರೋಪಿಸಿದರು.
ತಾಲ್ಲೂಕಿನ ಮೈಲಾಂಡಹಳ್ಳಿ, ಚಿಕ್ಕಪುರ, ದೊಡ್ಡಗಂಜೂರು, ಜಿ.ಕೋಡಿಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ಹಾಗೂ ಪೂರ್ಣಗೊಂಡಿರುವ ಯೋಜನೆಗಳ ಉದ್ಘಾಟನೆ ನೆರವೇರಿಸಿ ಕುರುಬೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕೈಗಾರಿಕಾ ಅಭಿವೃದ್ಧಿ ಪ್ರದೇಶದ ಪರಿಹಾರದಲ್ಲಿ ಅಧಿಕಾರಿಗಳು ಸಚಿವರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಸಚಿವರು ಸ್ವಾರ್ಥವಿಲ್ಲದೆ ಏನೂ ಮಾಡುವುದಿಲ್ಲ ಎಂದು ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ನನ್ನ ಮೇಲೆ ಮಾಡಿರುವ ಆರೋಪ ಸಂಪೂರ್ಣ ಸುಳ್ಳು. ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಪಾವತಿ ಮಾಡಬೇಕು ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ’ ಎಂದರು.
‘ಬಹಿರಂಗ ಸಭೆಯಲ್ಲಿ ನೇರವಾಗಿ ರೈತರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ. ಪ್ರತಿಯೊಂದು ಹಂತದಲ್ಲೂ ಅಧಿಕಾರಿಗಳಿಗೆ ಯಾರು ಒಂದು ರೂಪಾಯಿಯೂ ಸಹ ಲಂಚ ಕೊಡಬೇಡಿ ಎಂದು ರೈತರಿಗೆ ಕಟ್ಟುನಿಟ್ಟಾಗಿ ಹೇಳಿದ್ದೇನೆ’ ಎಂದು ಹೇಳಿದರು.
‘10 ವರ್ಷ ಏನೂ ಮಾಡಲಾಗದ ಮಾಜಿ ಶಾಸಕರು ಕಳೆದ 2 ವರ್ಷಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸಲಾರದೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಮಸ್ತೇನಹಳ್ಳಿ ಕೈಗಾರಿಕಾ ಪ್ರಾಂಗಣದ ಪರಿಹಾರ ವಿತರಣೆಯಲ್ಲಿ ಏಜೆಂಟರನ್ನು ಸೃಷ್ಠಿ ಮಾಡಿದವರು ಎಂ.ಕೃಷ್ಣಾರೆಡ್ಡಿ. ಪರಿಹಾರವಾಗಿ ಒಂದು ಚೆಕ್ನ್ನು ಸಹ ಸಾರ್ವಜನಿಕವಾಗಿ ವಿತರಿಸಲಾಗಲಿಲ್ಲ. ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ 10 ವರ್ಷ ವಿದ್ಯುತ್ ಸಂಪರ್ಕ ಕೊಡಿಸಲಾಗಲಿಲ್ಲ. ಕೈಗಾರಿಕಾ ಪ್ರಾಂಗಣ ಕುಂಠಿತಗೊಳ್ಳಲು ಮಾಜಿ ಶಾಸಕರೇ ಕಾರಣ’ ಎಂದು ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
‘ತಾಲ್ಲೂಕಿನ ಪ್ರತಿಯೊಂದು ರಸ್ತೆಯ ಮಾಹಿತಿ ನನ್ನ ತಲೆಯಲ್ಲಿದೆ. ಹಂತ ಹಂತವಾಗಿ ಉತ್ತಮ ಗುಣಮಟ್ಟದ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ಪ್ರಥಮ ದರ್ಜೆ ಕಾಲೇಜುಗಳ ಕಾಮಗಾರಿ ನಡೆಯುತ್ತಿದೆ. ಯಾರು ಬೇಕಾದರೂ ಕಾಮಗಾರಿ ಪರಿಶೀಲಿಸಬಹುದು. ಮಾಜಿ ಶಾಸಕರ 10 ವರ್ಷಗಳ ಅವಧಿಯಲ್ಲಿ ಒಂದಾದರೂ ಕಾಮಗಾರಿ ತೋರಿಸಲಿ’ ಎಂದು ಹರಿಹಾಯ್ದರು.
‘ಸಂಸದ ಡಾ.ಕೆ ಸುಧಾಕರ್ ಮೂರು ಬಾರಿ ಶಾಸಕರಾಗಿ, ಒಮ್ಮೆ ಆರೋಗ್ಯ ಸಚಿವರಾಗಿದ್ದರೂ ಜಿಲ್ಲಾ ಆಸ್ಪತ್ರೆಗೆ ಎಂ.ಆರ್.ಐ ತರಲು ಕೈಲಾಗಲಿಲ್ಲ. ಅವರ ಅವಧಿಯಲ್ಲಿ ಒಂದು ಎಕರೆ ಕೈಗಾರಿಕಾ ಪ್ರಾಂಗಣವಾಗಲಿಲ್ಲ. ಕೋವಿಡ್ ಕಾಲದಲ್ಲಿ ಕೋಟ್ಯಂತರ ರೂ ಲೂಟಿ ಮಾಡಿದ್ದನ್ನು ರಾಜ್ಯದ ಜನರು ಮರೆತಿಲ್ಲ. ಅವರ ಬೇಜವಾಬ್ದಾರಿ ಕಾರ್ಯವೈಖರಿಯಿಂದ ಚಾಮರಾಜನಗರದಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡರು. ರಾಜ್ಯ ಸಚಿವ ಸಂಪುಟದಲ್ಲಿ ಅತ್ಯಂತ ಭ್ರಷ್ಟ ಸಚಿವ ಎಂದು ಪಟ್ಟ ಕಟ್ಟಿಸಿಕೊಂಡಿದ್ದವರು ನನ್ನ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇದೆಯೇ’ ಎಂದು ಪ್ರಶ್ನಿಸಿದರು.
ಕುರುಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜೇಗೌಡ, ಅಶ್ವತ್ಥ ನಾರಾಯಣ ಬಾಬು, ಈರುಳ್ಳಿ ಶಿವಣ್ಣ, ಕುರುಟಹಳ್ಳಿ ಕೃಷ್ಣಮೂರ್ತಿ, ನಂಜೇಗೌಡ, ಮಂಜುನಾಥ್, ಸತ್ಯನಾರಾಯಣರೆಡ್ಡಿ, ಆನಂದ್, ನರೇಂದ್ರ, ಆನಂದ್ ರೆಡ್ಡಿ, ಪ್ಯಾರಜಾನ್, ಗಿರೀಶ್, ಆನಂದ್, ನಾಗರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.