ADVERTISEMENT

ಜನಪರ ಕಾರ್ಯ ಮಾಡುವವರನ್ನು ಬೆಂಬಲಿಸಿ

ಕೊಂಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರ ಪತ್ನಿ ಡಾ.ಜಯಂತಿ ಮತ ಯಾಚನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 15:25 IST
Last Updated 3 ಡಿಸೆಂಬರ್ 2019, 15:25 IST
ಕೊಂಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರ ಪತ್ನಿ ಡಾ.ಜಯಂತಿ ಮತ ಯಾಚನೆ ಮಾಡಿದರು.
ಕೊಂಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರ ಪತ್ನಿ ಡಾ.ಜಯಂತಿ ಮತ ಯಾಚನೆ ಮಾಡಿದರು.   

ಚಿಕ್ಕಬಳ್ಳಾಪುರ: ‘ಅಧಿಕಾರ ಇಲ್ಲದಿರುವಾಗಲೇ ಕ್ಷೇತ್ರದ ಜನರಿಗೆ ಉಚಿತವಾಗಿ ಅಕ್ಕಿ, ಗೋಧಿ ಪಡಿತರ ವಿತರಿಸಿದ್ದ ಎಂ.ಅಂಜನಪ್ಪ ಅವರಿಗೆ ಈ ಉಪ ಚುನಾವಣೆಯಲ್ಲಿ ಮತ ನೀಡುವ ಮೂಲಕ ಮತದಾರರು ಕ್ಷೇತ್ರದ ಅಭಿವೃದ್ಧಿಗೆ, ಜನಪರ ಕಾರ್ಯಗಳನ್ನು ಬೆಂಬಲಿಸುವ ಸಂದೇಶ ಎಲ್ಲೆಡೆ ಪಸರಿಸಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರ ಪತ್ನಿ ಡಾ.ಜಯಂತಿ ಅವರು ಮತದಾರರಿಗೆ ಮನವಿ ಮಾಡಿಕೊಂಡರು.

ಕೊಂಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮಂಗಳವಾರ ಪತಿಯ ಪರವಾಗಿ ಮತಯಾಚನೆ ಮಾಡಿದ ಅವರು, ‘ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಈ ಹಿಂದೆ ಸಾವಿರಾರು ಕೋಟಿ ವೆಚ್ಚದ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಜನರು ನೆಮ್ಮದಿಯ ಜೀವನ ನಡೆಸಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಾಂಗ್ರೆಸ್ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲು ಅವಕಾಶಕ್ಕಾಗಿ ಕಾದಿದೆ. ನಿಮ್ಮ ಅಮೂಲ್ಯವಾದ ಮತವನ್ನು ಅಂಜನಪ್ಪ ಅವರಿಗೆ ನೀಡುವ ಮೂಲಕ ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಭಾಗದ ನೀರಿನ ಬವಣೆ ನೀಗುವ ಉದ್ದೇಶದಿಂದ ₹14 ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ಜತೆಗೆ ಅಂತರ್ಜಲ ವೃದ್ಧಿಸುವ ಉದ್ದೇಶದಿಂದ ಎಚ್‌.ಎನ್.ವ್ಯಾಲಿ ಯೋಜನೆಯನ್ನು ಕೂಡ ಮಂಜೂರು ಮಾಡಿದರು. ವೈದ್ಯಕೀಯ ಕಾಲೇಜು ಕೂಡ ಸಿದ್ದರಾಮಯ್ಯ ಅವರೇ ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ ಅನರ್ಹ ಶಾಸಕರು ಮತದಾರರಿಗೆ ಸುಳ್ಳು ಹೇಳುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಮೋಸ ಹೋಗದೆ ಯಾವುದು ಸತ್ಯ, ಯಾವುದು ಸುಳ್ಳು ಎಂದು ಪರಾಮರ್ಶಿಸಿ ಮತ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಸುಧಾಕರ್ ಅವರು ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಜನರ, ಪಕ್ಷದ ಸ್ವಾಭಿಮಾನವನ್ನು ಕೋಟಿ, ಕೋಟಿಗೆ ಮಾರಿದ್ದಾರೆ. ಬಿಜೆಪಿಯವರು ಒಡ್ಡಿದ ಹಣ, ಅಧಿಕಾರದ ಆಸೆಗೆ ಪಕ್ಷಾಂತರ ಮಾಡಿ ಇದೀಗ ನಾಲಿಗೆ ಬದಲಾಯಿಸಿ ಬಿಜೆಪಿ ಹೊಗಳುವ ಕೆಲಸ ಮಾಡುತ್ತಿದ್ದಾರೆ. ಇಂತಹವರು ಪುನಃ ಗೆಲ್ಲಿಸಿದರೆ ಮತ್ತೊಂದು ಚುನಾವಣೆ ಹತ್ತಿರದಲ್ಲಿಯೇ ಬಂದರೂ ಅಚ್ಚರಿ ಇಲ್ಲ. ರಾಜಕಾರಣದಲ್ಲಿ ಮೋಸ ಮಾಡುವವರು ಉಳಿಯಬಾರದು’ ಎಂದರು.

ಕೋಚಿಮುಲ್ ನಿರ್ದೇಶಕ ಸಿ.ಎನ್.ವೆಂಕಟೇಶ್‌ ಅವರ ಪತ್ನಿ ಭರಣಿ, ಪಕ್ಷದ ಮುಖಂಡರು ಮತ ಯಾಚನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.