
ಶಿಡ್ಲಘಟ್ಟ: ರಾಷ್ಟ್ರದ ಸಮಗ್ರ ಅಭಿವೃದ್ಧಿ ಯುವಜನರ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿನ ತೊಡಗಿಸಿಕೊಳ್ಳುವಿಕೆಯನ್ನು ಸಂಪೂರ್ಣವಾಗಿ ಅವಲಂಬಿಸಿದೆ. ಯುವಶಕ್ತಿಯೊಳಗಿನ ಅನಂತವಾದ ಶಕ್ತಿ, ತಾಳ್ಮೆ, ಸಹನೆ, ಸೇವಾಮನೋಭಾವನೆಯಂತಹ ಗುಣಗಳು ರಾಷ್ಟ್ರದ ಪ್ರಗತಿಗಾಗಿ ಪೂರಕವಾಗಿ ಬಳಕೆಯಾಗಬೇಕು ಎಂದು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ಶಿಕ್ಷಣಾಧಿಕಾರಿ ಆಂಜನೇಯ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ, ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಆದರ್ಶ ಯುವಜನರಿಗೆ ಬೋಧಿಸುವ ಮೂಲಕ ದೇಶದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸಬೇಕು. ನಾಯಕತ್ವ, ಉತ್ತಮ ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ಜವಾಬ್ದಾರಿ ಮೇಲೆ ಯುವ ಪೀಳಿಗೆ ಗಮನ ಕೇಂದ್ರೀಕರಿಸಬೇಕಿದೆ ಎಂದರು.
ಶಿಕ್ಷಣ ಸಂಯೋಜಕ ಅಂಕಿರೆಡ್ಡಿ ಮಾತನಾಡಿ, ಭಾರತೀಯ ಸಂಸ್ಕೃತಿ, ವೇದಾಂತ ಮತ್ತು ಯೋಗತತ್ವಗಳನ್ನು ಪಾಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ರಾಷ್ಟ್ರೀಯ ಪ್ರಾಮುಖ್ಯತೆ ಪ್ರಮುಖ ಕ್ಷೇತ್ರಗಳ ಕುರಿತು ಯುವ ದೃಷ್ಟಿಕೋನ ಮತ್ತು ಕ್ರಿಯಾತ್ಮಕ ಆಲೋಚನೆಗಳು ಕಾರ್ಯರೂಪಕ್ಕೆ ಬರಬೇಕಿದೆ ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಸಿಡಿಲ ಸನ್ಯಾಸಿ ವಿವೇಕಾನಂದರ ತತ್ವ, ಬದುಕಿನ ಜೀವನಮಾರ್ಗ, ಯುಜ ಜನರಿಗೆ ನೀಡಿರುವ ಸ್ಫೂರ್ತಿ ನುಡಿ ಅನುಕರಣೀಯವಾದವು. ಯುವಕರನ್ನು ಬಡಿದೇಳಿಸಿದ ವಿವೇಕಾನಂದರು ಯುವಪೀಳಿಗೆಯಿಂದ ರಾಷ್ಟ್ರಕಟ್ಟುವ ಮಾರ್ಗ ತೋರಿದ್ದಾರೆ. ಶಿಕ್ಷಣವನ್ನು ಮನುಷ್ಯರಲ್ಲಿ ಪರಿಪೂರ್ಣತೆ ಹಿಗ್ಗಿಸುವ ಸಾಧನವನ್ನಾಗಿ ವರ್ಣಿಸಿದ ವಿವೇಕಾನಂದರ ಮನೋಭಾವ ಸಾರ್ಥಕಗೊಳಿಸಬೇಕಿದೆ ಎಂದರು.
ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಎಸ್.ಚೇತನಾ ಮಾತನಾಡಿದರು. ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಪ್ರೇಮ, ರಕ್ಷಿತಾ, ಬಚ್ಚೇಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.