ಚಿಕ್ಕಬಳ್ಳಾಪುರ: ತಾಲ್ಲೂಕಿನ ಗುಂಗೀರ್ಲಹಳ್ಳಿ ಗ್ರಾಮದಲ್ಲಿ ನಾಡಬಂದೂಕು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಗಂಗಾಧರಪ್ಪ, ರಾಜ, ಅನಿಲ್ ಬಂಧಿತರು. ಗಂಗಾಧರಪ್ಪ ಗ್ರಾಮದಲ್ಲಿ ಕುಲುಮೆ ನಡೆಸುತ್ತಿದ್ದು, ಅನಿಲ್ ಮತ್ತು ರಾಜ ತಮ್ಮ ಮಾವ ಶಂಕರ್ ಬಳಿ ಇದ್ದ ನಾಡಬಂದೂಕನ್ನು ರಿಪೇರಿ ಮಾಡಿಸಲು ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಡಿವೈಎಸ್ಪಿ ರವಿಶಂಕರ್, ನಂದಿ ಪೊಲೀಸ್ ಠಾಣೆ ಪಿಎಸ್ಐ ಎಂ.ಬಿ.ಪಾಟೀಲ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
‘ಆರೋಪಿಗಳಿಂದ ನಾಡ ಬಂದೂಕು ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಯಾರಿಗೆ ಬಂದೂಕುಗಳನ್ನು ಮಾರಾಟ ಮಾಡುತ್ತಿದ್ದರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಅನಿಲ್ ಮತ್ತು ರಾಜ ಸಮೀಪದ ರಾಗಮಾಕಲಹಳ್ಳಿಯವರಾಗಿದ್ದಾರೆ. ಗಂಗಾಧರಪ್ಪ ತಮ್ಮ ಕುಲುಮೆಯಲ್ಲಿ ವ್ಯವಸಾಯಕ್ಕೆ ಅಗತ್ಯವಾದ ಉಪಕರಣಗಳನ್ನು ರೈತರಿಗೆ ಸಿದ್ಧ ಮಾಡಿಕೊಡುತ್ತಿದ್ದರು. ಇವರಿಗೆ ಬಿಡಿಭಾಗಗಳು ಎಲ್ಲಿ ಸಿಕ್ಕವು ಇತ್ಯಾದಿ ವಿಚಾರಗಳ ಬಗ್ಗೆಯೂ ಸಮಗ್ರವಾಗಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.