ADVERTISEMENT

ಚಿಕ್ಕಬಳ್ಳಾಪುರ: ಮೂರು ಕಾನ್‌ಸ್ಟೆಬಲ್‌ಗಳು ಅಮಾನತು

ಮಿಟ್ಟೇಮರಿ ಹೊರ ಠಾಣೆಯ ಬಳಿ ದಿನಸಿ ಅಂಗಡಿಯಲ್ಲಿ ಮಟ್ಕಾ ದಂಧೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 9:37 IST
Last Updated 1 ಫೆಬ್ರುವರಿ 2020, 9:37 IST
ದಿನಸಿ ಅಂಗಡಿ ಮೇಲೆ ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದ ಡಿವೈಎಸ್ಪಿ ರವಿಶಂಕರ್ ಮತ್ತು ಸಿಬ್ಬಂದಿ
ದಿನಸಿ ಅಂಗಡಿ ಮೇಲೆ ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದ ಡಿವೈಎಸ್ಪಿ ರವಿಶಂಕರ್ ಮತ್ತು ಸಿಬ್ಬಂದಿ   

ಚಿಕ್ಕಬಳ್ಳಾಪುರ: ಕರ್ತವ್ಯಲೋಪ ಆರೋಪದ ಅಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರು ಶುಕ್ರವಾರ ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಹೊರ ಠಾಣೆಯ ಮುಖ್ಯ ಕಾನ್‌ಸ್ಟೆಬಲ್‌ ಶ್ರೀನಿವಾಸ್, ಕಾನ್‌ಸ್ಟೆಬಲ್‌ಗಳಾದ ಶಶಿಕುಮಾರ್, ದೇವರಾಜ್ ಅವರನ್ನು ಅಮಾನತುಗೊಳಿಸಿದ್ದಾರೆ.

ಮಿಟ್ಟೇಮರಿ ಹೊರ ಠಾಣೆ ಬಳಿಯ ದಿನಸಿ ಅಂಗಡಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ಕಡಿವಾಣ ಹಾಕುವಲ್ಲಿ ಈ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ. ಈ ವಿಷಯ ಅರಿತ ಡಿವೈಎಸ್ಪಿ ರವಿಶಂಕರ್ ಅವರು ಇತ್ತೀಚೆಗೆ ಖಚಿತ ಮಾಹಿತಿ ಮೆರೆಗೆ ದಿನಸಿ ಅಂಗಡಿ ಮೇಲೆ ದಾಳಿ ನಡೆಸಿ, ಮಟ್ಕಾ ಚೀಟಿಗಳು, ₹21 ಸಾವಿರ ನಗದು, ಮೊಬೈಲ್, ಸ್ಕ್ಯಾನರ್ ಜಪ್ತಿ ಮಾಡುವ ಜತೆಗೆ ಮಟ್ಕಾ ದಂಧೆ ನಡೆಸುತ್ತಿದ್ದ ಲಕ್ಷ್ಮೀ ಮತ್ತು ಆಂಜನಮ್ಮ ಎಂಬವರನ್ನು ಬಂಧಿಸಿದ್ದರು.

ಈ ಮಹಿಳೆಯರು ಮಟ್ಕಾ ದಂಧೆಗೆ ರಾಜಾರೋಷವಾಗಿ ಗೂಗಲ್ ಪೇ ಮತ್ತು ಅಮೆಜಾನ್ ಪೇ ಆ್ಯಪ್‌ಗಳ ಮೂಲಕ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದು ಆಗ ಬೆಳಕಿಗೆ ಬಂದಿತ್ತು. ಡಿವೈಎಸ್ಪಿ ದಾಳಿಯ ಬೆನ್ನಲ್ಲೇ ಅಭಿನವ್ ಖರೆ ಅವರು ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ADVERTISEMENT

ಅಮಾನತುಗೊಂಡಿರುವ ಮುಖ್ಯ ಕಾನ್‌ಸ್ಟೆಬಲ್‌ ಶ್ರೀನಿವಾಸ್ ಅವರು ಈ ಹಿಂದೆ ಮಂಗಳೂರು ಎಸ್ಪಿ ಅವರ ಮೊಬೈಲ್ ಕರೆ ಮಾಹಿತಿಯನ್ನು ಅಕ್ರಮವಾಗಿ ಪರಿಶೀಲಿಸುತ್ತಿದ್ದ ಪ್ರಕರಣದಲ್ಲಿ ಈಗಲೂ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.