ADVERTISEMENT

ಬಾಗೇಪಲ್ಲಿ: ಯೂರಿಯಾ ಖರೀದಿಸಲು ಟೋಕನ್‌ಗೆ ನೂಕುನುಗ್ಗಲು

300 ಮಂದಿಗೆ ಮಾತ್ರ ಟೋಕನ್ l ಉಳಿದ ರೈತರು ವಾಪಸ್

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 6:44 IST
Last Updated 9 ಸೆಪ್ಟೆಂಬರ್ 2025, 6:44 IST
ರೈತರು ಮತ್ತು ಮಹಿಳಾ ರೈತರನ್ನು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಲು ಪೊಲೀಸರಿಂದ ಬ್ಯಾರಿಕೇಡ್ ಅಳವಡಿಕೆ
ರೈತರು ಮತ್ತು ಮಹಿಳಾ ರೈತರನ್ನು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಲು ಪೊಲೀಸರಿಂದ ಬ್ಯಾರಿಕೇಡ್ ಅಳವಡಿಕೆ   

ಬಾಗೇಪಲ್ಲಿ: ಇಲ್ಲಿನ ಟಿಎಪಿಸಿಎಂಎಸ್ ಮಳಿಗೆಗೆ ಯೂರಿಯಾ ಖರೀದಿಗಾಗಿ ನೂರಾರು ರೈತರು ದಾಂಗುಡಿ ಇಟ್ಟ ಕಾರಣ ಮಳಿಗೆ ಮುಂದೆ ಸೋಮವಾರ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು, ರೈತರು ಮತ್ತು ಮಹಿಳಾ ರೈತರನ್ನು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿ, ಯೂರಿಯಾ ವಿತರಣೆಗಾಗಿ ಟೋಕನ್ ನೀಡಲಾಯಿತು. 

ಕಳೆದ ಹಲವು ದಿನಗಳಿಂದ ಉತ್ತಮ ಮಳೆಯಾಗಿರುವ ಕಾರಣ ಯೂರಿಯಾಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ರೈತರಿಗೆ ಅಗತ್ಯವಿರುವಷ್ಟು ಯೂರಿಯಾ ವಿತರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಒಬ್ಬ ರೈತನಿಗೆ ಒಂದು ಚೀಲ ಯೂರಿಯಾ ಕೊಟ್ಟರೆ, ಬೆಳೆಗಳಿಗೆ ಸಿಂಪಡಿಸಲು ಸಾಧ್ಯವಿದೆಯೇ ಎಂದು ಟಿಎಪಿಸಿಎಂಸ್ ಮಳಿಗೆ ಮುಂದೆ ಜಮಾಯಿಸಿದ್ದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಯೂರಿಯಾ ಪಡೆಯಲು ಟಿಎಪಿಸಿಎಂಸ್ ಮಳಿಗೆ ಮುಂದೆ ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ನೂರಾರು ಮಂದಿ ರೈತರು ಜಮಾಯಿಸಿದ್ದರು. ಹೊತ್ತು ಏರಿದಂತೆ ಟಿಎಪಿಸಿಎಂಎಸ್ ಮಳಿಗೆಯತ್ತ ರೈತರ ಆಗಮನದ ಸಂಖ್ಯೆಯೂ ಹೆಚ್ಚಾಯಿತು. ಆದರೆ, ಕಚೇರಿಯಲ್ಲಿ ಕಡಿಮೆ ಪ್ರಮಾಣದ ರಸಗೊಬ್ಬರವಿದ್ದ ಕಾರಣ ರೈತರಿಗೆ ಟೋಕನ್ ನೀಡಲು ನಿರ್ಧರಿಸಲಾಯಿತು. ಈ ವೇಳೆ ಟೋಕನ್ ಪಡೆಯಲು ರೈತರ ಮಧ್ಯೆ ನೂಕು ನುಗ್ಗಲು ಉಂಟಾಯಿತು. ಅಲ್ಲದೆ, ಮಹಿಳಾ ರೈತರು ಏಕಾಏಕಿ ನುಗ್ಗಿ, ಟಿಎಪಿಸಿಎಂಎಸ್ ಅಧ್ಯಕ್ಷ ಚಂದ್ರಶೇಖರರೆಡ್ಡಿ ಅವರ ಬಳಿ ಇದ್ದ ಟೋಕನ್‌ಗಳನ್ನು ಕಿತ್ತುಕೊಂಡರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. 

ADVERTISEMENT

ಸ್ಥಳಕ್ಕಾಗಮಿಸಿದ ಪೊಲೀಸರು, ಗೊಂದಲದ ವಾತಾವರಣವನ್ನು ನಿವಾರಿಸಿ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಿದರು. 300 ಮಂದಿಗೆ ಟೋಕನ್ ನೀಡಲಾಯಿತು. ಉಳಿದ 700ಕ್ಕೂ ಹೆಚ್ಚು ರೈತರು ನಿರಾಶೆಯಿಂದ ಮನೆಗೆ ವಾಪಸ್ ಆದರು. ಪ್ರತಿಯೊಬ್ಬ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು. 

ರೈತರ ಘಟನಾ ಸ್ಥಳಕ್ಕೆ ಬಂದ ಕರ್ನಾಟಕ ಪ್ರಾಂತ ರೈತ ಸಂಘದ ಚನ್ನರಾಯಪ್ಪ, ಡಿ.ಟಿ.ಮುನಿಸ್ವಾಮಿ, ಅಶ್ವಥ್ಥಪ್ಪ ರೈತರಿಗೆ ಬೇಕಿರುವಷ್ಟು ರಸಗೊಬ್ಬರ ನೀಡದ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಬಾಗೇಪಲ್ಲಿ ಪಟ್ಟಣದ ಟಿಎಪಿಸಿಎಂಎಸ್ ಮಳಿಗೆ ಮುಂದೆ ಮಹಿಳಾ ರೈತರು ಯೂರಿಯಾ ಟೋಕನ್ ಪಡೆಯಲು ಸಾಲಿನಲ್ಲಿ ನಿಂತಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.