ADVERTISEMENT

ರಾಜ್ಯದಾದ್ಯಂತ ವಾರದಲ್ಲಿ ಒಂದು ದಿನ ಲಸಿಕಾ ಉತ್ಸವ: ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 4:36 IST
Last Updated 29 ಆಗಸ್ಟ್ 2021, 4:36 IST
   

ಚಿಕ್ಕಬಳ್ಳಾಪುರ: ‘ಇನ್ನು ಮುಂದೆ ವಾರದಲ್ಲಿ ಒಂದು ದಿನ ರಾಜ್ಯದಾದ್ಯಂತ ಲಸಿಕಾ ಉತ್ಸವ ನಡೆಸಲಾಗುವುದು. ಶೀಘ್ರದಲ್ಲಿಯೇ ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಸಾದಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆ.27ರವರೆಗೆ ಒಟ್ಟು 4 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

‘ನಾನು ಮತ್ತು ಮುಖ್ಯಮಂತ್ರಿ ಅವರು ಕೇಂದ್ರ ಆರೋಗ್ಯ ಸಚಿವರನ್ನು ಇತ್ತೀಚೆಗೆ ಭೇಟಿ ಮಾಡಿ ರಾಜ್ಯಕ್ಕೆ ನಿತ್ಯ 5 ಲಕ್ಷಕ್ಕಿಂತಲೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ಪೂರೈಸುವಂತೆ ಕೋರಿದ್ದೇವೆ’ ಎಂದರು.

ADVERTISEMENT

‘ಪ್ರತಿ ದಿನ ಕನಿಷ್ಠ 5 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ವಾರದಲ್ಲಿ ಒಂದು ದಿನ ಲಸಿಕೆ ಉತ್ಸವ ಸಂಘಟಿಸಿ ಅಂದು 15ರಿಂದ 20 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಇದೆ’ ಎಂದು ಹೇಳಿದರು.

ರಾಜ್ಯಕ್ಕೆ ವಿದೇಶಗಳಿಂದ ಬರುವವರು ಮೊದಲು ಇಳಿಯುವುದೇ ಬೆಂಗಳೂರಿನಲ್ಲಿ. ಆದ್ದರಿಂದ ಲಸಿಕೆ ನೀಡುವ ವಿಚಾರದಲ್ಲಿ ಬೆಂಗಳೂರಿಗೆ ಪ್ರಾಮುಖ್ಯ ನೀಡುತ್ತಿದ್ದೇವೆ. ಬೆಂಗಳೂರಿನಲ್ಲಿ ಒಟ್ಟು 1.20 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಮಕ್ಕಳನ್ನು ಹೊರತುಪಡಿಸಿದರೆ 80 ಲಕ್ಷ ಜನರು ಲಸಿಕೆ ಪಡೆಯಬಹುದು.ಈಗಾಗಲೇ ಇಲ್ಲಿ 1 ಕೋಟಿ ಡೋಸ್ ಲಸಿಕೆ ನೀಡಿದ್ದೇವೆ. ಬೆಂಗಳೂರಿನ ಕೊಳೆಗೇರಿಗಳಲ್ಲಿ ಲಸಿಕೆಯನ್ನು ಆಂದೋಲನದ ರೀತಿಯಲ್ಲಿ ನೀಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.