ಚಿಕ್ಕಬಳ್ಳಾಪುರ: ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೀರಾವರಿ ವಿಚಾರವಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಮೂರು ದಶಕಗಳಿಂದ ಹೋರಾಟ ನಡೆಸುತ್ತಿದೆ.
ಈ ಹೋರಾಟದ ಫಲವಾಗಿ ಸರ್ಕಾರಗಳು ಸಹ ವಿವಿಧ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ವ್ಯಯಿಸಿವೆ. ಆದರೆ ಬಯಲು ಸೀಮೆಯ ಜಿಲ್ಲೆಗಳಿಗೆ ಇಂದಿಗೂ ಸುರಕ್ಷಿತ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ.
ಈಗ ನೀರಾವರಿ ಸಾಧನೆಗಾಗಿ ತೆಲಂಗಾಣ ಮಾದರಿ ಹೋರಾಟಕ್ಕೆ ಈ ಮೂರು ಜಿಲ್ಲೆಗಳ ಹೋರಾಟಗಾರರು ಸಜ್ಜಾಗುತ್ತಿದ್ದಾರೆ. ಈ ಪ್ರಯುಕ್ತ ಅ.2ರಂದು ಬೆಳಿಗ್ಗೆ 10ಕ್ಕೆ ಚಿಕ್ಕಬಳ್ಳಾಪುರ ಕೆಇಬಿ ಸಮುದಾಯ ಭವನದಲ್ಲಿ ‘ಜಲಾಗ್ರಹ’ ಜಂಟಿ ಕ್ರಿಯಾ ಸಮಿತಿಗೆ ಚಾಲನೆ ದೊರೆಯಲಿದೆ.
ತೆಲಂಗಾಣ ಮಾದರಿ ಹೋರಾಟಕ್ಕೆ ಸಜ್ಜುಗೊಳ್ಳುವುದೇ ಸಮಿತಿಯ ಮುಖ್ಯ ಉದ್ದೇಶವಾಗಿದೆ. ನಿವೃತ್ತ ನ್ಯಾಯಮೂರ್ತಿಗಳು, ಬುದ್ದಿಜೀವಿಗಳು, ನಿವೃತ್ತ ಅಧಿಕಾರಿಗಳು ಸೇರಿದಂತೆ ಎಲ್ಲ ವಲಯಗಳ ಜನರನ್ನು ಈ ಸಮಿತಿ ಒಳಗೊಳ್ಳಲಿದೆ. ಈ ಮೂಲಕ ಹೋರಾಟಕ್ಕೆ ಹೊಸ ಆಯಾಮ ನೀಡುವುದು ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಯುವ ಶಕ್ತಿಯ ಗುರಿ.
‘ಟ್ರಾಕ್ಟರ್ ರ್ಯಾಲಿ, ರಸ್ತೆ ತಡೆ ಸೇರಿದಂತೆ ನಾನಾ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯಲು 30 ವರ್ಷದಿಂದ ಹೋರಾಟ ನಡೆಸಿದ್ದೇವೆ. ಮೂರು ಜಿಲ್ಲೆಗಳ ಜನರಿಗೆ ಸುರಕ್ಷಿತ ಕುಡಿಯುವ ನೀರು ಮತ್ತು ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎನ್ನುವುದೇ ನಮ್ಮ ಮುಖ್ಯ ಬೇಡಿಕೆ. 30 ವರ್ಷಗಳಿಂದಲೂ ಇದೇ ಬೇಡಿಕೆ ಇದೆ. ಇಂದಿಗೂ ಬೇಡಿಕೆ ಈಡೇರಿಲ್ಲ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ತಿಳಿಸಿದರು.
‘ನಮ್ಮ ಜಿಲ್ಲೆಗಳಲ್ಲಿ ಅಂತರ್ಜಲ ಪಾತಾಳ ಕಂಡಿದೆ. ಬಹಳಷ್ಟು ಗ್ರಾಮೀಣ ಪ್ರದೇಶಗಳಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂದು ವೈಜ್ಞಾನಿಕ ಅಧ್ಯಯನ ವರದಿಗಳು ವಿವರಿಸಿವೆ. ನಮ್ಮ ಹೋರಾಟ ಆರಂಭವಾದ ಮೇಲೆ ಸರ್ಕಾರಗಳು ಈ ಜಿಲ್ಲೆಗಳಿಗೆ ನೀರು ನೀಡಲು ₹ 30 ಸಾವಿರ ಕೋಟಿ ಖರ್ಚು ಮಾಡಿದೆ. ಆದರೂ ನೀರಿನ ಸುರಕ್ಷೆ ಸಿಗುತ್ತಿಲ್ಲ. ನೀರಾವರಿ ಹೆಸರಿನಲ್ಲಿ ಮೋಸ ವಂಚನೆಗಳು ಆಗುತ್ತಿವೆ’ ಎಂದು ಆರೋಪಿಸಿದರು.
‘ಈ ಸರ್ಕಾರದ ಜೊತೆ ಸಮಾಲೋಚಿಸಲು ಕಳೆದ ಎರಡೂವರೆ ವರ್ಷದಿಂದ ಪ್ರಯತ್ನಿಸುತ್ತಿದ್ದೇವೆ. ಆದರೆ ಸಾಧ್ಯವಾಗುತ್ತಿಲ್ಲ. ನೀರಾವರಿ ವಿಚಾರವಾಗಿ ಜನಾಂದೋಲನ ರೂಪಿಸಬೇಕು. ಅದಕ್ಕಾಗಿ ಹೊಸ ಪ್ರಯೋಗ ಆಗಬೇಕು. ಈ ದೃಷ್ಟಿಯಿಂದ ಜಲಾಗ್ರಹ ಜಂಟಿ ಕ್ರಿಯಾ ಸಮಿತಿಗೆ ಚಾಲನೆ ನೀಡಲಾಗುತ್ತದೆ ಎಂದರು.
‘ಬಿಡಿ ಹೋರಾಟಕ್ಕೆ ಜಗ್ಗದ ಸರ್ಕಾರ’ ‘
ಬಿಡಿ ಬಿಡಿ ಹೋರಾಟಗಳಿಗೆ ಸರ್ಕಾರ ಜಗ್ಗುವುದಿಲ್ಲ. ತೆಲಂಗಾಣದಲ್ಲಿ ಪ್ರತ್ಯೇಕ ಜಂಟಿ ಕ್ರಿಯಾ ಸಮಿತಿ ರಚಿಸಿದ ನಂತರ ಹೋರಾಟ ಬೇರೆ ಆಯಾಮ ಪಡೆಯಿತು. ಈ ದೃಷ್ಟಿಯಿಂದ ಸಮಿತಿಗೆ ಚಾಲನೆ ನೀಡಲಾಗುತ್ತಿದೆ’ ಎಂದು ಆಂಜನೇಯ ರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.