ಚಿಕ್ಕಬಳ್ಳಾಪುರ: ‘ಎಚ್.ಎನ್.ವ್ಯಾಲಿ ಮತ್ತು ಕೆ.ಸಿ ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ಧೀಕರಣವಾದರೆ ಅದು ಕುಡಿಯಲು ಬಳಕೆ ಆಗುತ್ತದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. ಸಚಿವರು, ಅಧಿಕಾರಿಗಳು ಈ ಮೂರು ಹಂತದಲ್ಲಿ ಶುದ್ಧೀಕರಿಸಿದ ನೀರು ಕುಡಿಯಲಿ. ಆಗ ನಾವು ಎರಡನೇ ಹಂತದ ಸಂಸ್ಕರಣೆಯೇ ಸರಿ ಎಂದು ಒಪ್ಪಿಕೊಳ್ಳುತ್ತೇವೆ. ಮೂರು ಹಂತದ ಸಂಸ್ಕರಣೆಗೆ ಆಗ್ರಹಿಸುವುದಿಲ್ಲ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ಸವಾಲು ಹಾಕಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, ಈಗಾಗಲೇ ಕಬ್ಬನ್ ಪಾರ್ಕ್, ಲಾಲ್ಬಾಗ್ನಲ್ಲಿ ಕೊಳಚೆ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಅಲ್ಲಿನ ಉದ್ಯಾನಕ್ಕೆ ಬಳಸಲಾಗುತ್ತಿದೆ. ಯಲಹಂಕ ಘಟಕದಿಂದ ವಿಮಾನ ನಿಲ್ದಾಣಕ್ಕೆ ಮೂರು ಹಂತದ ಶುದ್ಧೀಕರಣದ ನೀರು ಪೂರೈಸಲಾಗುತ್ತಿದೆ. ವಿಮಾನ ನಿಲ್ದಾಣದ ಶೌಚಾಲಯ ಮತ್ತು ಉದ್ಯಾನ ನಿರ್ವಹಣೆಗೆ ನೀರು ಬಳಕೆ ಆಗುತ್ತಿದೆ ಎಂದರು.
ಇಲ್ಲಿಗೆ ಪೂರೈಕೆ ಆಗುತ್ತಿರುವ ನೀರನ್ನು ಡಾ.ಎಂ.ಸಿ.ಸುಧಾಕರ್ ಮತ್ತು ಅಧಿಕಾರಿಗಳು ತಮ್ಮ ಮನೆಗಳಲ್ಲಿ ಕುಡಿಯಲು ಬಳಸಬೇಕು ಎಂದು ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆಯ ಕಾಮಗಾರಿ ಎಷ್ಟು ಪೂರ್ಣವಾಗಿದೆ, ಎಷ್ಟು ವೆಚ್ಚವಾಗಿದೆ ಎಂದು ಹೇಳಿದ್ದಾರೆಯೇ ಹೊರತು ನೀರಿನ ಲಭ್ಯತೆ ಬಗ್ಗೆ ಮಾತನಾಡಿಲ್ಲ. ಎತ್ತಿನಹೊಳೆ ನೀರಿನ ಲಭ್ಯತೆ ಎಂಟು ಟಿಎಂಸಿ ಅಡಿ ಎಂದು ವೈಜ್ಞಾನಿಕ ಅಧ್ಯಯನಗಳು, ಸಂಸ್ಥೆಗಳು ಹೇಳುತ್ತಿದ್ದರೂ ಸರ್ಕಾರ 24 ಟಿಎಂಸಿ ಅಡಿ ಎಂದು ಸುಳ್ಳು ಹೇಳುತ್ತಿದೆ ಎಂದು ದೂರಿದರು.
‘ಎಚ್.ಎನ್.ವ್ಯಾಲಿ, ಕೆ.ಸಿ ವ್ಯಾಲಿ ಯೋಜನೆ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಿ ಕೆರೆಗಳಿಗೆ ಹರಿಸಬೇಕು ಎನ್ನುವ ನಮ್ಮ ಆಗ್ರಹವನ್ನು ಸರ್ಕಾರ ತಿರಸ್ಕರಿಸಿದೆ. ಈ ಬಗ್ಗೆ ನಮಗ ಉಳಿದಿರುವುದು ಜನಜಾಗೃತಿಯೊಂದೇ’ ಎಂದರು.
ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ಉಪೇಕ್ಷೆ ಮಾಡುತ್ತಿದೆ. ಸಚಿವ ಸಂಪುಟ ಸಭೆಯಲ್ಲಿನ ತೀರ್ಮಾನಗಳೇ ಇದಕ್ಕೆ ನಿದರ್ಶನ. ನೀರೇ ಬಾರದ ಎತ್ತಿನಹೊಳೆಯಿಂದ ನೀರು ಕೊಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.
ತ್ಯಾಜ್ಯ ನೀರು ಬಳಕೆಗೆ ಮಾರ್ಗಸೂಚಿಗಳು ಇವೆ. ಆದರೆ ಆ ಮಾರ್ಗಸೂಚಿ ಉಲ್ಲಂಘನೆ ಆಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಷ್ಟ್ರೀಯ ಹಸಿರು ಮಂಡಳಿ ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಪತ್ರ ಬರೆದಿವೆ ಎಂದರು.
ಮೂರನೇ ಹಂತದ ಶುದ್ಧೀಕರಣದ ಬಗ್ಗೆ ರೈತರು ಬಂದು ಕೇಳಲಿಲ್ಲ ಎಂದು ಮುಖ್ಯಮಂತ್ರಿ ಉಡಾಫೆ ಉತ್ತರ ನೀಡಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರು ಆತ್ಮವಂಚನೆಯಿಂದ ಮಾತನಾಡುತ್ತಿದ್ದಾರೆ ಎಂದರು.
‘ನಮ್ಮ ಜೊತೆ ಹೋರಾಟಕ್ಕೆ ಬಂದ ಡಾ.ಎಂ.ಸಿ.ಸುಧಾಕರ್ ಅವರ ಬಗ್ಗೆ ಅಪಾರ ನಂಬಿಕೆಗಳು ಇದ್ದವು. ಆದರೆ ಹೋರಾಟವನ್ನು ರಾಜಕೀಯ ಪ್ರೇರಿತ ಎಂದಿದ್ದು ಅಪಪ್ರಚಾರದ ಮಾತು’ ಎಂದು ಖಂಡಿಸಿದರು.
ಚೆಕ್ ಡ್ಯಾಂ ನಿರ್ಮಿಸಿದರೆ ಅಂತರ್ಜಲ ಅಭಿವೃದ್ಧಿ ಆಗುತ್ತದೆ ಎನ್ನುತ್ತಾರೆ. ಆದರೆ ಮೂರು ಜಿಲ್ಲೆಗಳಲ್ಲಿ 5,400 ಕೆರೆಗಳಿವೆ. ಸಾವಿರಾರು ಕಿ.ಮೀ ರಾಜಕಾಲುವೆ ಇದೆ. ಇದನ್ನು ಪುನಶ್ಚೇತನಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಮುಂದಿನ ಚುನಾವಣೆಗೆ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಟೀಕಿಸಿದರು.
ನೀರಾವರಿ, ರೈತ ಹಾಗೂ ಕನ್ನಡ ಸಂಘಟನೆಗಳ ಮುಖಂಡರಾದ ಮಳ್ಳೂರು ಹರೀಶ್, ಲಕ್ಷ್ಮಯ್ಯ, ಲಕ್ಷ್ಮಿನಾರಾಯಣ್, ಸುಷ್ಮಾ ಶ್ರೀನಿವಾಸ್, ಉಷಾ ಆಂಜನೇಯ ರೆಡ್ಡಿ, ಕಿರಣ್ ನಾಯಕ್, ಮಂಚನಬಲೆ ಶ್ರೀನಿವಾಸ್, ರವಿಕುಮಾರ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
Cut-off box - ‘ಕಾಂಗ್ರೆಸ್ ವಿರುದ್ಧ ಮತಕ್ಕೆ ಕರೆ ಕೊಡುವಿರಾ’ ಮುಂದಿನ ಎರಡು ವರ್ಷಗಳಲ್ಲಿ ಎತ್ತಿನಹೊಳೆ ನೀರು ಹರಿಯದಿದ್ದರೆ 75 ಲಕ್ಷ ಜನರು ಕಾಂಗ್ರೆಸ್ ವಿರುದ್ಧ ಮತಚಲಾಯಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಡುವರೇ ಎಂದು ಆಂಜನೇಯ ರೆಡ್ಡಿ ಪ್ರಶ್ನಿಸಿದರು. ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ಯೋಜನೆ ವ್ಯಾಪ್ತಿಯ ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಸಿದ್ದರಾಮಯ್ಯ ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ತಿಳಿಸಿದ್ದರು. ಜನಪ್ರತಿನಿಧಿಗಳು 2 ವರ್ಷದಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಯುತ್ತದೆ ಎಂದು ಹೇಳುತ್ತಲೇ 11 ವರ್ಷಗಳಾಗಿವೆ ಎಂದರು.
Cut-off box - ಮುಕ್ತಸಂವಾದಕ್ಕೆ ಆಹ್ವಾನ ನೀರಾವರಿ ವಿಚಾರವಾಗಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಕೆ.ಎಚ್.ಮುನಿಯಪ್ಪ ಕೃಷ್ಣಬೈರೇಗೌಡ ಅವರು ನಮ್ಮ ಜೊತೆ ಮುಕ್ತ ಸಂವಾದ ನಡೆಸಲಿ. ಅವರೇ ಹೇಳಿದ ಸಮಯ ಸ್ಥಳಕ್ಕೆ ನಾವು ತೆರಳಿ ಮಾತುಕತೆ ನಡೆಸುತ್ತೇವೆ ಎಂದು ಆಂಜನೇಯ ರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.