ADVERTISEMENT

ಅಂಗನವಾಡಿಗೆ ಬಯೋಮೆಟ್ರಿಕ್: ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 8:55 IST
Last Updated 7 ಏಪ್ರಿಲ್ 2011, 8:55 IST
ಅಂಗನವಾಡಿಗೆ ಬಯೋಮೆಟ್ರಿಕ್: ನಿರ್ಧಾರ
ಅಂಗನವಾಡಿಗೆ ಬಯೋಮೆಟ್ರಿಕ್: ನಿರ್ಧಾರ   

ಕೊಪ್ಪ: ಅಂಗನವಾಡಿ ಮಕ್ಕಳ ಹಾಜರಾತಿ ಪರಿಶೀಲನೆಗೆ ಅನುಕೂಲವಾಗುವಂತೆ ಬಯೋಮೆಟ್ರಿಕ್ ಪದ್ಧತಿ ಅಳವಡಿಸಲು ತಾಲ್ಲೂಕು ಅಭಿವೃದ್ದಿ ಪರಿಶೀಲನಾ ಸಭೆ ನಿರ್ಧರಿಸಿದೆ.
ತಾ.ಪಂ.ಅಧ್ಯಕ್ಷೆ ಪ್ರೇಮಾ ದಾಮೋದರಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾಲ್ಲೂಕು ತ್ರೈಮಾಸಿಕ ಅಭಿವೃದ್ದಿ ಪರಿಶೀಲನಾ ಸಭೆಯಲ್ಲಿ ಜಿ.ಪಂ.ಸದಸ್ಯ ಕುಕ್ಕುಡಿಗೆ ರವೀಂದ್ರ ಮಾತನಾಡಿ, ತಾಲ್ಲೂಕಿನ ಅಂಗನವಾಡಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಹಾಜರಾತಿ ಕುರಿತು ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂಬ ದೂರಿದೆ. ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಕಾಲಕಾಲಕ್ಕೆ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸುವ ಅಗತ್ಯವಿದೆ ಎಂದರಲ್ಲದೆ ಬಯೋಮೆಟ್ರಿಕ್ ಅಳವಡಿಸಿ ಹಾಜರಾತಿ ಪಡೆಯುವಂತೆ ಆಗ್ರಹಿಸಿದರು.

ಶಿಶುಕಲ್ಯಾಣ ಇಲಾಖೆಯಲ್ಲಿ ವೇತನ ಅನುದಾನವಾಗಿ ಬಂದು ಖರ್ಚಾಗದೆ ಉಳಿದಿರುವ ರೂ.67ಲಕ್ಷ ಬಳಕೆ ಮಾಡಿ ಅಂಗನವಾಡಿಗಳಿಗೆ ಪೀಠೋಪಕರಣ ಹಾಗೂ ಅಡುಗೆ ಅನಿಲ ಸರಬರಾಜಿಗೆ ಕ್ರಮ ವಹಿಸುವಂತೆ ಅವರು ಸೂಚಿಸಿದರು. ಜಿ.ಪಂ.ಸದಸ್ಯೆ ಸುಚೇತ ನರೇಂದ್ರ ಮಾತನಾಡಿ, ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ವೇಳೆ ಒಣ ಆಹಾರ ನೀಡುತ್ತಿರುವುದು ಸರಿಯಲ್ಲ, ಜೊತೆಗೆ ಹಾಲು ವಿತರಿಸಲು ಕ್ರಮ ವಹಿಸಬೇಕೆಂದರು.

 ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸಮೂರ್ತಿ ಸಭೆಗೆ ವರದಿ ನೀಡಿ ಆರೋಗ್ಯ ರಕ್ಷಾಕವಚ 108 ಆರಂಭವಾಗಿ ಇಲ್ಲಿಯವರೆಗೆ ರೂ.20ಲಕ್ಷ ವೆಚ್ಚವಾಗಿದೆ ಎಂದರು. ಗ್ರಾಮ ಆರೋಗ್ಯ ಸಮಿತಿಗಳ ಖರ್ಚು ವೆಚ್ಚಗಳ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಸದಸ್ಯರು ಒತ್ತಾಯಿಸಿದರು.

ತಾಲ್ಲೂಕಿನ ಪಶು ವೈದ್ಯಕೀಯ ವಿಭಾಗಕ್ಕೆ ಗ್ರಾಮಪಂಚಾಯಿತಿಗಳು ತಲಾ ರೂ.10 ಸಾವಿರ ಪಾವತಿಸಬೇಕಾಗಿದ್ದು, ಅತ್ತಿಕೊಡಿಗೆ ಹಾಗೂ ಹಿರೆಗದ್ದೆ ಗ್ರಾ.ಪಂ.ಹೊರತುಪಡಿಸಿ ಮಿಕ್ಕ ಪಂಚಾಯಿತಿಗಳಲ್ಲಿ ಕೇವಲ ರೂ.5 ಸಾವಿರ ಅನುದಾನ ನೀಡಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕಳೆದ ಎರಡು ವರ್ಷದಿಂದ ಸರ್ಕಾರ ಶಾಸನಬದ್ದ ಅನುದಾನ ನೀಡದಿರುವುದರಿಂದ ಹಣಪಾವತಿ ವಿಳಂಬವಾಗಿದೆ ಎಂದು ಪಂಚಾಯಿತಿ ಕಾರ್ಯದರ್ಶಿ ಸಮಾಜಾಯಿಸಿ ನೀಡಿದರು.

 ಕರಿಮನೆ ಶ್ರೀರಾಮ ಸೇವಾ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ವಿತರಿಸಿದ ರೂ.14 ಕೋಟಿ ಸಾಲ ಬಾಕಿ ಉಳಿದಿದ್ದು, ಕೇವಲ ಶೇ.16ರಷ್ಟು ವಸೂಲಾತಿ ಆಗಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ರೈತರ ಮನವೊಲಿಸಿ ಮರುಪಾವತಿ ಅಧಿಕಗೊಳಿಸಲು ಸೂಚಿಸಲಾಯಿತು.ಸಭೆಯಲ್ಲಿ ತಾ.ಪಂ.ಸದಸ್ಯ ಪಳನಿ,ಪೂರ್ಣಚಂದ್ರ, ಲಲಿತ, ಇ.ಓ.ತಿಪ್ಪೇಶ್ ಹಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.