ADVERTISEMENT

`ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ'

ಮಾಜಿ ಸಚಿವ ಸಿ.ಆರ್.ಸಗೀರ್ ಅಹಮದ್ ಆರೋಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 7:04 IST
Last Updated 13 ಏಪ್ರಿಲ್ 2013, 7:04 IST

ಚಿಕ್ಕಮಗಳೂರು: ಸಿರಿಗೆರೆ ತರಳಬಾಳು ಸ್ವಾಮೀಜಿ ಸಮ್ಮುಖದಲ್ಲಿ ಭ್ರಷ್ಟಾಚಾರ ರಹಿತ ಮತ್ತು ಮತದಾರರಿಗೆ ಯಾವುದೇ ಆಮಿಷವೊಡ್ಡದೆ ಚುನಾ ವಣೆ ನಡೆಸುವುದಾಗಿ ಪ್ರಮಾಣ ಮಾಡಿ, ಈಗ ರಾತ್ರೋರಾತ್ರಿ ಬಿಜೆಪಿ ಕಾರ್ಯಕರ್ತರು ಹೆಂಡ, ಸೀರೆ, ಉಂಗುರ ಹಂಚುತ್ತಿದ್ದಾರೆ. ನೀತಿ ಸಂಹಿತೆ ಜಾರಿ ಯಲ್ಲಿದ್ದರೂ ಅಭಿವೃದ್ಧಿ ಕೆಲಸಗಳು ನಡೆ ಯುತ್ತಿವೆ. ಆದರೂ ಚುನಾವಣಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳ ದಿರುವುದು ದುರದೃಷ್ಟಕರ ಎಂದು ಮಾಜಿ ಸಚಿವ ಸಿ.ಆರ್.ಸಗೀರ್ ಅಹಮದ್ ಆರೋಪಿಸಿದರು.

ಎನ್.ಎಂ.ಸಿ. ವೃತ್ತದ ಬಳಿ ಚಿಕ್ಕ ಮಗಳೂರು ವಿಧಾನಸಭೆ ಕ್ಷೇತ್ರದ ಚುನಾವಣೆ ಪ್ರಚಾರ ಕಚೇರಿ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯ ಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಸರ್ಕಾರದಲ್ಲಿ ಶಾಸಕರಿಂದಿಡಿದು ಸಚಿವರವೆಗೂ ಜೈಲಿಗೆ ಹೋಗಿ ಬಂದಿದ್ದಾರೆ. ಬಿಜೆಪಿ ಸರ್ಕಾರ ಹತ್ತು ಹಲವು ಭ್ರಷ್ಟಾಚಾರಗಳಲ್ಲಿ ತೊಡಗಿ ಮಾನ ಕಳೆದುಕೊಂಡಿದೆ. ಸ್ಥಳೀಯ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ ಹೊಡೆದು, ಸ್ವಂತಕ್ಕೆ `ಆಶ್ರಯ ಮನೆ' ಕಟ್ಟಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಲೋಕಸಭೆ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದಂತೆ ವಿಧಾನಸಭೆ ಚುನಾವಣೆಯಲ್ಲೂ ಬೆಂಬಲಿಸಿ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಭ್ರಷ್ಟರನ್ನು ಸೋಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯೇ ಇಲ್ಲದೆ ಗುತ್ತಿಗೆದಾರರಿಗೆ ಟಿಕೆಟ್ ನೀಡಿದ್ದೇವೆ ಎಂದು ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ. ಶಾಂತೇಗೌಡರ ಜಲ್ಲಿ ಕ್ರಷರ್ ಕಸಿದುಕೊಂಡು, ಸಚಿವರೇ ಗುತ್ತಿಗೆದಾರರಾಗಲು ಹೊರಟರೆ, ಗುತ್ತಿ ಗೆದಾರರಾಗಿದ್ದವರು ಜನಪ್ರತಿನಿಧಿಯಾಗುವುದು ತಪ್ಪೇ? ಎಂದು ಮೂರ್ತಿ ಪ್ರಶ್ನಿಸಿದರು.

ಅಭ್ಯರ್ಥಿ ಕೆ.ಎಸ್.ಶಾಂತೇಗೌಡ ಮಾತನಾಡಿ, ಕಾರ್ಯಕರ್ತರ ಅಪೇಕ್ಷೆಯಂತೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಶ್ರಮ ಹಾಕಿ ಪಕ್ಷ ಸಂಘಟಿಸಬೇಕು. ಇದು ಕೇವಲ ಸ್ಪರ್ಧೆಯಲ್ಲ. ಭ್ರಷ್ಟಾಚಾರ ಮತ್ತು ಉತ್ತಮ ಆಡಳಿತದ ಮಧ್ಯೆ ನಡೆಯುತ್ತಿರುವ ಆಯ್ಕೆಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಉರಾಳ್, ಪಕ್ಷದ ಮುಖಂಡರಾದ ಪರಮೇಶ್, ಕೆ.ಮಹ ಮ್ಮದ್, ಎನ್.ಮಹೇಶ್, ಕೆಂಗೇಗೌಡ, ಮಂಜುನಾಥ್, ದೇವೇಗೌಡ,  ಆರತಿ ನಾರಾಯಣ್ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.