ADVERTISEMENT

ಅಮೃತ ಮಹಲ್‌ ಅವ್ಯವಸ್ಥೆ:ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 10:11 IST
Last Updated 25 ಸೆಪ್ಟೆಂಬರ್ 2013, 10:11 IST

ತರೀಕೆರೆ(ಲಿಂಗದಹಳ್ಳಿ): ತರೀಕೆರೆ ಸಮೀಪದ ಲಿಂಗದಹಳ್ಳಿ ಅಮೃತ ಮಹಲ್ ಕಾವಲು ತಳಿ ಸಂವರ್ಧನ ಕೇಂದ್ರ ಅವ್ಯವಸ್ಥೆಯ ಬಗ್ಗೆ ಹಲವು ದೂರುಗಳು ಬಂದ  ಹಿನ್ನೆಲೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಸೋಮ ವಾರ ಭೇಟಿ ನೀಡಿ ಪರಿಶೀಲಿಸಿದರು.

ಪರಿಶೀಲನೆಗೆ ತೆರಳುತ್ತಿರುವ ವಿಚಾರ ತಿಳಿದ ಅಧಿಕಾರಿಗಳು ತರಾತುರಿಯಲ್ಲಿ ಸ್ವಚ್ಛಗೊಳಿಸುತ್ತಿರುವುದು ಕಂಡು ಬಂದು ಶಾಸಕರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ತಕ್ಷಣವೇ  ವ್ಯವಸ್ಥೆಯನ್ನು ಸರಿಪಡಿಸಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.

ಹಸುಗಳ ಮೇವು ಮತ್ತು ಆಹಾರ ಚೀಲ ದಾಸ್ತಾನು ಪರಿಶೀಲನೆಗೆ ಮುಂದಾದ ಶಾಸಕರಿಗೆ ದಾಸ್ತಾನು ಕೊಠಡಿಯ ಬೀಗ ಇಲ್ಲದೇ  ಕೆಲಹೊತ್ತು ಪರದಾಡಿದ ಪ್ರಸಂಗ ಕಂಡುಬಂದಿತು . ಸ್ವಚ್ಛತೆಗೆ ನೇಮಕ ಗೊಂಡಿರುವ ನೌಕರರು ಸರಿಯಾಗಿ ಕೆಲಸಕ್ಕೆ ಬಾರದೇ  ತಿಂಗಳ ಸಂಬಳ ಮಾತ್ರ ಪಡೆಯುತ್ತಿದ್ದಾರೆ   ಮತ್ತು ಗುತ್ತಿಗೆ ಆಧಾರದಲ್ಲಿ ನೇಮಿಸಿ ಕೊಂಡಿರುವ ನೌಕರರು ಬೇರೆಡೆಗೆ ಕೆಲಸಕ್ಕೆ ಹೋಗುತ್ತಿದ್ದು, ಗುತ್ತಿಗೆ ನೀಡಿರುವ ಮಾಲೀಕರು ಮಾತ್ರ ಪ್ರತಿ ತಿಂಗಳು ಬಿಲ್ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.

ADVERTISEMENT

ಹಸುಗಳ ಮೇವು ಮತ್ತು ಆಹಾರ ಚೀಲ ಪದೇ ಪದೇ ದಾಸ್ತಾನು ಕೊಠಡಿಯಿಂದ ಕಳ್ಳತನವಾಗುತ್ತಿದ್ದು , ಬೇರೆಡೆಗೆ ಮಾರಿಕೊಳ್ಳುತ್ತಿದ್ದಾರೆ ಎಂಬ ಸ್ಥಳೀಯರ ದೂರನ್ನು ಪರಿಗಣಿಸಿದ  ಶಾಸಕರು  ದಾಸ್ತಾನು ಪರಿಶೀಲಿಸಿ , ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಸುಗಳ ಆಹಾರ ಚೀಲ ಕಳವು:  ಅಮೃತ್ ಮಹಲ್ ಕೇಂದ್ರದಲ್ಲಿ ಹಸುಗಳಿಗೆ ಶೇಖರಿಸಿಟ್ಟದ್ದ ಆಹಾರ ಚೀಲಗಳು ಕಳವು ಆಗಿರುವ ವಿಚಾರ ಬೆಳಕಿಗೆ ಬಂದಿದೆ.

ತಳಿ ಸಂವರ್ಧನ ಕೇಂದ್ರದ ಗುತ್ತಿಗೆ ನೌಕರ ಕೇಶವಮೂರ್ತಿ ಹಾಗೂ ಉಮೇಶ್ ಮತ್ತು ಲಿಂಗದಹಳ್ಳಿ ವಸಂತ್ ಎಂಬುವರು ಭಾನುವಾರ ರಾತ್ರಿ ಬೈಕ್‌ನಲ್ಲಿ  ₨1041 ಬೆಲೆಯ 50 ಕೆಜಿಯ  2 ಆಹಾರ ಚೀಲಗಳನ್ನು  ಕಳ್ಳತನದಿಂದ ಸಾಗಿಸುತ್ತಿದ್ದ ಸಂದರ್ಭ ದಲ್ಲಿ ಸ್ಥಳೀಯರು ನೀಡಿದ ದೂರಿನ ಮೇಲೆ ಲಿಂಗದಹಳ್ಳಿ ಪೊಲೀ ಸರು ದಾಳಿ ನಡೆಸಿ  ಉಮೇಶ್ ಮತ್ತು ಕೇಶವಮೂರ್ತಿಯನ್ನು ಬಂಧಿಸಿದ್ದಾರೆ.

ಪ್ರಕರಣದ ವಿಚಾರಣೆ ಸಮಯದಲ್ಲಿ ಬಂಧಿತ ಆರೋಪಿಗಳು  ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಂಜುಂಡಸ್ವಾಮಿಯವರ ಸಹೋದರ ವಸಂತ ಸಹಾ ಕೃತ್ಯದಲ್ಲಿ ಭಾಗಿಯಾ ಗಿರುವುದಾಗಿ ತಿಳಿಸಿದ್ದು,  ವಸಂತನನ್ನು ಬಂಧಿಸಲು ಮುಂದಾದ ಪೊಲೀಸರಿಗೆ ಆತ ಪರಾರಿಯಾಗಿರುವ ವಿಚಾರ ತಿಳಿದುಬಂದಿದೆ. ಕೃತ್ಯಕ್ಕೆ ಬಳಸಿ ರುವ ಬೈಕನ್ನು   ವಶಪಡಿಸಿ ಕೊಂಡು ಮೂವರ  ವಿರುದ್ಧ ಪ್ರಕರಣ ದಾಖಲಿಸ ಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.