ADVERTISEMENT

ಎಚ್ಐವಿ ಸೋಂಕಿತರಿಗೆ ತೊಂದರೆ ನೀಡಿದರೆ ದಂಡ: ನ್ಯಾಯಾಧೀಶೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 6:03 IST
Last Updated 18 ಡಿಸೆಂಬರ್ 2013, 6:03 IST

ಚಿಕ್ಕಮಗಳೂರು: ಸಮಾಜದಲ್ಲಿ ಎಚ್‌ಐವಿ ಪೀಡಿತರಿಗೆ ತೊಂದರೆ ಉಂಟು ಮಾಡುವವರಿಗೆ ದಂಡ ವಿಧಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದು  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಸ್.ಕಮಲ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ತಡೆಗಟ್ಟುವ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳ ವಾರ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಎಚ್ಐವಿ ಪೀಡಿತರ ಬಗ್ಗೆ ಸಮಾಜ ದಲ್ಲಿರುವ ತಾರತಮ್ಯ ಹೋಗಲಾಡಿಸಿ ಎಚ್‌ಐವಿ ಸೋಂಕು ಹೊಂದಿರುವ ವ್ಯಕ್ತಿಗಳನ್ನು ಪ್ರೀತಿಯಿಂದ ಕಾಣಬೇಕು, ಸಮಾಜದಲ್ಲಿ ಅವರು ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ತಿಳಿಸಬೇಕು ಎಂದ ಅವರು ಜನರಲ್ಲಿ ಎಚ್ಐವಿ ಸೋಂಕು ಹರಡುವುದನ್ನು ತಡೆಯಲು ಜಾಗೃತಿ ಮೂಡಿಸುವ ಮೂಲಕ ಎಚ್‌ಐವಿ ಸೋಂಕು ಹರಡುವುದನ್ನು ಕಡಿಮೆ ಮಾಡಬೇಕು ಎಂದರು.

ನಗಾರಿ ಬಾರಿಸುವ ಮೂಲಕ ಕಲಾ ತಂಡದ ಉದ್ಘಾಟಿಸಿ ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಮಾತನಾಡಿ, ಅಧಿಕಾರಿಗಳು ಜನರಲ್ಲಿ ಪ್ರಮುಖವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುವಂತೆ ಅರಿವು ಮೂಡಿಸಬೇಕಾಗಿದೆ. ಎಚ್‌ಐವಿ ಸೋಂಕು ಮತ್ತು ಇನ್ನಿತರ ರೋಗಗಳ ಹರಡುವಿಕೆಗೆ ನಮ್ಮಲ್ಲಿನ ಜ್ಞಾನದ ಕೊರತೆ ಕಾರಣ, ಪಾಶ್ವಿಮಾತ್ಯ ರಾಷ್ಟ್ರಗಳಲ್ಲಿ ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಎಚ್ಐವಿ ಸೋಂಕಿತರನ್ನು ಪ್ರೀತಿಯಿಂದ ಕಾಣಬೇಕು ಅವರಿಗೆ ಎಲ್ಲಾ ಸವಲತ್ತುಗಳನ್ನು ನೀಡಬೇಕಲ್ಲದೆ ಸಮಾಜದಲ್ಲಿ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕೆಂದು ಹೇಳಿದರು.

  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತೀರ್ಥನಾಥ್ ಮಾತನಾಡಿ, 2011 ರ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ 34.2 ಮಿಲಿಯನ್ ಜನರು ಎಚ್‌ಐವಿ ಸೋಂಕಿತರಾ ಗಿದ್ದಾರೆ. ಪ್ರತಿ ದಿನ 7400 ಜನರು ಎಐವಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಶೇ.90 ರಷ್ಟು ಮಧ್ಯಮ ವರ್ಗದ ಜನರು ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಈ ಸೋಂಕಿಗೆ ಬಲಿಯಾಗುತ್ತಿದ್ದರೆ.  ಕರ್ನಾಟಕದಲ್ಲಿ ಶೇ. 0.69ರಷ್ಟು ಎಚ್‌ಐವಿ ಪೀಡಿತರಿದ್ದು, ಕರ್ನಾಟಕ 5ನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಮಹಾರಾಷ್ಟ್ರ 2ನೇ ಸ್ಥಾನದಲ್ಲಿ, ಆಂಧ್ರಪ್ರದೇಶ, ಮೂರನೇ ಸ್ಥಾನದಲ್ಲಿ ಮಿಜೋರಾಂ ಹಾಗೂ ನಾಲ್ಕನೇ ಸ್ಥಾನದಲ್ಲಿ ನಾಗಲ್ಯಾಂಡ್ ಇದೆ. ಪ್ರತಿ ವರ್ಷ ಎಚ್‌ಐವಿ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವುದು ಎಂದರು.

  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಆಯ್ದ 60 ಗ್ರಾಮಗಳಲ್ಲಿ ಎಚ್‌ಐವಿ ಕುರಿತು ಅರಿವು ಮೂಡಿಸುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ.  ಎಚ್‌ಐವಿ ಅರಿವು ಮೂಡಿಸಲು ಸಮಾಜ ಸೇವಕ ಹಾಗೂ ರಾಷ್ಟ್ರೀಯ ಕ್ರೀಡಾಪಟು ಉಮಾಪತಿ ಮೊದಲಿಯಾರ್‌ ನೇತೃತ್ವ ದಲ್ಲಿ ಜಿಲ್ಲಾ ಮೈದಾನದಿಂದ ಬೋಳ ರಾಮೇಶ್ವರ ದೇವಸ್ಥಾನ, ಹನುಮಂತಪ್ಪ ವೃತ್ತ, ಎಂ. ಜಿ ರಸ್ತೆ, ಆಜಾದ್‌ಪಾರ್ಕ್ ಮಾರ್ಗವಾಗಿ ಜಿಲ್ಲಾ ಮೈದಾನ ದವರೆಗೆ ಸೈಕಲ್‌ ಜಾಥಾ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾಹುಲಿಯಪ್ಪ ಗೌಡ   ಸೈಕಲ್ ಜಾಥಾ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಪಿ.ಬಿ ಕರುಣಾಕರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಎಂ. ಮಹಾದೇವಯ್ಯ, ಜಿಲ್ಲಾ ಶಸ್ತ್ರ ಚಿಕಿತ್ಸಾಧಿಕಾರಿ ಡಾ. ದೊಡ್ಡಮಲ್ಲಪ್ಪ, ಜಿಲ್ಲಾ ಅಣ್ಯ ಸಂರಕ್ಷಣಾಧಿಕಾರಿ ರವಿ ರಾಜ್‌ ನಾರಾಯಣ್‌, ಕ್ಷೇತ್ರ ಶಿಕ್ಷಣಾ ಧಿಕಾರಿ ರಾಜೇಗೌಡ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.