ಕಡೂರು: ತಾಲ್ಲೂಕಿನ ಗ್ರಾಮೀಣ ರಸ್ತೆಗಳಿಗೆ ಗುಣಮಟ್ಟದ ಡಾಂಬರೀಕರಣ ಮಾಡಲಾಗುವುದು ಎಂದು ಶಾಸಕ ಡಾ.ವೈ.ಸಿ.ವಿಶ್ವನಾಥ್ ತಾಲ್ಲೂಕಿನ ತುರವನಹಳ್ಳಿ ಬಂಟಗನಹಳ್ಳಿ ರಸ್ತೆ ಡಾಂಬರೀಕರಣಕ್ಕೆ ಶನಿವಾರ ಬಂಟಗನಹಳ್ಳಿ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗುಣಮಟ್ಟದ ಕಾಮಗಾರಿಗಳು ನಡೆಯಬೇಕು, ಗ್ರಾಮಸ್ಥರು ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಿ ಕಳಪೆ ಕಂಡು ಬಂದಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಬೇಕು ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.
ಜನರು ನೀಡುವ ತೆರಿಗೆಯ ಹಣದಿಂದ ಇಂತಹ ಕಾಮಗಾರಿಗಳು ನಡೆಯುತ್ತಿವೆ. ಆದ್ದರಿಂದ ಕಾಮಗಾರಿ ಗುಣಮಟ್ಟ ಪರೀಕ್ಷಿಸಿ ಎಂದು ಮನವಿ ಮಾಡಿದರು.
ತುರುವನಹಳ್ಳಿ, ಬಂಟಗನಹಳ್ಳಿ ರಸ್ತೆ ಡಾಂಬರೀಕರಣಕ್ಕೆ ರೂ. 90 ಲಕ್ಷ, ಮೇಲನಹಳ್ಳಿ ಹಿರೇನಲ್ಲೂರು ಕೂಡುವ ರಸ್ತೆಗೆ ರೂ. 75 ಲಕ್ಷ, ಗಿರಿಯಾಪುರ ಅಜ್ಜಂಪುರ ಕೂಡುವ ರಸ್ತೆಗೆ ರೂ. 90 ಲಕ್ಷ, ಬಿಳುವಾಲ ಮಾದಾಪುರಮಠದವರೆಗಿನ ರಸ್ತೆ ನಿರ್ಮಾಣಕ್ಕೆ ರೂ. 90 ಲಕ್ಷಗಳಲ್ಲಿ ಕಾಮಗಾರಿ ಆರಂಭಿಸಲಾಯಿತು.
ಗ್ರಾಮೀಣ ರಸ್ತೆಗಳ ನಿರ್ವಹಣೆ ಸರಿಯಾದ ರೀತಿಯಲ್ಲಿ ನಡೆಯಬೇಕಾಗಿದ್ದು, ನಬಾರ್ಡ್, ಆರ್ಡಿಆರ್ಎಫ್, ಒಆರ್ಎಫ್, 50,54 ಯೋಜನೆಗಳಲ್ಲಿ ಅನುದಾನ ಮಂಜೂರಾಗಿರುವುದಾಗಿ ತಿಳಿಸಿದರು.
ಅಂತರ್ಜಲ ಹೆಚ್ಚಿಸಲು 5 ಕೋಟಿಗೂ ಹೆಚ್ಚಿನ ಅನುದಾನದಲ್ಲಿ 26 ದೊಡ್ಡ, 50 ಚಿಕ್ಕ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುತ್ತಿದ್ದು, ಬತ್ತುತ್ತಿರುವ ಕೆರೆ ಕಟ್ಟೆಗಳಲ್ಲಿ ಮಳೆಯ ನೀರು ನಿಂತು ಅಂತರ್ಜಲ ಹೆಚ್ಚಿಸಲು ಚೆಕ್ ಡ್ಯಾಂಗಳು ಸಹಾಯವಾಗಲಿವೆ ಎಂದರು.
ಬಂಟಗನಹಳ್ಳಿ ಮಲ್ಲೇಶಪ್ಪ, ನಿಂಗಪ್ಪ, ಸೀಗೆಹಡ್ಲು ಹರೀಶ್, ಗ್ರಾಮ ಪಂಚಾಯಿತಿ ಸದಸ್ಯೆ ಸುನೀತಾ, ಹೀರೆನಲ್ಲೂರು ಚಂದ್ರಪ್ಪ, ರಮೇಶ್, ಕವಿತಾ, ಗಿರಿಯಾಪುರ, ಮೇಲನಹಳ್ಳಿ ಗ್ರಾಮಸ್ಥರು, ಗುತ್ತಿಗೆದಾರರು, ಎಂಜಿನಿಯರ್ ಬಾಣದ್, ಕಲ್ಲೇಶಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.