ADVERTISEMENT

ಕಾಂಗ್ರೆಸ್–- ಜೆಡಿಎಸ್‌ ವಿಜಯೋತ್ಸವ

ಮೈತ್ರಿ ಸರ್ಕಾರ ರಚನೆ, ಎರಡೂ ಪಕ್ಷಗಳ ಕಾರ್ಯಕರ್ತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಮೇ 2018, 10:04 IST
Last Updated 26 ಮೇ 2018, 10:04 IST

ಕೊಪ್ಪ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಪ್ರಯುಕ್ತ ತಾಲ್ಲೂಕಿನ ಹಲವೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಪಟ್ಟಣದ ಬಸ್ ನಿಲ್ದಾಣದ ಆವರ ಣದಲ್ಲಿ ಸಮಾವೇಶಗೊಂಡ ಎರಡೂ ಪಕ್ಷಗಳ ಕಾರ್ಯಕರ್ತರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಜೆಡಿಎಸ್ ಮುಖಂಡ ಎಚ್.ಜಿ.ವೆಂಕಟೇಶ್ ಪರ ಜೈಕಾರ ಹಾಕುತ್ತಾ, ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಜೆಡಿಎಸ್ ಕ್ಷೇತ್ರಾಧ್ಯಕ್ಷ ಭಂಡಿಗಡಿ ದಿವಾಕರ ಭಟ್ ಮಾತನಾಡಿ, ‘ಜೆಡಿ ಎಸ್-ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಮುಂದಿನ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ನಡೆಸಲು ಸಂಕ ಲ್ಪಿಸಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಉತ್ತಮ ಆಡಳಿತ ನಡೆಸಲು ಶಾಸಕ ಟಿ.ಡಿ.ರಾಜೇಗೌಡರಿಗೆ ನಮ್ಮ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ’ ಎಂದರು.

ADVERTISEMENT

‘ಬಿಜೆಪಿ ದುರಾಡಳಿತದ ಅಂತ್ಯ ಸಮೀಪಿಸುತ್ತಿದೆ. 2019ರ ಚುನಾವಣೆ ಯಲ್ಲಿ ಬಿಜೆಪಿಯೇತರ ಪಕ್ಷಗಳ ಮಹಾ ಮೈತ್ರಿಗೆ ಗೆಲುವಾಗಲಿದೆ’ ಎಂದರು.

ಕಾಂಗ್ರೆಸ್ ಮುಖಂಡರಾದ ಶಶಿಕುಮಾರ್, ಸುಬ್ರಹ್ಮಣ್ಯ ಶೆಟ್ಟಿ, ನಾರ್ವೆ ಅಶೋಕ್, ನವೀನ್ ಮಾವಿನಕಟ್ಟೆ, ರಮೇಶ್ ಶೆಟ್ಟಿ, ಮಹಾಬಲ ಪೂಜಾರಿ, ಕೆ. ಆನಂದ್, ಕೆ.ಎಂ. ಶಿವಶಂಕರ್, ಶಿವರಾಜ್, ಅಬು ಮಹಮ್ಮದ್, ರಶೀದ್, ಈವನ್ ಜೋಯೆಲ್ ‘ಅಂಬೆಡ್ಕರ್ ಧ್ವನಿ’ ಸಂಘಟನೆಯ ರಾಜಾಶಂಕರ್, ಜೆಡಿಎಸ್ ಮುಖಂಡರಾದ ಕೆ.ಎನ್. ಮಂಜುನಾಥ್, ಬದ್ರಿಯಾ ಮಹಮ್ಮದ್, ಕೆ.ಎಂ. ಮಲ್ಲಪ್ಪ, ಎಚ್.ಪಿ. ವಾಸುದೇವ್, ಕೆ.ವೈ.ರಮೇಶ್, ಕುಂಚೂರು ದಿವಾಕರ್, ಫ್ರಾನ್ಸಿಸ್ ಕರ್ಡೋಜ, ಬ್ರಹ್ಮನಕೋಡು ದಿವಾಕರ್, ಶಿವಮೂರ್ತಿ, ಗೌತಮ್, ಜಗದೀಶ್, ಬಿಎಸ್ಪಿಯ ಬಿ.ಎನ್. ಆನಂದ್ ಇದ್ದರು.

‘ಮೈತ್ರಿ ಲೋಕಸಭಾ ಚುನಾವಣೆವರೆಗೂ ಇರಲಿದೆ’

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್ ಮಾತನಾಡಿ, ‘ದೇಶಾದ್ಯಂತ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದರೂ ತುಟಿ ಬಿಚ್ಚದ ಬಿಜೆಪಿಯವರು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಸಾಲಮನ್ನಾದ ಬಗ್ಗೆ ಕೂಗೆಬ್ಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಶೃಂಗೇರಿ ಕ್ಷೇತ್ರದಲ್ಲಿ 15 ವರ್ಷ ಆಡಳಿತ ನಡೆಸಿದ ಬಿಜೆಪಿ ಶಾಸಕರು ಹೆದ್ದಾರಿ ಅಭಿವೃದ್ಧಿಯನ್ನು ತಮ್ಮ ಸಾಧನೆಯೆಂದು ಬಿಂಬಿಸಿದ್ದು ಬಿಟ್ಟರೆ, ಗ್ರಾಮೀಣ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಗ್ರಾಮಿಣ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ’ ಎಂದು ದೂರಿದರು.

‘ಬಂಡವಾಳಶಾಹಿಗಳ ಪರವಿರುವ, ಜನವಿರೋಧಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಲೋಕಸಭಾ ಚುನಾವಣೆವರೆಗೂ ಮುಂದುವರೆಯಲಿದ್ದು, ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಲಿದೆ’ ಎಂದರು.

**
ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಸಹಿಸದ ಬಿಜೆಪಿಯವರು ಕರಾಳ ದಿನ ಆಚರಿಸಿರುವುದು ಅವರ ಹತಾಶ ಮನಸ್ಥಿತಿಗೆ ಸಾಕ್ಷಿಯಾಗಿದೆ
ಭಂಡಿಗಡಿ ದಿವಾಕರ ಭಟ್, ಜೆಡಿಎಸ್ ಕ್ಷೇತ್ರಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.