ಕುದುರೆಮುಖ (ಕಳಸ): ಗಣಿಗಾರಿಕೆ ಸ್ಥಗಿತಗೊಂಡ ನಂತರ ಬಹುತೇಕ ಸ್ತಬ್ಧವಾಗಿರುವ ಕುದುರೆಮುಖ ಪಟ್ಟಣದತ್ತ ಭಾರತೀಯ ಸೇನೆ ನೋಟ ಹರಿಸಿದೆ. ದಟ್ಟ ಕಾನನದ ಹಸಿರು ಸೌಂದರ್ಯದ ಮಡಿಲಲ್ಲಿ ವಿರಾಜಮಾನವಾಗಿರುವ ಪಟ್ಟಣದಲ್ಲಿ ಮಿಲಿಟರಿ ಅಕಾಡೆಮಿ ಸ್ಥಾಪಿಸುವ ಸಾಧ್ಯತೆ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಅಧ್ಯಯನ ನಡೆಸಲು ಸೇನೆಯ ಪ್ರಮುಖ ಅಧಿಕಾರಿಯೊಬ್ಬರು ಕುದುರೆಮುಖ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಕಾಡೆಮಿ ಸ್ಥಾಪನೆಗೆ ಕುದುರೆಮುಖ ಸೂಕ್ತ ಸ್ಥಳವೇ ಎಂದು ತಿಳಿದುಕೊಳ್ಳಲು ದೆಹಲಿಯಿಂದ ಆಗಮಿಸಿದ್ದ ಕರ್ನಲ್ ಪ್ರಕಾಶ್, ಮೂಡಿಗೆರೆ ತಹಸೀಲ್ದಾರ್ ಶಿವೇಗೌಡ ಅವರೊಂದಿಗೆ ಶುಕ್ರವಾರ ಕುದುರೆಮುಖ ಪಟ್ಟಣದ ಪ್ರತಿ ಭಾಗವನ್ನೂ ಸೂಕ್ಷ್ಮವಾಗಿ ಅವಲೋಕಿಸಿದರು.
ಅಕಾಡೆಮಿ ಸ್ಥಾಪನೆಗೆ 500 ಎಕರೆ ಭೂಮಿ ಅವಶ್ಯಕತೆಯಿದ್ದು, ಸಮತಟ್ಟಾದ ಪ್ರದೇಶವಾಗಿರಬೇಕು.ಯೋಧರ ತರಬೇತಿಗೆ ಅನುಕೂಲವಾಗುತ್ತದೆ ಎಂದು ಕರ್ನಲ್ ತಿಳಿಸಿದ್ದಾಗಿ ತಹಸೀಲ್ದಾರ್ ಪ್ರಜಾವಾಣಿಗೆ ಶನಿವಾರ ಮಾಹಿತಿ ನೀಡಿದ್ದಾರೆ.
ಕರ್ನಲ್, ಕುದುರೆಮುಖ ಪಟ್ಟಣದಂಚಿನಲ್ಲೇ ಹರಿಯುವ ಭದ್ರಾ ನದಿಯಿಂದ ವೇರ್ಹೌಸ್ವರೆಗಿನ ಪ್ರದೇಶವನ್ನು( ಸೆಕ್ಟರ್ 4 ಮತ್ತು ಸೆಕ್ಟರ್ 5) ವಿಶೇಷವಾಗಿ ಪರಿಶೀಲಿಸಿದರು. ಸ್ಥಳ ಪರಿಶೀಲನೆ ನಂತರ ಸೇನೆಯ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದರು. ಸೆಕ್ಟರ್ 4-5 ಕಂದಾಯ ಭೂಮಿಯಾಗಿದ್ದು, ಸೇನೆ ಬಯಸಿದಲ್ಲಿ ರಾಜ್ಯ ಸರ್ಕಾರ ಭೂಮಿ ಹಸ್ತಾಂತರಿಸಬಹುದಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.